
ಜಯಶ್ರೀ ಜೆ. ಅಬ್ಬಿಗೇರಿ ಬೆಳಗಾವಿ
ಚುಮು ಚುಮು ಬೆಳಕಾಗುವ ಮೊದಲೇ ಎದ್ದು ಕಸಗಡಿಸಿ ಮನೆ ಮುಂದೆ ರಂಗೋಲಿ ಹಾಕಿ, ರಾತ್ರಿಯಿಂದ ನನಗಾಗಿಯೇ ಕಾದು ಕುಳಿತಿದ್ದ ಪಾತ್ರೆಗಳ ಜಳಕ ಮಾಡಿಸಿ, ಗ್ಯಾಸ್ ಹಚ್ಚಿ ಟೀ ಕುದಿಸಿ ಇವರನ್ನು ಎಬ್ಬಿಸಿದರೆ ಆಗಲೇ ಬೆಳಗಾಗೇ ಬಿಡ್ತಾ? ಈ ಸೊಳ್ಳೆ ಕಾಟಕ್ಕೆ ನಿದ್ದೇನೆ ಆಗ್ಲಿಲ್ಲ. ಇನ್ನೊಂದು ಅರ್ಧ ತಾಸು ಕಣೆ ಎನ್ನುತ್ತ ಮತ್ತೆ ಮುಸುಕೆಳೆದುಕೊಂಡು ಮಲಗುತ್ತಾರೆ.ಇನ್ನು ಪಕ್ಕದಲ್ಲಿ ಅಡ್ಡಾದಿಡ್ಡಿಯಾಗಿ ಮಲಗಿರುವ ಮಕ್ಕಳನ್ನು ಎಬ್ಬಿಸೋಕೆ ಹೋದರೆ, ಅಯ್ಯೋ! ಇವತ್ತು ಸೂಟಿಯಿದೆ ಅವ್ವಾ ದಿನಾ ಬೇಗ ಎದ್ದು ಎದ್ದು ಸಾಕಾಗಿ ಹೋಗಿದೆ. ಹಬ್ಬ ಇದೆ ನೆನಪಿಲ್ವೇನು? ಎಂದು ನನಗೇ ಹಬ್ಬವನ್ನು ನೆನಪಿಸಿ, ಹೊದ್ದುಕೊಂಡ ಚಾದರವನ್ನು ಮತ್ತಷ್ಟು ನೀಟಾಗಿ ಹೊದಿಸಲು ನನಗೆ ಆರ್ಡರಿಸಿ, ಹಬ್ಬ ತಮಗೆ ಸಂಬಂಧವಿಲ್ಲವೆಂದು ಡಿಕ್ಲೇರಿಸಿ ಮತ್ತೆ ನಿದ್ರಾ ದೇವಿಯ ತೆಕ್ಕೆಯಲ್ಲಿ ಜಾರುತ್ತಾರೆ.
ದಿನಾ ಬೆಳಗಾದರ ಸಾಕು ಮಕ್ಕಳದು ಯಜಮಾನರದು ಒಂದಿಲ್ಲದ ಒಂದು ರಗಳೆ ಇದ್ದಿದ್ದ ಎಂದು ಮನದಲ್ಲಿ ಗೊಣುಗುತ್ತ, ಗತ್ಯತಂತರವಿಲ್ಲದೇ ಇನ್ನಿತರ ಕೆಲಸಗಳಿಗೆ ಸೆರಗು ಮತ್ತು ನೀರಿಗೆಗಳನ್ನು ಕಟ್ಟಿ ನಾನೇ ಮುಂದಾಗುತ್ತೇನೆ. ದಿನದ ಕೆಲಸವೇ ಸಾಕಷ್ಟಿರುತ್ತೆ ಅಂಥದ್ರಲ್ಲಿ ಹಬ್ಬ ಹರಿದಿನ ಅಂದ್ರ ಕೇಳ್ತಿರಾ? ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ದೊಡ್ಡ ಕೆಲಸಗಳು ನನಗಾಗಿ ವೇಟಿಂಗ್ ಲಿಸ್ಟಿನಲ್ಲಿ ನಿಂತಿರುತ್ತವೆ.ಇದು ನನ್ನೊಬ್ಬಳ ಪಾಡಲ್ಲ. ಅನೇಕ ಗೃಹಿಣಿಯರ ಮತ್ತು ಕೆಲಸಕ್ಕೆ ಹೋಗೋ ಮಹಿಳೆಯರ ಪಾಡೂ ಇದಕ್ಕಿಂತ ಬೇರಿಲ್ಲ.
