Latest

ಅಯೋಧ್ಯೆ ಪ್ರಕರಣದ ಸಂಪೂರ್ಣ ಇತಿಹಾಸ ಇಲ್ಲಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಶತಮಾನಗಳ ಇತಿಹಾಸವಿರುವ ಅಯೋಧ್ಯಾ ಜಾಗದ ವಿವಾದಕ್ಕೆ ಶನಿವಾರ ಮಹತ್ವದ ದಿನ. ಸರ್ವೋಚ್ಛ ನ್ಯಾಯಾಲಯ ಈ ಸಂಬಂಧ ಮಹತ್ವದ ತೀರ್ಪು ನೀಡಲಿದ್ದು, ಇಡೀ ದೇಶ ಈ ಕ್ಷಣಕ್ಕಾಗಿ ಕಾಯುತ್ತಿದೆ.
ತೀರ್ಪು ಯಾರ ಪರವಾಗಿ ಬರಲಿದೆ? ತೀರ್ಪಿನ ಮುಂದಿನ ಪರಿಣಾಮಗಳೇನು? ಎಲ್ಲದಕ್ಕೂ ಶನಿವಾರ ಬೆಳಗ್ಗೆ 10.30ಕ್ಕೆ ಸ್ಪಷ್ಟ ಚಿತ್ರಣ ದೊರಕಲಿದೆ.
1528 – ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ನಿಂದ ಮಸೀದಿ ನಿರ್ಮಾಣ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಿದ ಎಂಬುದು ಆರೋಪ.
1853 – ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಹಿಂದೂ ಮುಸಲ್ಮಾನರ ನಡುವೆ ಮೊಟ್ಟ ಮೊದಲ ಕೋಮು ಗಲಭೆ ಅಯೋಧ್ಯೆಯಲ್ಲಿ ದಾಖಲಾಯಿತು.
1859 – ವಿವಾದಿತ ಸ್ಥಳದ ಸುತ್ತ ತಂತಿಬೇಲಿ ಹಾಕಿಸಿದ್ದ ಬ್ರಿಟೀಷ್ ಸರ್ಕಾರ ಒಳಾಂಗಣದ ಭಾಗವನ್ನು ಮುಸ್ಲೀಮರಿಗೂ, ಹೊರಾಂಗಣ ಭಾಗವನ್ನು ಹಿಂದೂಗಳಿಗೂ ನೀಡಿ ಕೈ ತೊಳೆದುಕೊಂಡಿತ್ತು.
1885 – ಹಿಂದೂಗಳಿಗೆ ಹಂಚಿಕೆಯಾಗಿದ್ದ ಹೊರಾಂಗಣದ ಭಾಗದಲ್ಲಿ ರಾಮ ಮಂದಿರ ನಿರ್ಮಿಸಲು ಮಹಂತ ರಘುವೀರ್ ದಾಸ್‍ ನಿರಾಕರಿಸಿದರು.
1949 – ಮಸೀದಿಯೊಳಗೆ ದಿಢೀರನೆ ರಾಮನ ವಿಗ್ರಹ ಕಾಣಿಸಿಕೊಂಡಿತ್ತು. ರಾತ್ರೋ ರಾತ್ರಿ ಹಿಂದೂಗಳೇ ತಂದಿಟ್ಟಿದ್ದಾರೆ ಎಂದು ಮುಸ್ಲೀಮರು ದೂರು ನೀಡಿದ್ದರು. ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತ ಸರ್ಕಾರ ವಿವಾದಿತ ಸ್ಥಳಕ್ಕೆ ಬೀಗ ಜಡಿದಿತ್ತು.
1950-61 – ರಾಮ್ ಲಲ್ಲಾ ಪೂಜೆ ಹಾಗೂ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ನಾಲ್ಕು ಪ್ರತ್ಯೇಕ ಅರ್ಜಿಗಳು ಕೋರ್ಟ್‌ ಮೆಟ್ಟಿಲೇರಿದವು.
1984 – ರಾಮ ಜನ್ಮಭೂಮಿ ವಿಮೋಚನೆಗಾಗಿ ಅಸ್ತಿತ್ವಕ್ಕೆ ಬಂದ ಹಿಂದೂ ಸಮಿತಿ. ಮಂದಿರ ನಿರ್ಮಾಣದ ಗುರಿಯೊಂದಿಗೆ, ವಿಶ್ವ ಹಿಂದೂ ಪರಿಷತ್ ಹಾಗೂ ಎಲ್‍ಕೆ.ಅಡ್ವಾಣಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದಿಂದ ರಾಮ ಮಂದಿರ ಅಭಿಯಾನ ಆರಂಭ.
