*ಬೆಳಗಾವಿ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ: ಹಲವು ಅವಾಂತರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ವರುಣ ಅಬ್ಬರಿಸಿದ್ದಾನೆ. ಬೆಳಗಾವಿಯಲ್ಲಿ ಸಹ ಮಳೆ ಆರ್ಭಟಿಸಿದ್ದು, ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.
ಬೈಲಹೊಂಗಲ ತಾಲೂಕಿನಲ್ಲಿ ಸುರಿದ ಮಳೆಯಿಂದ ಅನೇಕ ಅನಾಹುತಗಳಾಗಿದೆ. ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿದ್ದು ವ್ಯಾಪಾರಸ್ಥರು ನಷ್ಟ ಅನುಭವಿಸಿದ್ದಾರೆ. ಈ ನಡುವೆ ರಸ್ತೆಯಲ್ಲಿ ನೀರು ತುಂಬಿದ ಕಾರಣದಿಂದ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ಗಳು ಸಂಪೂರ್ಣವಾಗಿ ಮುಳುಗಿ ಹೋಗಿದೆ.
ಅಲ್ಲದೇ, ಕೆಲ ಬೈಕ್ಗಳು ನೀರಿನಲ್ಲಿ ತೇಲುತ್ತಿದ್ದವು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ತಮ್ಮ ಬೈಕ್ಗಳನ್ನ ನೀರಿನಿಂದ ಹೊರಗೆ ತೆಗೆಯಲು ಜನ ಹರಸಾಹಸ ಪಡುತ್ತಿರುವುದನ್ನ ನೋಡಬಹುದಾಗಿದೆ.
ಕಿತ್ತೂರು ತಾಲೂಕಿನಲ್ಲಿ ಧಾರಾಕಾರ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅರ್ಧ ಗಂಟೆಗಳ ಕಾಲ ಸುರಿದ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದವು. ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿ ಮಕ್ಕಳ ಪರದಾಟ ನಡೆಸಿದರು. ಬಳಿಕ ಸಿಬ್ಬಂದಿಗಳು ನೀರು ಹೊರಹಾಕಿದರು.
ವರುಣನ ಆರ್ಭಟಕ್ಕೆ ಸವದತ್ತಿ ನಗರದ ಮಾರುಕಟ್ಟೆ ರಸ್ತೆ ಸಂಪೂರ್ಣ ಜಲಾವೃತ ಗೊಂಡಿದೆ. ಆಟೋ ಬೈಕ್ ನೀರಿನಲ್ಲಿ ಸಿಲುಕಿ ಜನ ಹೈರಾಣಾದರು. ಅಂಗಡಿ ಮುಂಗಟ್ಟುಗಳ ಮುಂದೆ ನೀರು ನುಗ್ಗಿದ್ದರಿಂದ ಜನ ಪರದಾಡಿದ್ದರು.



