Uncategorized

*ಗೃಹಲಕ್ಷ್ಮೀ ಯೋಜನೆಗೆ ಹಣ ಪಡೆದು ಅರ್ಜಿ ಸಲ್ಲಿಕೆ; ಸೇವಾಸಿಂಧು ಕೇಂದ್ರಕ್ಕೆ ಬೀಗ ಜಡಿದ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಗೃಹಲಕ್ಷ್ಮೀ ಯೋಜನೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸೇವಾಸಿಂಧು ಕೇಂದ್ರದ ಬಾಗಿಲು ಮುಚ್ಚಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ವಿನೋಬಾನಗರ ಬಡಾವಣೆಯಲ್ಲಿದ್ದ ಸೇವಾಸಿಂಧು ಕೇಂದ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯುತ್ತಿದ್ದ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಅಧಿಕಾರಿ ಎನ್.ಚಂದ್ರಪ್ಪ ನೇತೃತದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಸೇವಾಸಿಂಧು ಕೇಂದ್ರದಲ್ಲಿ ಗೃಹಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಜನರಿಂದ 100 ರೂಪಾಯಿಯಂತೆ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದೆ.

ಅಲ್ಲದೇ ಸದರಿ ಸೇವಾಕೇಂದ್ರಕ್ಕೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಹಾಕಲು ಅನುಮತಿ ನೀಡಿಲ್ಲ ಎಂಬುದು ತಿಳಿದುಬಂದಿದೆ. ಭದ್ರಾವತಿ ಕೇಂದ್ರವೊಂದಕ್ಕೆ ನೀಡಲಾಗಿದ್ದ ಯೂಸರ್ ಐಡಿ, ಪಾಸ್ ವರ್ಡ್ ಬಳಸಿ ಸದರಿ ಕೇಂದ್ರದಲ್ಲಿ ಅನಧಿಕೃತವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲಾಗುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿನೋಬಾನಗರ ಬಡಾವಣೆಯ ಸೇವಾಸಿಂಧು ಕೇಂದ್ರಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದು, ಸೇವಾಸಿಂಧು ಕೇಂದ್ರದ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.


Home add -Advt

Related Articles

Back to top button