*ಚನ್ನಮ್ಮ ವೃತ್ತದ ಬಳಿ ಕಾರ್ ಚಲಾಯಿಸಿದ ಅಪ್ರಾಪ್ತ: 25 ಸಾವಿರ ದಂಡ ವಿಧಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪ್ರಾಪ್ತ ಬಾಲಕನೊಬ್ಬ ರಸ್ತೆಯಲ್ಲಿ ರಾಜಾರೋಷವಾಗಿ ಕಾರು ಚಾಲನೆ ಮಾಡುತ್ತಿದ್ದ ವೇಳೆ ಪೊಲೀಸರು ವಾಹನ ಸಮೇತ ಆತನನ್ನು ವಶಕ್ಕೆ ಪಡೆದ ಘಟನೆ ಬೆಳಗಾವಿ ನಗರದ ಕಿತ್ತೂರು ಚನ್ನಮ್ಮ ವೃತ್ತದ ಸಮೀಪದ ಗಣೇಶಗುಡಿ ಬಳಿ ನಡೆದಿದ್ದು, 25 ಸಾವಿರ ದಂಡ ವಿಧಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ತಡೆಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ, ಕೆಎ-26-ಎಮ್-3409 (KA-26-M-3409) ನಂಬರಿನ ಕಾರನ್ನು ಸಣ್ಣ ಹುಡುಗನೊಬ್ಬ ಚಲಾಯಿಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅಲರ್ಟ್ ಆದ ಸಂಚಾರಿ ಪೊಲೀಸರು ಚನ್ನಮ್ಮ ವೃತ್ತದ ಗಣೇಶಗುಡಿ ಬಳಿ ಕಾರನ್ನು ತಡೆದು ನಿಲ್ಲಿಸಿದ್ದಾರೆ.
ಪರಿಶೀಲಿಸಿದಾಗ ಕಾರು ಚಲಾಯಿಸುತ್ತಿದ್ದವನು ಅಪ್ರಾಪ್ತ ಬಾಲಕ ಎಂಬುದು ದೃಢಪಟ್ಟಿದೆ. ಸಾರ್ವಜನಿಕರ ಜೀವಕ್ಕೆ ಅಪಾಯ ತರುವಂತೆ ಬೇಜವಾಬ್ದಾರಿಯಿಂದ ವಾಹನ ಚಾಲನೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರನ್ನು ಸೀಜ್ ಮಾಡಿ, ಬಾಲಕನ ಪೋಷಕರಿಗೆ ಮಾಲೀಕರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ.
ಮೋಟಾರು ವಾಹನ ಕಾಯ್ದೆಯ ಕಠಿಣ ನಿಯಮಗಳ ಪ್ರಕಾರ, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡಿದರೆ ಪೋಷಕರು ಅಥವಾ ವಾಹನ ಮಾಲೀಕರೇ ನೇರ ಹೊಣೆಗಾರರಾಗುತ್ತಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕರು ಬರೋಬ್ಬರಿ 25,000 ರೂಪಾಯಿ ಭಾರಿ ದಂಡವನ್ನು ಪಾವತಿಸಬೇಕಾಗಿದೆ.
ಈ ಘಟನೆಯ ಬೆನ್ನಲ್ಲೇ ಬೆಳಗಾವಿ ನಗರ ಸಂಚಾರ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ಸಂದೇಶ ರವಾನಿಸಿದೆ.



