
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖಾ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಪೇಜಾವರ ಶ್ರೀ ಕುರಿತ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಹಂಸಲೇಖಾ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ಪೊಲೀಸರು ನೋಟೀಸ್ ನೀಡಿದ್ದರು. ಆದರೆ ಅನಾರೋಗ್ಯ ಕಾರಣದಿಂದ ವಿಚಾರಣೆಗೆ ಹಂಸಲೇಖಾ ಹಾಜರಾಗಿರಲಿಲ್ಲ. ಇದೀಗ ಹಂಸಲೇಖಾ ವಿಚಾರಣೆಗೆ ಹಾಜರಾಗಿದ್ದಾರೆ.
ಈ ನಡುವೆ ಹಂಸಲೇಖಾ ಜೊತೆ ಪೊಲೀಸ್ ಠಾಣೆಗೆ ನಾನೂ ಬರುತ್ತೇನೆ ಎಂದು ಪೋಸ್ಟ್ ಹಾಕಿದ್ದ ನಟ ಚೇತನ್ ಕೂಡ ಬಸವನಗುಡಿ ಪೊಲೀಸ್ ಠಾಣೆಗೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಆಗಮಿಸಿದ್ದಾರೆ. ಇನ್ನೊಂದೆಡೆ ನಟ ಚೇತನ್ ಗೆ ವಿರೋಧ ವ್ಯಕ್ತಪಡಿಸಿ ಭಜರಂಗದಳ ಕಾರ್ಯಕರ್ತರು ಕೂಡ ಠಾಣೆ ಮುಂದೆ ಜಮಾವಣೆಗೊಂಡಿದ್ದಾರೆ. ಕನ್ನಡ ಪರ ಸಂಘಟನೆಗಳು ನಟ ಚೇತನ್ ಪರ ನಾವಿದ್ದೇವೆ ಎಂದು ಘೋಷಣೆ ಕೂಗುತ್ತಿದ್ದರೆ ಇತ್ತ ಭಜರಂಗದಳ ಕಾರ್ಯಕರ್ತರು ನಟ ಚೇತನ್ ಹಾಗೂ ಹಂಸಲೇಖಾ ವಿರುದ್ಧ ಘೋಷಣೆ ಕೂಗಿದ್ದಾರೆ.
ಠಾಣೆಗೆ ಆಗಮಿಸುತ್ತಿದ್ದ ನಟ ಚೇತನ್ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಮುಂದಾಗಿದ್ದು, ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಒಟ್ಟಾರೆ ಪೊಲೀಸ್ ಠಾಣೆ ಎದುರು ಹೈಡ್ರಾಮಾ ನಡೆದಿದೆ.
ಹಂಸಲೇಖಾ ಜೊತೆ ನಾನೂ ಠಾಣೆಗೆ ಬರುತ್ತೇನೆ ಎಂದ ನಟ ಚೇತನ್