EducationKannada NewsKarnataka News

*ಧಾರವಾಡ ಕೃಷಿ ವಿವಿ ಕೊಡುಗೆ ಅನನ್ಯ: 50 ವರ್ಷಗಳ ಹಿಂದೆಯೇ ಮಹಿಳೆಯರ ಸಬಲೀಕರಣಕ್ಕೆ ಕಾಲೇಜು ಒತ್ತು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಭಿವೃದ್ಧಿ ಕೇಂದ್ರದಲ್ಲಿ ಶನಿವಾರ ನಡೆದ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಆನ್‌ಲೈನ್ ಮೂಲಕ ಪಾಲ್ಗೊಂಡು ಮಾತನಾಡಿದ ಸಚಿವರು, ಮಹಿಳೆಯರಿಗಾಗಿಯೇ ಆರಂಭಗೊಂಡ ಕಾಲೇಜು ಮಹಿಳೆಯರ ಅಭಿವೃದ್ಧಿಗೆ ನೀಡಿದ ಸೇವೆಯನ್ನು ಶ್ಲಾಘಿಸಿದರು.

ನಮ್ಮೆಲ್ಲರ ನಾಯಕ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇಡೀ ರಾಷ್ಟ್ರಕ್ಕೆ ಮಾದರಿಯಾದಂತಹ ಮಹಿಳಾ ಪರ ಯೋಜನೆಗಳು ಕರ್ನಾಟಕದಲ್ಲಿವೆ ಎಂದು ಸಚಿವರು ಹೇಳಿದರು.

50 ವರ್ಷ ಹಿಂದೆಯೇ ಈ ಕಾಲೇಜನ್ನು ಕಟ್ಟಲಾಗಿದೆ. ಧಾರವಾಡ ಎಂದರೆ ಉತ್ತರ ಕರ್ನಾಟಕದ ಹೆಬ್ಬಾಗಿಲು, ವಿದ್ಯಾ ಕಾಶಿ ಅಂತಾನೆ ಕರೆಯಲಾಗುತ್ತದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ನಮ್ಮೆಲ್ಲರ ಹೆಮ್ಮೆ. ಈ ರಾಷ್ಟ್ರಕ್ಕೆ ಶೈಕ್ಷಣಿಕ ಸೇವೆ ನೀಡುವಲ್ಲಿ ಧಾರವಾಡದ ಪಾತ್ರ ಅನನ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಮರಿಸಿದರು.

ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಕೂಡ ರಾಜ್ಯದಲ್ಲೇ ಅಗ್ರಗಣ್ಯ ಕೃಷಿ ವಿಶ್ವವಿದ್ಯಾಲಯ ಎನ್ನುವ ಹೆಮ್ಮೆಯನ್ನು ಇಂದಿಗೂ ಉಳಿಸಿಕೊಂಡಿದೆ. ಕೃಷಿ ರಾಷ್ಟ್ರದ ಬೆನ್ನೆಲುಬು ಎಂದು ಹೇಳುತ್ತೇವೆ. ಶೇ.70ರಷ್ಟು ಜನರು ಕೃಷಿಯನ್ನೇ ತಮ್ಮ ಜೀವನಾಧಾರವಾಗಿ ಅವಲಂಭಿಸಿದ್ದಾರೆ. ಅಂತಹ, ಕೃಷಿಯಲ್ಲಿ ತೊಡಗಿರುವ ರೈತರ ಬೆನ್ನೆಲುಬು ನಮ್ಮ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ. ವಿಶೇಷವಾಗಿ, ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ನೀಡುತ್ತಿದೆ ಎಂದರು.

ಮಹಾವಿದ್ಯಾಲಯ 50 ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಈವರೆಗೆ ಸೇವೆ ಸಲ್ಲಿಸಿದ ಎಲ್ಲ ಪ್ರಾಚಾರ್ಯರನ್ನು, ಶಿಕ್ಷಕರನ್ನು ಹಾಗೂ ಸಿಬ್ಬಂದಿಯನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು, ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. 50 ವರ್ಷಗಳ ಹಿಂದೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭವಾಗಿರಲಿಲ್ಲ ಎಂದು ಹೇಳಿದರು.

ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯ ಎನ್ನುವ ಹೆಸರಿನಲ್ಲಿ, ವಿದ್ಯಾರ್ಥಿನಿಯರಿಗಾಗಿಯೇ ಆರಂಭವಾದ ಈ ಕಾಲೇಜಿನ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂತ್ರಿಯಾಗಿ ನನಗೆ ಸ್ವಲ್ಪ ಜಾಸ್ತಿ ಪ್ರೀತಿ. ಅದರಲ್ಲೂ ಕುಟುಂಬಗಳ ಸಮಗ್ರ ಅಭಿವೃದ್ದಿ ಹಾಗೂ ಹೆಣ್ಣು ಮಕ್ಕಳಿಗೆ ಅವರ ಕುಟುಂಬ ನಿರ್ವಹಣೆಯ ಕುರಿತು ಕಲಿಸುವುದಕ್ಕಾಗಿಯೇ ಆರಂಭವಾದ ಕಾಲೇಜು ಇದು ಎನ್ನುವುದು ವಿಶೇಷ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button