Kannada NewsKarnataka NewsLatest

ಹುಕ್ಕೇರಿ ಹಿರೇಮಠ ಸರ್ವ ಧರ್ಮೀಯರ ಆದರಣೀಯ ಕೇಂದ್ರ; ಶಾಸಕ ರಾಜು ಸೇಠ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿರುವ ಹುಕ್ಕೇರಿ ಹಿರೇಮಠ ಸರ್ವ ಧರ್ಮೀಯರಿಗೂ ಆದರಣೀಯ ಕೇಂದ್ರವಾಗಿದೆ. ಶ್ರೀಗಳು ಎಲ್ಲ ಸಮುದಾಯದವನ್ನು ಸೇರಿಸಿ ಅವರಿಗೆ ಧರ್ಮ ಸಂದೇಶ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಹೇಳಿದರು.

ಭಾನುವಾರ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಅವರು ಮಾತನಾಡಿದರು.

Home add -Advt

“ಆಧುನಿಕ ವಚನಕಾರರೂ ಆಗಿರುವ ಶ್ರೀಗಳು ರಚಿಸಿರುವ ವಚನಗಳು ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅನುವಾದ ವಾಗಿರುವುದು ಹೆಮ್ಮೆಯ ಸಂಗತಿ. ಬೆಳಗಾವಿ ನಗರದಲ್ಲಿ ಅವರು ಭವ್ಯ ಶ್ರೀಮಠ ನಿರ್ಮಾಣ ಮಾಡುತ್ತಿದ್ದು ಅದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವ ಅಗತ್ಯವಿದೆ” ಎಂದು ರಾಜು ಸೇಠ್ ಹೇಳಿದರು.

“ಹುಕ್ಕೇರಿ ಹಿರೇಮಠದ ಡಾ. ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜು ಸೇಠ್ ಅವರ ಹಿರಿಯ ಸಹೋದರ ಫಿರೋಜ್ ಸೇಠ್ ಅವರು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಅಪಾರ ಪ್ರಮಾಣದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ. ಪ್ರಸ್ತುತ ಅವರ ಸಹೋದರ ರಾಜು ಸೇಠ್ ಅವರು ಅದೇ ಕ್ಷೇತ್ರದಿಂದ ಆಯ್ಕೆಯಾಗಿರುವುದು ಅಭಿಮಾನದ ಸಂಗತಿ” ಎಂದರು.

“ಫಿರೋಜ್ ಸೇಠ್ ಅವರ ಮಾರ್ಗದರ್ಶನದಲ್ಲಿ ಶಾಸಕ ರಾಜು ಸೇಠ್ ಅವರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲಿ” ಹಾರೈಸಿ ಆಶೀರ್ವದಿಸಿದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಮುಕ್ತಾರ ಹುಸೇನ್ ಪಠಾಣ, ಜಂಗಮ ಸಮಾಜದ ಮುಖ್ಯಸ್ಥ ವಿರೂಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸವಡಿ ಸಾಲಿಮಠ, ವಿಜಯ ಶಾಸ್ತ್ರಿಗಳು, ಕಾಂಗ್ರೆಸ್ ಮುಖಂಡರಾದ ರಾಜು ಪಾಟೀಲ, ಪ್ರವೀಣ ಮೋತಿಮಠ, ಡಾ. ದಿನೇಶ ನಾಶಿಪುಡಿ, ಪರಶುರಾಮ ವಗ್ಗಣ್ಣವರ, ನಾನಾಗೌಡ ಬಿರಾದಾರ, ಬುಡಾ ಅಭಿಯಂತರ ಎಂ.ವಿ.ಹಿರೇಮಠ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button