1986 – ಮಸೀದಿ ಬಾಗಿಲು ತೆರವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ತೀರ್ಪು ನೀಡಿದ ನ್ಯಾಯಾಲಯ. ಪ್ರತಿಭಟನೆಗೆ ಮುಂದಾದ ಮುಸ್ಲೀಮರಿಂದ ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ ಸ್ಥಾಪನೆ.
1989 – ರಾಮ ಮಂದಿರಕ್ಕಾಗಿ ಅಭಿಯಾನ ಆರಂಭಿಸಿದ ವಿಶ್ವ ಹಿಂದು ಪರಿಷತ್, ವಿವಾದಿತ ಸ್ಥಳದಲ್ಲಿ ಮಸೀದಿಯ ಪಕ್ಕದಲ್ಲೇ ರಾಮ ಮಂದಿರಕ್ಕಾಗಿ ಶಂಕು ಸ್ಥಾಪನೆ. ನಾಲ್ಕು ಅರ್ಜಿಗಳ ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್‍ಗೆ ವರ್ಗ.
ಗುಜರಾತಿನ ರಾಮನಾಥಪುರದಿಂದ ಅಯೋಧ್ಯೆವರೆಗೆ ನಡೆದು ಬಂದ ಎಲ್‌.ಕೆ. ಅಡ್ವಾಣಿಯವರ ರಾಮ ರಥಯಾತ್ರೆ
ಸೆಪ್ಟೆಂಬರ್ 1990 – ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಗುಜರಾತಿನ ರಾಮನಾಥಪುರದಿಂದ ಅಯೋಧ್ಯೆವರೆಗೆ ರಾಮ ರಥಯಾತ್ರೆ ಕೈಗೊಂಡ ಬಿಜೆಪಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿ.
1990 – ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ಮಸೀದಿಯ ಪಾರ್ಶ್ವ ಭಾಗ ಧ್ವಂಸ. ಸಮಸ್ಯೆ ಬಗೆಹರಿಸಲು ಪ್ರಧಾನಿ ಚಂದ್ರಶೇಖರ್‌ ಅವರಿಂದ ವಿಫಲ ಯತ್ನ.
1991 – ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ.
ಡಿಸೆಂಬರ್ 05, 1992 – ಕರ್ನಾಟಕ ಸೇರಿದಂತೆ ರಾಷ್ಟ್ರದ ನಾನಾ ಮೂಲೆಗಳಿಂದ ವಿವಾದಿದ ಸ್ಥಳಕ್ಕೆ ಆಗಮಿಸಿದ ಕರಸೇವಕರು. ಕರಸೇವಕರನ್ನು ಉದ್ದೇಶಿಸಿ ಉದ್ರೇಕಕಾರಿ ಭಾಷಣ ಮಾಡಿದ್ದ ಎಲ್‌.ಕೆ. ಅಡ್ವಾಣಿ.
ಡಿಸೆಂಬರ್ 06, 1992 – ವಿಎಚ್‍ಪಿ, ಶಿವಸೇನೆ ಹಾಗೂ ಬಿಜೆಪಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ, ರಾಷ್ಟ್ರವ್ಯಾಪಿ ಹರಡಿದ ಕೋಮುಗಲಭೆ ಸುಮಾರು 2000 ಮಂದಿ ಬಲಿ. ಪಾಕಿಸ್ತಾನ, ಬಾಂಗ್ಲಾದೇಶಕ್ಕೂ ವ್ಯಾಪಿಸಿದ ಕೋಮುಗಲಭೆಗೆ ಅಲ್ಲಿನ ಹಿಂದೂಗಳು ತತ್ತರ. ನೆಲಕ್ಕುರುಳಿದ ಹಿಂದೂ ದೇವಾಲಯಗಳು.
