Kannada NewsLatestNational

ಶಾಸಕನ ಪುತ್ರ ಸೇರಿದಂತೆ ಹಲವರ ಮೇಲೆ ಎಫ್‌ಐಆರ್ ದಾಖಲು

ಉದ್ಯಮಿಯೊಬ್ಬರನ್ನು ಅಪಹರಿಸಿ ದೈಹಿಕ ಹಲ್ಲೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಉದ್ಯಮಿಯೊಬ್ಬರನ್ನು ಅಪಹರಿಸಿ ದೈಹಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ (ಶಿಂಧೆ ಬಣದ) ಶಾಸಕ ಪ್ರಕಾಶ್ ಸುರ್ವೆ ಅವರ ಪುತ್ರ ರಾಜ್ ಸುರ್ವೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಗೋರೆಗಾಂವ್ ಪೂರ್ವ ಪ್ರದೇಶದಲ್ಲಿರುವ ಗ್ಲೋಬಲ್ ಮ್ಯೂಸಿಕ್ ಜಂಕ್ಷನ್ ಕಚೇರಿಗೆ ಬುಧವಾರ ನುಗ್ಗಿದ 10-15 ಜನರ ಗುಂಪು ಸಂಗೀತಾ ಕಂಪೆನಿ ಸಿಇಒ ರಾಜ್‌ಕುಮಾರ್ ಸಿಂಗ್ ಅವರನ್ನು ಅಪಹರಿಸಿ ಅವರನ್ನು ಮನಸಾರೆ ಥಳಿಸಿತ್ತು.

ಈ ಪ್ರಕರಣದಲ್ಲಿ ರಾಜ್ ಸುರ್ವೆ ಸೇರಿದಂತೆ ಐವರು ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಇದರೊಂದಿಗೆ ಇನ್ನೂ ಸುಮಾರು 12 ಜನ ಅಪರಿಚಿತರ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಈ ಕುರಿತ ಸಿಸಿಟಿವಿ ದೃಶ್ಯಾವಳಿಯಲ್ಲಿ ಉದ್ಯಮಿ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಕಂಡುಬಂದಿದೆ. ಪಟನಾದ ಮನೋಜ್ ಮಿಶ್ರಾ ಅವರಿಗೆ ನೀಡಲಾದ ವ್ಯಾಪಾರ ಸಾಲವನ್ನು ಮರುಪಾವತಿಸುವಂತೆ ಒತ್ತಾಯಿಸಿ ತಮ್ಮನ್ನು ಕಚೇರಿಯಿಂದ ಎಳೆದೊಯ್ದು ಹಿಂಸಿಸಿದ್ದಲ್ಲದೆ ಈ ವಿಷಯ ಬಹಿರಂಗಪಡಿಸದಂತೆ ಬಂದೂಕು ತೋರಿಸಿ ಬೆದರಿಕೆ ಒಡ್ಡಿದ್ದಾಗಿ ಹಾಗೂ ಈ ಗುಂಪಿನಲ್ಲಿ ಶಾಸಕ ಪ್ರಕಾಶ್ ಸುರ್ವೆ ಪುತ್ರ ರಾಜ್ ಕೂಡ ಇದ್ದುದಾಗಿ ರಾಜಕುಮಾರ್ ಸಿಂಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button