ಬಹಳಷ್ಟು ಬಾರಿ ಮಹಿಳೆ ಒಂಟೆತ್ತಿನ ಬಂಡಿಯಂತೆ ಸಂಸಾರದ ನೊಗವನ್ನು ಹೊತ್ತು ಸಾಗುತ್ತಾಳೆ. ಹೀಗೆ ಹೊತ್ತು ಸಾಗುವಾಗ ಕೆಲವೊಮ್ಮೆ ಭಾರ ಅತಿಯಾಗಿ ಒತ್ತಡ ತಾಳಲಾರದ ಪರಿಸ್ಥಿತಿಯಲ್ಲಿ ಪತಿದೇವರ ಮೇಲೆ, ಮಕ್ಕಳ ಮೇಲೆ ರೇಗುತ್ತಾಳೆ. ನೀನು ಸಿಟ್ಟಿನಲ್ಲೂ ಚೆನ್ನಾಗಿ ಕಾಣಿಸ್ತಿಯಾ ಕಣೆ ಎಂದು ಉಬ್ಬಿಸಿ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಜಾಣ ಪತಿದೇವರ ಸಂಖ್ಯೆಗೇನು ಕಮ್ಮಿ ಇಲ್ಲ. ನಿನ್ನ ರೇಗುವಿಕೆಯಲ್ಲಿಯೂ ಒಂದು ಹಿತವಾದ ಪ್ರೀತಿಯಿದೆ ಅವ್ವ ಎಂದು ಛೇಡಿಸಿ, ಸಿಟ್ಟಿಗೆದ್ದ ಅವಳ ಮುಖದ ಮೇಲೆ ಮಂದಹಾಸ ತೇಲಿಸುವ ಮಕ್ಕಳ ಸಂಖ್ಯೆ ಇತ್ತೀಚಿಗೆ ಹೆಚ್ಚಾಗುತ್ತಿದೆ.
ಒಟ್ಟಿನಲ್ಲಿ ಹಬ್ಬ ಹರಿದಿನಗಳು ಮಹಿಳೆಯ ಹೆಸರಿನಲ್ಲೇ ಬರೆದಿರುವದು ಅಲಿಖಿತ ಕಾನೂನಾಗಿದೆ ಅಂತ ಅನಿಸುತ್ತೆ. ಅದರಲ್ಲೂ ಶ್ರಾವಣ ಮಾಸ ಬಂತೆಂದರೆ ಪ್ರತಿ ದಿನವೂ ಹಬ್ಬವೆ. ಹೀಗಾಗಿ ಶ್ರಾವಣ ಮಾಸ ಶುರುವಾದ ದಿನದಿಂದ ಮುಕ್ತಾಯವಾಗೋವರೆಗೂ ಅವಳಿಗೆ ಹಾಸಿಗೆ ಸಿಗೋದೇ ವಿರಳ. ಪ್ರತಿನಿತ್ಯ ಏನಾದರೊಂದು ವಿಶೇಷ ಇದ್ದೇ ಇರುತ್ತದೆ. ಶ್ರಾವಣ ಮಾಸದ ಸೋಮವಾರ ತುಂಬಾ ಪವಿತ್ರವಾದ ದಿನ ಹೀಗಾಗಿ ಮನೆ ದೇವರಿಗೆ ಅಭಿಷೇಕ ಮಾಡಿಸುವದು. ಸ್ವಾಮಿಗಳನ್ನೆಲ್ಲ ಮನೆಗೆ ಕರೆದು ಅವರ ಪಾದ ತೊಳೆದು ಪ್ರಸಾದ ನೀಡುವುದು ಒಂದು ವಾರವಾದರೆ, ಇನ್ನುಳಿದ ಸೋಮವಾರಗಳಲ್ಲಿ ಸೂರ್ಯ ಉದಯವಾಗುವದರೊಳಗೆ ಸ್ನಾನ ಮುಗಿಸಿ ಶುಭ್ರವಾದ ಮಡಿಯನ್ನುಟ್ಟು ಶಿವ ಅಥವಾ ಈಶ್ವರನಿಗೆ, ಇನ್ನಿತರ ಜಾಗೃತ ದೇವರುಗಳಿಗೆ ಐದಾರು ಬಾರಿ ಪ್ರದಕ್ಷಿಣೆ ಅಥವಾ ಉರುಳು ಸೇವೆ ಮುಗಿಸಿ, ಪೂಜಾರಿ ಬರುವ ಮುನ್ನವೇ ನಂದಿಯಂತೆ ಕೈ ಜೋಡಿಸಿ ಕುಳಿತಿರುತ್ತಾಳೆ. ಪೂಜಾರಿಯ ಮಂತ್ರೋಚ್ಛಾರದಲ್ಲಿ ದೈವಭಕ್ತರು ಹೇಳುವ ಭಜನೆಗಳಲ್ಲಿ ತಾನೂ ಸಕ್ರೀಯವಾಗಿ ಪಾಲು ತೆಗೆದುಕೊಂಡು, ಭಕ್ತಿ ಭಾವದಲ್ಲಿ ತಲ್ಲೀನಳಾಗುತ್ತಾಳೆ. ಇದೆಲ್ಲ ಮುಗಿದ ಮೇಲೆ ದೇವರ ದರುಶನ ಪಡೆಯಲು ಮಕ್ಕಳಿಗೆ ಪತಿದೇವರಿಗೆ ಫೋನಾಯಿಸುತ್ತಾಳೆ.ಮಧ್ಯಾಹ್ನ ಪ್ರಸಾದದ ವೇಳೆಗೆ ಅವರೆಲ್ಲ ಹಾಜರಿ ಹಾಕುತ್ತಾರೆ.
ಮಂಗಳವಾರ ಮತ್ತು ಶುಕ್ರವಾರವಂತೂ ಮಹಿಳೆಯರು ಫುಲ್ ಬಿಜಿ. ಗೌರಿ ಮತ್ತು ವರಮಹಾಲಕ್ಷ್ಮಿಯರ ಪೂಜೆಗೆ ಸಿದ್ಧತೆ ಹಿಂದಿನ ದಿನದಿಂದಲೇ ಪ್ರಾರಂಭವಾಗಿರುತ್ತದೆ. ಪೂಜೆಗೆ ಬೇಕಾಗುವ ಬಾಳೆಗೊನೆ ಎಲೆ ಹೂವು ತಳಿರು ತೋರಣ ದೇವಿಗೆ ಏರಿಸಲು ಸೀರೆ ಇನ್ನಿತರ ಎಲ್ಲ ಸಾಮಾನುಗಳನ್ನು ತರಲು ಮಹಿಳೆಯರೇ ಧಾವಿಸುತ್ತಾರೆ, ತಮಗೆ ಮನೆಯಲ್ಲಿ ಪೂಜೆಗೆ ಸಂಬಂಧಿಸಿದ ತುರ್ತಾಗಿ ಮಾಡಲೇಬೇಕಾದ ಇನ್ನಿತರ ತಯಾರಿ ಇದ್ದಾಗ ಯಜಮಾನರಿಗೆ ಅಥವಾ ಮಕ್ಕಳಿಗೆ ಹೇಳಿದರೆ, ಅಯ್ಯೋ! ನಾನು ತಂದಿದ್ದು ನಿನಗೆ ಸರಿ ಬರಲ್ಲ. ಅದಲ್ಲದೆ ಹೆಣ್ಮಕ್ಕಳ ವಿಷ್ಯ ಅಲ್ವಾ ನಮಗೆ ಅರ್ಥ ಆಗೊಲ್ಲ. ಯಾವುದಾದರೂ ವಸ್ತು ತರಲು ಮರೆತರೆ ರಗಳೆ ಆಗುತ್ತೆ ನೀನೇ ಬಾ ಎಲ್ಲವನ್ನೂ ಒಟ್ಟಿಗೆ ತರಬಹುದು ಎಂದು ನೆಪ ಹೇಳಿ ಅವರನ್ನು ಸ್ಕೂಟಿ ಅಥವಾ ಕಾರಿನ ಹಿಂದಿನ ಸೀಟಿನಲ್ಲಿ ಕೂಡ್ರಿಸಿಕೊಂಡು, ಅಬ್ಬಾ! ದೊಡ್ಡ ರಿಸ್ಕ್ನಿಂದ ಪಾರಾದೆ ಎಂದು ಮನದಲ್ಲೇ ನಗುತ್ತ ಪೇಟೆಯತ್ತ ಗಾಡಿ ಓಡಿಸುತ್ತಾರೆ.