1993 – ಹಿಂದೂಗಳಿಗೆ ಮಂಜೂರಾಗಿದ್ದ ಹೊರಾಂಗಣ ಪ್ರದೇಶವನ್ನು (67 ಎಕರೆ) ತನ್ನ ತೆಕ್ಕೆಗೆ ತೆಗೆದುಕೊಂಡ ಉತ್ತರಪ್ರದೇಶ ಸರ್ಕಾರ. ಬಾಬ್ರಿ ಮಸೀದಿ ನಿರ್ಮಾಣಕ್ಕೂ ಮುಂಚೆ ಅಲ್ಲಿ ಹಿಂದೂ ದೇವಾಲಯ ಇತ್ತೆ ಎಂಬುದನ್ನು ಪತ್ತೆ ಹಚ್ಚಲು ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಿದ ಸರ್ಕಾರ.
ಅಕ್ಟೋಬರ್ 1993 – ಬಾಬರಿ ಮಸೀದಿ ಕೆಡವಲು ಸಂಚು ರೂಪಿಸಿದ ಆರೋಪದ ಮೇಲೆ ಬಿಜೆಪಿ ಹಿರಿಯ ಮುಖಂಡ ಎಲ್‍ಕೆ.ಅಡ್ವಾಣಿ ಸೇರಿದಂತೆ 13 ಜನರ ಮೇಲೆ ಜಾರ್ಜ್‍ಶೀಟ್ ಸಲ್ಲಿಸಿದ ಸಿಬಿಐ.
1994 – ಪ್ರಕರಣದ ನಿರಂತರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಭಾಗೀಯ ಪೀಠ.
ಸೆಪ್ಟೆಂಬರ್ 27, 1994 – ಇಸ್ಲಾಂ ಧರ್ಮದ ಪ್ರಕಾರ ನಮಾಜ್ ಮಾಡಲು ಮಸೀದಿಯ ಅಗತ್ಯವಿಲ್ಲ, ಬಯಲು ಪ್ರದೇಶದಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂದು ಅಭಿಪ್ರಾಯಪಟ್ಟಿದ್ದ ಅಲಹಾಬಾದ್ ಹೈಕೋರ್ಟ್.
1998 – ಕೇಂದ್ರದಲ್ಲಿ ಅಧಿಕಾರ ಹಿಡಿದ ಎನ್‍ಡಿಎ ಮೈತ್ರಿ ಕೂಟ, ಪ್ರಧಾನಿ ಪಟ್ಟಕ್ಕೇರಿದ ಅಟಲ್ ಬಿಹಾರಿ ವಾಜಪೇಯಿ.
ಡಿಸೆಂಬರ್ 6, 2001 – ವಿಎಚ್‍ಪಿ ಯಿಂದ ಮತ್ತೆ ರಾಮ ಜನ್ಮಭೂಮಿಯಲ್ಲಿ ಮಂದಿರ ಸ್ಥಾಪನೆಯ ಸಂಕಲ್ಪ. ಬಾಬರಿ ಮಸೀದಿ ಧ್ವಂಸ ವಾರ್ಷಿಕ ದಿನದ ಆಚರಣೆ, ಹಲವೆಡೆ ಗಲಭೆ, ಹಿಂಸಾಚಾರ.
ಮೇ 4, 2001 – ಎಲ್‍ಕೆ ಅಡ್ವಾಣಿ, ಕಲ್ಯಾಣ್‍ಸಿಂಗ್ ಸೇರಿದಂತೆ 13 ಮುಖಂಡರ ಮೇಲಿದ್ದ ಚಾರ್ಜ್‍ಶೀಟ್ ರದ್ದು ಮಾಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್‍ಕೆ. ಶುಕ್ಲಾ. ಐಪಿಸಿ ಸೆಕ್ಷನ್‌ 197 (ಮಸೀದಿ ಧ್ವಂಸ) ಹಾಗೂ 198 (ಕ್ರಿಮಿನಲ್ ಪಿತೂರಿ) ಎರಡನ್ನೂ ಪ್ರತ್ಯೇಕಿಸಿ ಆದೇಶ.
ಜನವರಿ 2002 – ಹಿಂದೂ-ಮುಸ್ಲಿಂ ನಾಯಕರ ಜೊತೆಗೆ ಮಾತುಕತೆ ನಡೆಸಲು ತಮ್ಮ ಕಛೇರಿಯಲ್ಲಿಯೇ ಪ್ರತ್ಯೇಕ ಕೇಂದ್ರ ಸ್ಥಾಪಿಸಿದ ಅಟಲ್ ಬಿಹಾರಿ ವಾಜಪೇಯಿ.
