Uncategorized

*ಅಧಿವೇಶನಕ್ಕೆ ಮುನ್ನ ಹೊಸ ಶಾಸಕರಿಗೆ ಧೈರ್ಯ ತುಂಬಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ; ಜನರ ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಡಿ ಎಂದು ಕರೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಲವೂ ಕೂಡಿ ಬರುತ್ತದೆ, ರಾಜ್ಯದಲ್ಲಿ ಜೆಡಿಎಸ್ ಸರಕಾರವೂ ಬರುತ್ತದೆ. ಪಕ್ಷದಲ್ಲಿ ನಿಷ್ಠರಾಗಿರುವ ಉಳಿಯುವ ಎಲ್ಲರಿಗೂ ಅಧಿಕಾರ, ಜನರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದು ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೆಗೌಡರು ಹೇಳಿದರು.

ಯಾರೂ ಎದೆಗುಂದಬೇಕಿಲ್ಲ. ಪಕ್ಷ ಕಟ್ಟಿ. ಸೋಲಿನಿಂದ ಹತಾಶರಾಗುವುದು ಬೇಡ. ಛಲವಿದ್ದರೆ ಗೆಲುವು ಖಚಿತ. ಅಧೈರ್ಯವೇ ಅವಸಾನಕ್ಕೆ ನಾಂದಿ ಆಗುತ್ತದೆ ಎಚ್ಚರ ಇರಲಿ ಎಂದು ಅವರು ಕಿವಿಮಾತು ಹೇಳಿದರು.

ವಿಧಾನಮಂಡಲ ಅಧಿವೇಶನ, ಪಕ್ಷದ ಬಲವರ್ಧನೆ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಘಟಕಗಳ ಪುನಾರಚನೆ, ನೂತನ ಕೋರ್ ಕಮಿಟಿ ರಚನೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹತ್ವದ ಸಭೆಯನ್ನು ಉದ್ದೆಶಿಸಿ ಅವರು ಮಾತನಾಡಿದರು.

ಎಲ್ಲ ಶಾಸಕರು, ಮಾಜಿ ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪರಾಭವಗೊಂಡ ಅಭ್ಯರ್ಥಿಗಳು ಸೇರಿ ಅನೇಕ ಆಹ್ವಾನಿತರು ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಜಕಾರಣ ಗೊಂದಲಮಯವಾಗಿದೆ:

ಈ ಪಕ್ಷವನ್ನು ಉಳಿಸಲೇಬೇಕು, ಉಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ. ಇವತ್ತಿನ ರಾಜ್ಯ ಮತ್ತು ದೇಶದ ರಾಜಕಾರಣ ಗೊಂದಲಮಯವಾಗಿದೆ. ನಾವು ಜನನಿಷ್ಠರಾಗಿ ಅವರ ಜತೆ ನಿಲ್ಲೋಣ ಎಂದರು ಮಾಜಿ ಪ್ರಧಾನಿಗಳು.

ರಾಷ್ಟ್ರೀಯ ಪಕ್ಷಗಳ ದೊಡ್ಡ ದೊಡ್ಡ ನಾಯಕರಲ್ಲಿ ಈಗ ಅಳುಕಿದೆ. ಚುನಾವಣೆಯ ಬಗ್ಗೆ ಭಯವಿದೆ. ನಮಗೆ ಅಂತಹ ಆತಂಕ, ಭಯ ಇಲ್ಲ. ಯಾವುದೇ ತಪ್ಪು ನಮ್ಮಿಂದ ಆಗಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಜನರ ಪರವಾಗಿಯೇ ಹೋರಾಟ ಮಾದಿದ್ದೇವೆ ಎಂದು ಅವರು ಹೇಳಿದರು.

ಪತ್ರಿಕೆಗಳನ್ನು ಓದಿ, ಹೋರಾಡಿ:

ತಮ್ಮ ಭಾಷಣದಲ್ಲಿ ಕೆಲ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಉಲ್ಲೇಖ ಮಾಡಿದ ಮಾಜಿ ಪ್ರಧಾನಿಗಳು, ಜನರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿವೆ. ಪತ್ರಿಕೆಗಳನ್ನು ಗಂಭೀರವಾಗಿ ಓದಿ, ಸುದ್ದಿ ಮಾಧ್ಯಮಗಳನ್ನು ಗಮನಿಸಿ. ಜನರ ಸಮಸ್ಯೆಗಳನ್ನು ಸರಕಾರದ ಮುಖಕ್ಕೆ ಹಿಡಿಯಿರಿ. ಹೋರಾಟದಲ್ಲಿ ಅಂಜಿಕೆ ಏಕೆ? ಜನರ ಪರವಾಗಿ ನಿಲ್ಲುವುದಕ್ಕೆ ಅಳಕು ಏಕೆ? ಎಂದು ನೂತನ ಶಾಸಕರನ್ನು ಮಾಜಿ ಪ್ರಧಾನಿಗಳು ಹುರಿದುಂಬಿಸಿದರು.

