
ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲ ಶಾಸಕರು ಅಡ್ಡಮತದಾನ ಮಾಡಿದ್ದು, ಈ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿಸಲು ಮುಂದಾಗಿದ್ದಾರೆ.
ಪಕ್ಷಕ್ಕೆ ದ್ರೋಹ ಬಗೆದವರು ಯಾರೆಂಬುದನ್ನು ಪತ್ತೆ ಮಾಡಲು ದೇವರ ಎದುರು ಪ್ರಮಾಣ ಮಾಡಿಸಲು ಹೊರಟಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಈ ನಡೆಗೆ ಬಿಜೆಪಿಯ ಹಿರಿಯ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೂಡ ರಾಜ್ಯ ಬಿಜೆಪಿ ನಾಯಕರಿಗೆ ಕೆಲ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ನನ್ನ ಅಭಿಪ್ರಾಯದಲ್ಲಿ ಆಣೆ-ಪ್ರಮಾಣದ ವಿಚಾರವನ್ನು ಇಲ್ಲಿಗೆ ನಿಲ್ಲಿಸಿ. ಈ ಸರ್ಕಾರದಲ್ಲಿ ಯಾರನ್ನ ಬೇಕಾದರೂ ಬ್ಲಾಕ್ಮೇಲ್, ಬದಲಾವಣೆ ಮಾಡುತ್ತಾರೆ ಎಂದಿದ್ದಾರೆ.
ಕ್ರಾಸ್ ವೋಟಿಂಗ್ ಹೊಸದೇನಲ್ಲ. ಹೀಗಾಗಿ ಬಿಜೆಪಿಯವ್ರು ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗಬೇಡಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ ಆಗಿದೆ, ಈಗಿನ ಸಿಎಂ ದಾರಾಳವಾಗಿದ್ದಾರೆ. ಆ ಕಾರಣಕ್ಕೆಅಭಿವೃದ್ಧಿ ಹೆಸರಲ್ಲಿ ಕ್ಷೇತ್ರದ ಜನರ ಮುಂದೆ ಹೋಗಲು ಕ್ರಾಸ್ ವೋಟ್ ಮಾಡಿರಬಹುದು. ಇದನ್ನ ಇಲ್ಲಿಗೆ ಬಿಟ್ಟುಬಿಡಿ ಎಂದು ಸಲಹೆ ನೀಡಿದ್ದಾರೆ.
ರಾಜಕೀಯದಲ್ಲಿ ಆಗಿರುವ ಅಪಚಾರಗಳಿಗೆ ರಾಜಕೀಯ ಉತ್ತರ ಕಂಡುಕೊಳ್ಳಬೇಕು. ಧರ್ಮಸ್ಥಳವು ನಾಡಿನ ಭಕ್ತರ ಶ್ರದ್ಧಾ ಕೇಂದ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡಬೇಕು. ರಾಜಕೀಯದಲ್ಲಿ ನಡೆದಿರುವ ಅಡ್ಡಮತದಾನದಂತಹ ಅಪಸವ್ಯಗಳಿಗೆ ಪವಿತ್ರ ಕ್ಷೇತ್ರವನ್ನು ಎಳೆದು ತರುವುದು ಸರಿಯಲ್ಲ. ರಾಜಕೀಯ ಸಮಸ್ಯೆಗಳಿಗೆ ರಾಜಕೀಯ ಪರಿಹಾರವೇ ಉತ್ತಮ ಎಂದು ಬಿಜೆಪಿಯ ಹಿರಿಯ ಸುರೇಶ್ ಕುಮಾರ್ ಕೂಡ ಅಭಿಪ್ರಾಯಪಟ್ಟಿದ್ದಾರೆ.