ಫೆಬ್ರವರಿ 2002 – ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ರಾಮಮಂದಿರ ನಿರ್ಮಾಣ ಸೇರ್ಪಡೆ. ಅಯೋಧ್ಯೆಯಿಂದ ರೈಲಿನಲ್ಲಿ ಹಿಂದಿರುಗುತ್ತಿದ್ದ 58 ಜನ ಹಿಂದೂ ಕಾರ್ಯಕರ್ತರ ಹತ್ಯೆ. ಗೋಧ್ರಾ ಹಿಂಸಾಚಾರಕ್ಕೆ ನಾಂದಿ.
 ಮಾರ್ಚ್ 2002 – ಗುಜರಾತ್‍ನ ಗೋಧ್ರಾದಲ್ಲಿ ಮೇರೆ ಮೀರಿದ ಹಿಂಸಾಚಾರ. ಸುಮಾರು 1000 ಕ್ಕೂ ಅಧಿಕ ಜನರ ಹತ್ಯೆ.
ಏಪ್ರಿಲ್ 2002 – ಮೂವರು ಹೈಕೋರ್ಟ್ ಜಡ್ಜ್‍ಗಳಿದ್ದ ಪೀಠದಿಂದ ವಿವಾದಿತ ಧಾರ್ಮಿಕ ಸ್ಥಳದ ವಿಚಾರಣೆ.
ಜನವರಿ 2003 – ವಿವಾದಿತ ಸ್ಥಳ ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂ ಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಆರಂಭ.
ಆಗಸ್ಟ್ 2003 – ಮಸೀದಿಯ ಕೆಳಗೆ ರಾಮನ ದೇವಾಲಯ ಇತ್ತು ಎನ್ನುವುದಕ್ಕೆ ಕುರುಹುಗಳಿವೆ ಎಂದು ಖಚಿತ ಪಡಿಸಿದ ಭೂ ಗರ್ಭ ಶಾಸ್ತ್ರಜ್ಞರು. ಹಿಂದೂ ಕಾರ್ಯಕರ್ತ ರಾಮಚಂದ್ರ ದಾಸ್ ಪರಮಹಂಸ ಅವರ ಕೊನೆಯ ಆಸೆಯಂತೆ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂದು ಘೋಷಿಸಿದ ವಾಜಪೇಯಿ. ಆದರೆ ಸಮೀಕ್ಷೆಯನ್ನು ಅಲ್ಲಗೆಳೆದ ಮುಸ್ಲಿಂ ಮುಖಂಡರು.
ಸೆಪ್ಟೆಂಬರ್ 2003 – ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಏಳು ಜನ ಹಿಂದೂ ನಾಯಕರ ವಿರುದ್ಧ ವಿಚಾರಣೆಗೆ ಕೋರ್ಟ್ ಆದೇಶ. ಆದರೆ 1992ರಲ್ಲಿ ಘಟನಾ ಸ್ಥಳದಲ್ಲೇ ಇದ್ದ ಉಪ ಪ್ರಧಾನಿ ಅಡ್ವಾನಿ ವಿರುದ್ಧ ಯಾವುದೇ ಆರೋಪ ಕೇಳಿ ಬಂದಿರಲಿಲ್ಲ.
ಅಕ್ಟೋಬರ್ 2004 – ಲೋಕಸಭಾ ಚುನಾವಣೆಯ ಹಿನ್ನೆಲೆ ಮತ್ತೆ ಅಯೋಧ್ಯೆ ವಿವಾದವನ್ನು ಮುನ್ನೆಲೆಗೆ ತಂದ ಅಡ್ವಾಣಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ ಎಂಬ ಹೇಳಿಕೆ.
2004 – ಲೋಕಸಭಾ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ. ಪ್ರಧಾನಿ ಹುದ್ದೆಗೆ ಏರಿದ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್.
ನವೆಂಬರ್ 2004 – ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾನಿ ಕೈವಾಡ ಇಲ್ಲ ಎಂಬ ಹಿಂದಿನ ತೀರ್ಪು ಮರು ಪರಿಶೀಲನೆ ಅರ್ಜಿಯನ್ನು ಸ್ವೀಕರಿಸಿದ ಅಲಹಾಬಾದ್ ಹೈಕೋರ್ಟ್.
ಜುಲೈ 2005 – ಶಂಕಿತ ಮುಸ್ಲಿಂ ಉಗ್ರರಿಂದ ವಿವಾದಿತ ಸ್ಥಳದ ಮೇಲೆ ದಾಳಿ. ಭದ್ರತಾ ಪಡೆಯಿಂದ ಐವರ ಹತ್ಯೆ, ಆರನೇ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ.
