*ಪ್ಯಾಸ್ ಫೌಂಡೇಶನ್ ನಿಂದ ಮತ್ತೆ ಮೂರು ಕೆರೆಗಳ ಪುನರುಜ್ಜೀವನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಸುಮಾರು ಒಂದು ದಶಕದಿಂದ ನೀರಿನ ಮೂಲಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಬೆಳಗಾವಿಯ ಪ್ಯಾಸ್ ಫೌಂಡೇಶನ್ ಈಗ ಮತ್ತೆ ಮೂರು ಕೆರಗಳನ್ನು ಪುನರುಜ್ಜೀವನಗೊಳಿಸಿದೆ. ಮುಂದಿನ ವಾರ ಕೆರೆಗಳನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಖ್ಯಾತ ವೈದ್ಯರಾಗಿರುವ ಡಾ. ಮಾಧವ ಪ್ರಭು ಮತ್ತು ಅವರ ತಂಡ ಬೆಳಗಾವಿ ನಗರ ಮತ್ತು ಸುತ್ತಮುತ್ತ ಹಾಳು ಬಿದ್ದಿರುವ ಕೆರೆ ಮತ್ತು ಬಾವಿಗಳನ್ನು ಪುನರುಜ್ಜೀವನಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದೆ. ಸಾರ್ವಜನಿಕರ ದೇಣಿಗೆ ಮತ್ತು ಸ್ವಂತ ಹಣ ವೆಚ್ಚ ಮಾಡಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಈವರೆಗೆ 12 ಕೆರೆ ಅಥವಾ ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ.

ಇದೀಗ ಇನ್ನೂ 2 ಕೆರೆ ಮತ್ತು ಒಂದು ಬಾವಿ ಪುನರುಜ್ಜೀವನಗೊಳಿಸಲಾಗಿದೆ. ಖಾಸಬಾಗದ ಟೀಚರ್ಸ್ ಕಾಲನಿ ಬಾವಿ, ಗೆಜಪತಿಯ ಕೆರೆ ಮತ್ತು ಧೋಬಿಘಾಟ್ ಕೆರೆ ಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಸೋಮವಾರ ಸಂಜೆ 5 ಗಂಟೆಗೆ ಖಾಸಬಾಗದ ಬಾವಿಯನ್ನು ಲೋಕಾರ್ಪಣೆಗೊಳಿಸಲಾಗುತ್ತಿದ್ದು, ಜಿಲ್ಲಾಧಿಕಾರಿ ಮೊಹ್ಮದ್ ರೋಷನ್, ಶಾಸಕ ಅಭಯ ಪಾಟೀಲ, ಮೇಯರ್ ಮಂಗೇಶ ಪವಾರ್, ಪಾಲಿಕೆ ಆಯುಕ್ತೆ ಶುಭಾ ಬಿ ಹಾಗೂ ಪಾಲಿಕೆ ಸದಸ್ಯೆ ಪ್ರೀತಿ ಕಾಮಕರ್ ಪಾಲ್ಗೊಳ್ಳಲಿದ್ದಾರೆ.
ಬುಧವಾರ ಸಂಜೆ 5 ಗಂಟೆಗೆ ಗೆಜಪತಿಯ ಕೆರೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಮತ್ತು ಸ್ಥಳೀಯ ಮುಖಂಡರು ಭಾಗವಹಿಸಲಿದ್ದಾರೆ.
ಈವರೆಗೆ ಪುನರುಜ್ಜೀವನಗೊಳಿಸಿದ ಬಾವಿಗಳಲ್ಲೇ ಖಾಸಬಾಗದ ಬಾವಿ ಅತ್ಯಂತ ದೊಡ್ಡದಾಗಿದೆ. ಕೆಲವು ವರ್ಷಗಳ ಹಿಂದೆ ಕಿತ್ತೂರಿನ ದೊಡ್ಡ ಕೆರೆಯನ್ನೂ ಪ್ಯಾಸ್ ಫೌಂಡೇಶನ್ ಜೀರ್ಣೋದ್ಧಾರ ಮಾಡಿದೆ.