ನನ್ನ ಆರೋಗ್ಯದ ಬಗ್ಗೆ ಯಾರಿಗೂ ಆತಂಕ ಬೇಡ. ಕೊಂಚ ಮಂಡಿ ನೋವು ಇದೆ. ಅದಕ್ಕಿಂತ ಜನರು ಎದುರಿಸುತ್ತಿರುವ ಕಾಶತಗಳ ಬಗ್ಗೆ ನನಗೆ ಹೆಚ್ಚು ನೋವಿದೆ. ಯಾವುದೇ ಸಂದರ್ಭದಲ್ಲಿ ಹೋರಾಟ ಮಾಡುವ ಛಲ ನನ್ನಲ್ಲಿದೆ. ನಿಮ್ಮೆಲ್ಲರ ಜತೆ ನಾನಿದ್ದೇನೆ ಎಂದು ಅವರು ಹೇಳಿದರು.

ಸಮಾನ ನಾಗರೀಕ ಸಂಹಿತೆ ಬಗ್ಗೆ ದೇಶದ ಉದ್ದಗಲಕ್ಕೂ ಚರ್ಚೆ ನಡೆಯುತ್ತಿದೆ. ಸಂಹಿತೆಯ ಕರಡು ಮೊದಲು ಹೊರಬರಲಿ. ಆಮೇಲೆ ಚರ್ಚೆ ನಡೆಸಿ ನಮ್ಮ ನಿಲುವು ಏನು ಎಂಬುದನ್ನು ತಿಳಿಸೋಣ ಎಂದು ಇದೇ ವೇಳೆ ಮಾಜಿ ಪ್ರಧಾನಿಗಳು ಹೇಳಿದರು.

ಪದಾಧಿಕಾರಿಗಳ ಬದಲಾವಣೆ:

ಇನ್ನೊಂದು ತಿಂಗಳಲ್ಲಿ ರಾಜ್ಯ, ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುವುದು ಇಂದು ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷವನ್ನು ನಾವು ಬಲಿಷ್ಠವಾಗಿ ಕಟ್ಟಬೇಕು. ಕ್ರಿಯಾಶೀಲರಿಗೆ ಅವಕಾಶ ಕೊಡಬೇಕು. ಅದಕ್ಕೆ ಅಗತ್ಯವಾದ ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ನುಡಿದರು.

ಸರಕಾರದ ವಿರುದ್ಧ ವಿಷಯಾಧಾರಿತವಾಗಿ ಮಾತ್ರ ನಾವು ಹೋರಾಟ ಮಾಡುತ್ತೇವೆ. ವಿರೋಧ ಮಾಡಬೇಕು ಎನ್ನುವಂತೆ ಮಾಡುವುದು ಬೇಡ. ಗ್ಯಾರಂಟಿಗಳ ಬಗ್ಗೆ ನಮ್ಮ ತಕರಾರಿಲ್ಲ, ಅವನ್ನು ಇನ್ನೂ ಚೆನ್ನಾಗಿ ಜಾರಿ ಮಾಡಿ. ಅದಕ್ಕೆ ಗ್ಯಾರಂಟಿಗಳ ಅಡ್ಡ ಪರಿಣಾಮದಿಂದ ಕಷ್ಟಕ್ಕೆ ಸಿಲುಕಿದವರನ್ನೂ ಗಮನಿಸಿಕೊಳ್ಳಿ ಎಂದು ಒತ್ತಾಯ ಮಾಡೋಣ ಎಂದರು ಮಾಜಿ ಮುಖ್ಯಮಂತ್ರಿಗಳು.

ಸೋತವರ ಕಷ್ಟ ಏನು ಎಂದು ನಾನು ಬಲ್ಲೆ. ಅವರ ಜತೆ ಪಕ್ಷ ಬಲವಾಗಿ ನಿಲ್ಲುತ್ತದೆ. ಇದರಲ್ಲಿ ಸಂಶಯ ಬೇಡ. ಚುನಾವಣೆ ಯಾವಾಗ ಬರುತ್ತೋ ಬಿಡುತ್ತೋ ಎನ್ನುವ ಚರ್ಚೆ ಬೇಡ. ಆದರೆ, ಪಕ್ಷವನ್ನು ಈಗಿನಿಂದಲೇ ಕಟ್ಟುವ ಕೆಲಸ ಮಾಡೋಣ ಎಂದು ಅವರು ಒತ್ತಿ ಹೇಳಿದರು.

ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು, ಮಾಜಿ ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿದಂತೆ ಅನೇಕರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button