ಜೂನ್ 2009 – ಸುಮಾರು 17 ವರ್ಷಗಳ ನಂತರ ಲೆಬ್ರಹಾನ್ ಸಮಿತಿಯಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖಾ ವರದಿ ಸಲ್ಲಿಕೆ.
ನವೆಂಬರ್ 2009 – ಮಸೀದಿ ಧ್ವಂಸ ಪ್ರಕರಣದಲ್ಲಿ ಹಿಂದೂ ಧರ್ಮ ಪಾಲಕ ಹಾಗೂ ಬಿಜೆಪಿ ನಾಯಕರ ಕೈವಾಡವಿದೆ ಎಂದ ಲೆಬ್ರಹಾನ್ ಸಮಿತಿ ವರದಿ ಬಗ್ಗೆ ಸಂಸತ್ತಿನಲ್ಲಿ ಭಾರೀ ಗದ್ದಲ.
ಸೆಪ್ಟೆಂಬರ್ 2010 – ವಿವಾದಿತ ಭೂಮಿಯನ್ನು ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್‍ನಿಂದ ತೀರ್ಪು. ತಲಾ ಮೂರನೇ ಒಂದು ಭಾಗವನ್ನು ಹಿಂದೂ ಹಾಗೂ ಮುಸ್ಲೀಮರಿಗೆ ಹಂಚಿಕೆ, ವಿವಾದಿತ ಮುಖ್ಯ ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಿ ತೀರ್ಪು ನೀಡಿದ ಅಲಹಾಬಾದ್ ಕೋರ್ಟ್.
ಮೇ 2011 – 2010ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಹಿಂದೂ, ಮುಸ್ಲೀಂ ನಾಯಕರು. ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿದ ಸುಪ್ರೀಂ.
ಡಿಸೆಂಬರ್ 25, 2014 – 1949ರಲ್ಲೇ ವಿವಾದಿತ ಸ್ಥಳಕ್ಕಾಗಿ ಅರ್ಜಿ ಹಾಕಿದ್ದ ಏಳು ಮಂದಿ ಅಯೋಧ್ಯೆ ನಿವಾಸಿಗಳ ಪೈಕಿ ಹಿರಿಯರಾದ ಮೊಹಮ್ಮದ್ ಫರೂಕ್ ನಿಧನ.
ಮಾರ್ಚ್ 6, 2017 – ಐಪಿಸಿ ಸೆಕ್ಷನ್‌ 197 ಹಾಗೂ 198 ಜಂಟಿಯಾಗಿ ಪರಿಗಣಿಸಿ, ಬಾಬರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ್ದರ ಬಗ್ಗೆ ಸಿಬಿಐ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್.
ಮಾರ್ಚ್ 22, 2017 – ಎರಡೂ ಕೋಮಿನ ಮುಖಂಡರು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ವ್ಯಾಜ್ಯವನ್ನು ಬಗೆಹರಿಸಿಕೊಳ್ಳುವುದಾದರೆ ಮಧ್ಯಸ್ಥಿಕೆದಾರರನ್ನು ನೇಮಿಸಲು ಸಿದ್ಧ ಎಂದ ಸುಪ್ರೀಂ ಕೋರ್ಟ್‌.
ಏಪ್ರಿಲ್ 19, 2017 – ಎಲ್.ಕೆ.ಅಡ್ವಾಣಿ ಸೇರಿದಂತೆ 13 ಜನ ಆರೋಪಿಗಳ ಮೇಲಿನ ಆರೋಪ ಪಟ್ಟಿ ರದ್ದುಗೊಳಿಸದಂತೆ ಸಿಬಿಐ ಕೋರಿದ್ದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌, ಕಲ್ಯಾಣ್ ಸಿಂಗ್ ಹೊರತು ಪಡಿಸಿ ಉಳಿದವರ ಮೇಲೆ ವಿಚಾರಣೆ ನಡೆಸಲು ಆದೇಶ.
ಮೇ 30, 2017 – ಎಲ್‍ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ 12 ಜನರ ವಿರುದ್ಧ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲು ಮಾಡಿಕೊಂಡ ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ. ಈ ವಿಚಾರಣೆ ಈಗಲೂ ನಡೆಯುತ್ತಲೇ ಇದೆ.
