
ಪ್ರಗತಿವಾಹಿನಿ ಸುದ್ದಿ; ರಾಜ್ಯದಲ್ಲಿ ಉಷ್ಣ ಅಲೆಯ ನಡುವೆಯೇ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ ಬಿದಿದ್ದು, ಹಲವು ಜಿಲ್ಲೆಯಲ್ಲಿ ಅವಾಂತರಗಳು ಸೃಷ್ಟಿಯಾಗಿದೆ.
ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯ ಗಾಳಿಗುಂಡಿಯಲ್ಲಿ ಬೃಹತ್ ಮರ ಬಿದ್ದು ಐದು ಮನೆಗಳ ಮೇಲ್ಚಾವಣಿ ಪುಡಿಪುಡಿಯಾಗಿದೆ. ಕಳಸ ಪಟ್ಟಣದಲ್ಲಿ ಲಾಡ್ಜ್ ಒಂದರ ಮೇಲ್ಭಾಗದ ತಗಡಿನ ಶೀಟ್ಗಳು ಗಾಳಿಗೆ ಹಾರಿಹೋಗಿವೆ.
ಮೂಡಿಗೆರೆ ತಾಲೂಕಿನ ಅಮ್ತಿ ಗ್ರಾಮದಲ್ಲಿ ಮರ ಬಿದ್ದು ಬಾಳೂರು-ಕಳಸ ಸಂಪರ್ಕ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೊಪ್ಪ ಮತ್ತು ಎನ್.ಆರ್.ಪುರ ಭಾಗದಲ್ಲಿಯೂ ಆಲಿಕಲ್ಲು ಮಳೆ ಆರ್ಭಟಿಸಿದೆ.
ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಮನೆಗಳು ಜಖಂಗೊಂಡಿದ್ದು, ಸಿಡಿಲು ಬಡಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜುಲ್ಲೆಯ ಹುಲಕುಂದ ಗ್ರಾಮದ ಎಸ್ಟೇಟ್ ಬಳಿ ಸಿಡಿಲು ಬಡಿದು ನೀಲಮ್ಮ ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ.
ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿಗೆ ಕಾಲೇಜು ಮತ್ತು ಅಂಗಡಿಗಳ ಶೀಟ್ಗಳು ಹಾರಿ ಹೋಗಿವೆ. ಮರದ ಕೊಂಬೆಗಳು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ದುರ್ಗಾ ಸರ್ಕಲ್ ಬಳಿ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.


