ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಆರೋಗ್ಯಕರ ರಾಜಕಾರಣ ಮಾಡುತ್ತಿದ್ದೇನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

* * *ಈಶ್ವರಿಯ ವಿಶ್ವವಿದ್ಯಾಲಯ ಧ್ಯಾನ ಕೇಂದ್ರದ ಚೌಕಟ್ ಅಳವಡಿಸುವ ಪೂಜೆ ನೆರವೇರಿಸಿದ ಸಚಿವರು*
*ಬೆಳಗಾವಿ:* ನಾನು ರಾಜಕೀಯಕ್ಕೆ ಬಂದಾಗ ವಿರೋಧಿಸಿದವರೇ ಜಾಸ್ತಿ, ನನ್ನನ್ನು ಕೆಣಕಿದರೆ ಬಿಡುವುದಿಲ್ಲ, ಯಾರಾದರೂ ನನ್ನ ಆತ್ಮಗೌರವಕ್ಕೆ ದಕ್ಕೆ ತಂದರೆ ಸುಮ್ಮನಿರುವುದಿಲ್ಲ. ಕ್ಷೇತ್ರದ ಜನರೇ ಉತ್ತರಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಸಾಂಬ್ರಾ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಧ್ಯಾನ ಕೇಂದ್ರದ ನೂತನ ಕಟ್ಟಡದ ಚೌಕಟ್ ಅಳವಡಿಸುವ ಪೂಜೆಯನ್ನು ನೆರವೇರಿಸಿ ಮಾತನಾಡಿದ ಸಚಿವರು, ರಾಜಕಾರಣಿಗಳನ್ನು ದೂರ ಇಡುವ ಹೊತ್ತಿನಲ್ಲಿ ಕ್ಷೇತ್ರದ ಜನರು ಮನೆಗೆ ಮಗಳು ಬಂದಳೆಂದು ಸೀರೆ ಕೊಟ್ಟು ಗೌರವಿಸುತ್ತಿದ್ದಾರೆ. ನನ್ನಂತಹ ಭಾಗ್ಯಶಾಲಿ ಯಾರೂ ಇಲ್ಲ ಎಂದರು.
ಹಿಂದೂ ಸಂಸ್ಕೃತಿಯಲ್ಲಿ ಶ್ರಾವಣ ಸೋಮವಾರ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ. ಶ್ರಾವಣ ಸೋಮವಾರದಂದೇ ಇಂಥ ಒಳ್ಳೆ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಸಾಂಬ್ರಾ ಜಾತ್ರೆಯ ಸಂದರ್ಭದಲ್ಲಿ 5 ಕೋಟಿ ರೂಪಾಯಿ ಕೊಟ್ಟಿದ್ದೇನೆ. ನಗರದ ಮಾದರಿಯಲ್ಲಿ ಈ ಪ್ರದೇಶ ಇಂದು ಬೆಳೆದಿದೆ. 7 ವರ್ಷ ಹಿಂದೆ ಗ್ರಾಮ ಹೇಗಿತ್ತು, ಇಂದು ಹೇಗಾಗಿದೆ ಎನ್ನುವುದನ್ನು ನೀವೆಲ್ಲ ನೋಡುತ್ತಿದ್ದೀರಿ ಎಂದು ಹೇಳಿದರು.

ಪ್ರತಿ ಊರಲ್ಲಿ ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ದೇವರಲ್ಲಿ ವಿಶ್ವಾಸವಿಟ್ಟು ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇಡೀ ರಾಜ್ಯದಲ್ಲಿ ಕ್ಷೇತ್ರವನ್ನು ಗುರುತಿಸುವಂತೆ ಮಾಡಿದ್ದೇನೆ ಎಂದು ಸಚಿವರು ಹೇಳಿದರು.
ನಮ್ಮ ಸಂಸ್ಕೃತಿಯೇ ಹಾಗೆ, ಕಷ್ಟ ಇರಲಿ, ಸುಖ ಇರಲಿ ದೇವರನ್ನು ನೆನೆಸುತ್ತೇವೆ. ಕ್ಷೇತ್ರದಲ್ಲಿ ಜನರ ಮನಸ್ಸನ್ನು ಗೆಲ್ಲುವ ಅವಕಾಶ ಸಿಕ್ಕಿದೆ. ಶಾಶ್ವತವಾಗಿ ಉಳಿಯುವ ಕೆಲಸ ಮಾಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸದಿಂದ ಮುಕ್ತಿ ಕೊಡಿಸಲಾಗಿದೆ. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಗೃಹಲಕ್ಷ್ಮೀ ಯೋಜನೆ ಹಣವನ್ನು ಶ್ರಾವಣದ ಕೊನೆಯ ಸೋಮವಾರಕ್ಕೂ ಮೊದಲು ಸಂದಾಯ ಮಾಡಲಾಗುವುದು. ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಆರೋಗ್ಯಕರ ರಾಜಕಾರಣ ಮಾಡುತ್ತಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
* *50 ಲಕ್ಷ ರೂಪಾಯಿ ಅನುದಾನ*
ಮಹೋನ್ನತ ಧ್ಯೇಯವನ್ನಿಟ್ಟುಕೊಂಡು ಆರಂಭವಾದ ಬ್ರಹ್ಮಕುಮಾರಿ ಸಂಸ್ಥೆಗೆ ಸುಸಜ್ಜಿತ ಸಭಾಭವನ ನಿರ್ಮಾಣಕ್ಕಾಗಿ ಮೊದಲ ಹಂತದಲ್ಲಿ 50 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ಸಚಿವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ರವಿಶಂಕರ ಗುರೂಜಿ, ರಾಜಯೋಗಿನಿ ಅಂಬಿಕಾ, ಶಂಕರಗೌಡ ಪಾಟೀಲ್, ಈರಪ್ಪ ಸುಳೇಭಾವಿ, ಸ್ನೇಹಲ್ ಪೂಜೇರಿ, ಸುರೇಶ್ ಪಾಟೀಲ್, ರಚನಾ ಗಾವಡೆ, ಉಳವಪ್ಪ ಮಲ್ಲನ್ನವರ್, ಬೃಹ್ಮಕುಮಾರಿ ಸುಲೋಚನಾ, ಬಸು ದೇಸಾಯಿ, ನಾಗೇಶ್ ದೇಸಾಯಿ, ಸುರೇಶ ಕಾಳೋಜಿ, ಮಹೇಂದ್ರ ಗೋಟೆ ಉಪಸ್ಥಿತರಿದ್ದರು.