ಡಿಸೆಂಬರ್ 05, 2017 – 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ 13 ಅರ್ಜಿಗಳನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ. ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದ ಸುನ್ನಿ ಮುಸ್ಲಿಂ ಸಮುದಾಯ.
ಸೆಪ್ಟೆಂಬರ್ 9, 2018 – ‘ಸುಪ್ರೀಂ ಕೋರ್ಟ್ ನಮ್ಮದು. ನ್ಯಾಯಾಂಗ ನಮ್ಮದು. ದೇಶವೂ ನಮ್ಮದು. ದೇವಾಲಯವೂ ನಮ್ಮದೇ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರಪ್ರದೇಶದ ಸಚಿವ ಮುಕುಟ್ ಬಿಹಾರಿ ವರ್ಮಾ.
ಸೆಪ್ಟೆಂಬರ್ 27, 2018 – ಮುಸ್ಲಿಂ ಧರ್ಮೀಯರು ನಮಾಜು ಮಾಡಲು ಮಸೀದಿಯೇ ಬೇಕಿಲ್ಲ. ಬಯಲು ಪ್ರದೇಶದಲ್ಲೂ ಪ್ರಾರ್ಥನೆ ಸಲ್ಲಿಸಬಹುದು ಎಂಬ 1994ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಎತ್ತಿ ಹಿಡಿದಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿತ್ತು.
ಅಕ್ಟೋಬರ್ 2018 – ರಾಮ ಮಂದಿರ ವಿಚಾರಣೆಯನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರದಿಂದ ಸುಪ್ರೀಂಗೆ ಅರ್ಜಿ, “ಯಾವ ವಿಚಾರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕು ಎಂಬುದು ನ್ಯಾಯಾಲಯಕ್ಕೆ ಗೊತ್ತಿದೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದ ಸುಪ್ರೀಂ
ಅಕ್ಟೋಬರ್ 2018 – ನಿರಂತರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್.
ಡಿಸೆಂಬರ್ 24, 2018 – ಅಯೋಧ್ಯೆ ವಿವಾದ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಜನವರಿ 4 ರಿಂದ ವಿಚಾರಣೆ ನಡೆಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಿದ್ದ ದ್ವಿಸದಸ್ಯ ಪೀಠ.
ಜನವರಿ 4, 2019 – 60 ಸೆಕೆಂಡ್‌ಗಳಲ್ಲಿ ಆದೇಶ ನೀಡಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ, ನ್ಯಾ.ಎಸ್‌.ಕೆ. ಕೌಲ್‌ ಅವರಿದ್ದ ನ್ಯಾಯಾಪೀಠ ಜನವರಿ 10ರಂದು ಪ್ರಕರಣದ ಬಗ್ಗೆ ಮುಂದಿನ ಆದೇಶ ನೀಡುವುದಾಗಿ ಹೇಳಿದೆ.
ಮಾ. ೦೬, ೨೦೧೯, ಅಯೋಧ್ಯ ವಿವಾದ ಬಗೆಹರಿಸಲು ಮಧ್ಯಸ್ಥಿಕೆಗೆ ವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್.
ಮಾ. ೦೮, ೨೦೧೯- ಅಯೋಧ್ಯ ವಿವಾದ  ಬಗೆಹರಿಸಲು ಮಧ್ಯಸ್ಥಿಕೆಗಾಗಿ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಕಲೀಫುಲ್ಲಾ ನೇತೃತ್ವದಲ್ಲಿ ಮೂರು ಮಂದಿಯ ಸಮಿತಿ ರಚನೆ

ಆದರೆ ರಾಜಿ ಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಮುಂದುವರಿದೆ, ಇದೀಗ ನವೆಂಬರ್ 9, 2019ರಂದು ಸುಪ್ರಿಂ ಕೋರ್ಟ್ ಅಂತಿಮ ತೀರ್ಪು ನೀಡಲಿದೆ.

ನಾಳೆಯೇ ಅಯೋಧ್ಯಾ ತೀರ್ಪು -Big Breaking

ಶನಿವಾರ ರಾಜ್ಯಾದ್ಯಂತ ಶಾಲೆ, ಕಾಲೇಜಿಗೆ ರಜೆ -ಸಚಿವ ಸುರೇಶ ಕುಮಾರ

Home add -Advt

Related Articles

Back to top button