ಗೌರಿ, ವರಮಹಾಲಕ್ಷ್ಮಿಯರ ಪೂಜೆಯ ದಿನ, ಇನ್ನೂ ಕಣ್ಣಲ್ಲಿ ನಿದ್ದೆ ಬಾಕಿಯಿದ್ದರೂ ಲೆಕ್ಕಿಸದೆ ಎದ್ದು ಮನೆಯ ದಿನ ನಿತ್ಯದ ಕೆಲಸಗಳನ್ನು ಮುಗಿಸಿ ಸ್ನಾನ ಮಾಡಿ. ನೈವೇದ್ಯಕ್ಕೆ ಬೇಕಾದ ಸಿಹಿ ಭೋಜನಗಳಾದ ಕಡಬು ಅಥವಾ ಹೋಳಿಗೆಗಳನ್ನು ಶುದ್ಧ ಮಡಿಯಿಂದ ತಯಾರಿಸಿ ನಂತರ ಮನೆಯ ಹೆಂಗಳೆಯರೆಲ್ಲ ದೇವತೆಯ ಪೂಜೆಯ ಸಿದ್ಧತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ದೇವತೆಯ ಆಜು ಬಾಜು ಬಾಳೆಗೊನೆಗಳನ್ನಿಟ್ಟು ಅವುಗಳ ಮೇಲೆ ಪಕ ಪಕ ಎನ್ನುವ ಸಣ್ಣ ಸಣ್ಣ ಬಲ್ಬ್ಗಳ ಹಾರ ಹೊದಿಸಿ, ಮೂರ್ತಿಗೆ ಕುಂಕುಮ ಬೊಟ್ಟಿಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿ ಕಿವಿಯೋಲೆ, ಕೊರಳಲ್ಲಿ ಮಂಗಳಸೂತ್ರ ಹಾಕಿ ಇಷ್ಟು ಸಾಲದೆಂಬಂತೆ ಮನೆಯಲ್ಲಿರುವ ಬಂಗಾರದ ದಾಗೀನುಗಳನ್ನು ಒಂದರ ಮೇಲೊಂದು ಹಾಕಿ ಅವಳನ್ನು ಮಲ್ಲಿಗೆ ಆಬಾಲೆ ಸೇವಂತಿಗೆ ಕೇದಿಗೆ ಗುಲಾಬಿ ಹೂಗಳ ರಾಶಿಯಲ್ಲಿ ಮುಳುಗಿಸಿ ದೇವತೆಯ ಅಂದ ಮತ್ತು ತೇಜಸ್ಸು ಹೆಚ್ಚಿಸುತ್ತಾರೆ. ಶಾಂತವಾಗಿ ಉರಿಯುವ ಸಮೆ, ಆರತಿ ದೀಪಗಳ ಬೆಳಕಿನಲ್ಲಿ ಹೊಳೆಯುವ ದೇವಿಯ ಕಂಡು ತಾವು ಉಪವಾಸವಿರುವದನ್ನು ಮರೆಯುತ್ತಾರೆ. ಪ್ರಖರವಾಗಿ ಪ್ರಜ್ವಲಿಸುವ ದೇವಿಗೆ ನೈವೇದ್ಯ ಹಿಡಿದು ತನ್ನ ಕುಟುಂಬಕ್ಕೆ ಸಕಲ ಐಶ್ವರ್ಯವನ್ನು ಕೊಟ್ಟು ಆಶೀರ್ವದಿಸು ತಾಯೆ ಎಂದು ಬೇಡಿಕೊಳ್ಳುವದರಲ್ಲಿ ಅವಳಿಗೆ ಎಲ್ಲಿಲ್ಲದ ಸಂತಸ ಮತ್ತು ಸಂತೃಪ್ತಿ.
ಜಿಟಿ ಜಿಟಿಯಾಗಿ ಸುರಿಯುವ ಮಳೆಯಲ್ಲಿ ಸಂಜೆಯ ಸಮಯ ತಾವೂ ರೇಷ್ಮೆ ಅಥವಾ ಕಾಟನ್ ಸೀರೆಯುಟ್ಟು ಮುಡಿಯಲ್ಲಿ ಹೂವು ಮುಡಿದು ಕೊರಳು ಕೈ ಕಿವಿಗಳಲ್ಲಿ ಆಭರಣಗಳನ್ನು ಹೊತ್ತು ನೆರೆಮನೆಗಳೆಲ್ಲೆಲ್ಲ ಅರಿಷಣ ಕುಂಕುಮ ಪಡೆದು ಉಡಿ ತುಂಬಿಸಿಕೊಳ್ಳುವಾಗ ಮುಂಜಾನೆಯಿಂದ ದುಡಿದ ದಣಿವೆಲ್ಲವೂ ಕ್ಷಣಾರ್ಧದಲ್ಲಿ ಮಾಯವಾಗಿ, ನೆಮ್ಮದಿಯ ಭಾವ ಅನುಭವಿಸುತ್ತಾಳೆ. ಉತ್ಸಾಹದಿಂದ ಮನೆಯಿಂದ ಮನೆಗೆ ಅರಿಷಿಣ ಕುಂಕುಮಕ್ಕೆ ಹೋಗಿ ಅವರ ಕುಶಲ ಕ್ಷೇಮಗಳನ್ನು ಕೇಳಿ ತನ್ನ ಸಂಸಾರದ ವಿಷಯಗಳನ್ನು ಲವಲವಿಕೆಯಿಂದ ಹೇಳಿ ಖುಷಿ ಪಡುತ್ತಾಳೆ.
ಮನೆಗೆ ಬಂದ ಮುತೈದೆಯರಿಗೆ ಎಲೆ ಅಡಿಕೆ ನೆನೆಸಿದ ಕಡಲೆ ಕಾಳು ಅರಿಷಿಣ ಕೊಂಬು ಉತ್ತತ್ತಿ ಬಾಳೆಹಣ್ಣು ತೆಂಗಿನ ಕಾಯಿ ಕುಪ್ಪುಸದ ಅರಿಬೆ (ಜಂಪರ್ ಪೀಸ್) ಹೂವಿನ ಮಾಲೆ ಅಥವಾ ಬಿಡಿ ಹೂವಿಟ್ಟು ಉಡಿ ತುಂಬುತ್ತಾಳೆ. ಬಿಸಿ ಬಿಸಿಯಾದ ಬದಾಮಿ ಹಾಲು ಹೀರುತ್ತ ದೇವಿಗೆ ಉಡಿಸಿದ ಸೀರೆ ಆಭರಣ ಮತ್ತು ತಾವು ಉಟ್ಟುಕೊಂಡ ಸೀರೆ-ಕುಪ್ಪುಸ ದಾಗೀನುಗಳನ್ನು ಎಲ್ಲಿ ತಂದದ್ದು ಎಷ್ಟು ರೇಟು ಲಾಭವಾಯಿತೊ ನಷ್ಟವಾಯಿತೊ ಎನ್ನುವ ಜೋರಾದ ಚರ್ಚೆಯೂ ಕಾವೇರಿರುತ್ತೆ ಅಂತ ಬೇರೆ ಹೇಳ ಬೇಕಿಲ್ಲ.
ಶನಿವಾರ ಭಜರಂಗಿಗೆ ಮುಡುಪಿಟ್ಟ ದಿನ. ಅಂದು ಅವನಿಗೆ ಎಲೆ ಪೂಜೆ ಬುತ್ತಿ ಪೂಜೆ ಕುಂಕುಮ ಪೂಜೆ ಬೆಣ್ಣೆ ಪೂಜೆ ಅಂತೆಲ್ಲ ವಿಶೇಷ ಪೂಜೆಗಳು ನಡೆಯುತ್ತವೆ. ಪ್ರಾರ್ಥನೆ ಭಜನೆಗಳು ಭಕ್ತಿಯ ಮನದ ಮುಗಿಲನ್ನು ಮುಟ್ಟುವಂತಿರುತ್ತವೆ. ಪೂಜೆ ಪ್ರಾರ್ಥನೆ ಭಜನೆಗಳಲ್ಲಿ ತಪ್ಪದೇ ಹಾಜರಿದ್ದು ಶನಿದೇವರ ಮುಂದೆ ಮಂಡೆಯೂರಿ ತಮ್ಮ ಕುಟುಂಬವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸು ಎಂದು ಹೆಂಗಳೆಯರೆಲ್ಲ ಸೆರಗೊಡ್ಡಿ ದೀನ ಭಾವದಿಂದ ಬೇಡಿಕೊಳ್ಳುವ ಪರಿಗೆ ಹನುಮಂತ ತಥಾಸ್ತು ಹೇಳಿರುತ್ತಾನೆ.
ದುನಿಯಾ ಅದೆಷ್ಟು ಡಿಜಿಟಲ್ ಆಗಿ ಬದಲಾಗಿದ್ದರೂ ಪೂಜಾ ಡಾಟ್ ಕಾಮ್ನಂತ ಸೌಲಭ್ಯಗಳು ಪೂಜೆ ಪುನಸ್ಕಾರ ಹೋಮ ಹವನಗಳಿಗೆ ಲಭ್ಯವಿದ್ದರೂ ಹೆಂಗಳೆಯರಿಗೆ ಪೂಜೆಗಳ ಪ್ರತಿಯೊಂದು ಹಂತದಲ್ಲೂ ತಾವೇ ಖುದ್ದಾಗಿ ಪಾಲ್ಗೊಂಡಾಗಲೇ ನೆಮ್ಮದಿ. ಪ್ರತಿಯೊಂದು ಡೋರ್ ಡೆಲಿವರಿ ಸರ್ವಿಸ್ ಲಭ್ಯವಿರುವ ಈ ಕಾಲದಲ್ಲಿಯೂ ಹೆಂಗಳೆಯರ ದೈವಭಕ್ತಿ ದೇವರ ಶಕ್ತಿ ಬಗೆಗಿನ ಅಪಾರ ಶ್ರದ್ಧೆ ಮಾತ್ರ ಕಿಂಚಿತ್ತೂ ಬದಲಾಗಿಲ್ಲ. ತನ್ನ ಕುಟುಂಬದ ಸಕಲರ ಏಳ್ಗೆಯಲ್ಲಿ ತನ್ನ ಏಳ್ಗೆ. ಮನೆ ಮಂದಿಯ ಖುಷಿಯಲ್ಲಿ ತಾನು ಖುಷಿ ಪಟ್ಟು ಸಂಭ್ರಮಿಸುವ ರೀತಿಯೂ ಬದಲಾಗಿಲ್ಲ. ತನ್ನ ಆಸೆ ಆಕಾಂಕ್ಷೆಗಳೆಲ್ಲವನ್ನೂ ಗೌಣವಾಗಿಸಿ ಕುಟುಂಬದ ಹಿತಕ್ಕಾಗಿ ಇಷ್ಟೆಲ್ಲ ದೇವರ ಪೂಜೆ ಮತ್ತು ದೈವಭಕ್ತಿಯಲ್ಲಿ ತೊಡಗಿಸಿಕೊಂಡಿರುವ ನಿಸ್ವಾರ್ಥ ಹೆಂಗಳೆಯರನ್ನು ಕಂಡಾಗ ನಿಜವಾಗಲೂ ಖುಷಿ ಆಗುತ್ತೆ ಅಲ್ಲವೆ? ಇಂಥ ನಿಸ್ವಾರ್ಥ ಹೆಂಗಳೆಯರ ದೈವಭಕ್ತಿಗೆ ನಿಮಗೆ ನೂರೊಂದು ಸಲಾಂ ಸಲ್ಲಿಸಬೇಕೆನಿಸುತ್ತಿದೆಯಲ್ಲವೇ? ಹಾಗಾದರೆ ತಡವೇಕೆ ಮನೆಯಲ್ಲಿರುವ ತಾಯಿ, ಹೆಂಡತಿ ಅಕ್ಕ ತಂಗಿಯರಿಗೆ ನಿಮ್ಮ ಸಲಾಂ ತಿಳಿಸಿ ಬಿಡಿ.