Kannada NewsKarnataka News

ಶೇ.98ರಷ್ಟು ಭರವಸೆ ಈಡೇರಿಸಿದ್ದೇನೆ, ಇನ್ನಷ್ಟು ಅಭಿವೃದ್ಧಿಗೆ ಕೈ ಜೋಡಿಸಿ – ಲಕ್ಷ್ಮೀ ಹೆಬ್ಬಾಳಕರ್ ಮನವಿ

ಕ್ಷೇತ್ರಾದ್ಯಂತ ಭಾರೀ ಜನಬೆಂಬಲದ ಮಧ್ಯೆ ಚುನಾವಣೆ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 5 ವರ್ಷದ ಹಿಂದೆ, 2018ರ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳಲ್ಲಿ ಶೇ.98ರಷ್ಟು ಈಡೇರಿಸಿದ್ದೇನೆ. ವಿರೋಧ ಪಕ್ಷದ ಶಾಸಕಿಯಾಗಿದ್ದರಿಂದ 2 ಭರವಸೆಗಳು ಮಾತ್ರ ಬಾಕಿ ಉಳಿದಿದ್ದು, ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದ್ದು ಅವುಗಳನ್ನೂ ಮೊದಲ ಆದ್ಯತೆಯ ಮೇಲೆ ಈಡೇರಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಯುಕ್ತ ಕಂಗ್ರಾಳಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅವರು ಪ್ರಚಾರ ನಡೆಸುತ್ತಿದ್ದರು. ಕ್ಷೇತ್ರ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ಹಿಂದುಳಿದಿದ್ದರಿಂದ ಕಳೆದ ಬಾರಿ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದ್ದೇನೆ. ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ದೇವಸ್ಥಾನ, ಸಮುದಾಯ ಭವನಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇದರ ಜೊತೆಗೆ, ಕಾಲೇಜು ಮತ್ತು ಆಸ್ಪತ್ರೆ ಕಟ್ಟಿಸುವ ಯೋಜನೆಯನ್ನೂ ನಾನು ಹಾಕಿಕೊಂಡಿದ್ದೆ. ಆದರೆ ನಮ್ಮ ಸರಕಾರವಿಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ಈಡೇರಿಸುತ್ತೇನೆ ಎಂದು ಅವರು ತಿಳಿಸಿದರು.

ಜಲಸಂಪನ್ಮೂಲ ಇಲಾಖೆಯಿಂದ 695.81 ಕೇಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ 3092 ಲಕ್ಷ ರೂ., ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 5142.74 ಲಕ್ಷ ರೂ., ಲೋಕೋಪಯೋಗಿ ಇಲಾಖೆಯಿಂದ 1694.35 ಲಕ್ಷರೂ., ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 100 ಲಕ್ಷ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖಿಯಿಂದ 50 ಲಕ್ಷ ರೂ., ಪ್ರವಾಸೋದ್ಯಮ ಇಲಾಖೆಯಿಂದ 300 ಲಕ್ಷ ರೂ., ಹಿಂದುಳಿದ ವರ್ಗಗಳ ಇಲಾಖಿಯಂದ 100 ಲಕ್ಷ ರೂ., ಶಾಸಕರ ನಿಧಿಯಿಂದ 792 ಲಕ್ಷ ರೂ., ಗ್ರಾಮೀಣಾಭಿವೃದ್ಧಿ ನಿಗಮದಿಂದ 800 ಲಕ್ಷ ರೂ., ಮುಜರಾಯಿ ಇಲಾಖೆಯಿಂದ 960 ಲಕ್ಷ ರೂ., ರಸ್ತೆ, ದೇವಸ್ಥಾನ, ಬ್ರಿಡ್ಜ್ ಕಂ ಬಾಂದಾರ, ಕೆರೆಗಳ ಅಭಿವೃದ್ಧಿ, ಸರಕಾರಿ ಶಾಲೆಗಳ ಕೊಠಡಿ ನಿರ್ಮಾಣ – ದುರಸ್ತಿ, ಶಾಲಾ ಮೈದಾನಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿದ್ದೇನೆ ಎಂದು ಅವರು ತಿಳಿಸಿದರು.

ಕೊರೋನಾ, ಪ್ರವಾಹದಂತಹ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಮನೆ ಮಗಳಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಉಚಿತ ಅಂಬುಲೆನ್ಸ್ ಒದಗಿಸಿದ್ದೇನೆ. ಔಷಧ, ಆಹಾರದ ಕಿಟ್ ಗಳನ್ನು ವಿತರಿಸಿದ್ದೇನೆ. ಗ್ರಾಮೀಣ ಮಕ್ಕಳಿಗೆ, ಯುವಕರಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿದ್ದೇನೆ. ಸರಕಾರದ ಅನುದಾನವಲ್ಲದೆ ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ಸ್ವಂತ ಹಣವನ್ನೂ ಒದಗಿಸಿ ಅಗತ್ಯ ಕೆಲಸ, ಬಡವರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.

ಗ್ರಾಮೀಣ ಬಸ್ ನಿಲ್ದಾಣ, ವಾಲ್ಮೀಕಿ ಭವನ, ಮರಾಠಾ ಭವನ, ಅಂಬೇಡ್ಕರ್ ಭವನ, 103 ದೇವಸ್ಥಾನಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ, ಜೈನ ಬಸದಿ, ಮಸೀದಿ, ಚರ್ಚ್ ಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದೇನೆ. ರಾಜಹಂಸಗಡದಲ್ಲಿ ದೇಶದಲ್ಲೇ ಬೃಹತ್ತಾದ, ಅಪರೂಪದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಮಾಡಿ, ಕೋಟೆಯ ಅಭಿವೃದ್ಧಿ ಮಾಡಿಸಿದ್ದೇನೆ. ಮಕ್ಕಳ ವಿದ್ಯಾಭ್ಯಾಸಗಳಿಗೆ ನೆರವಾಗಿದ್ದೇನೆ ಎಂದು ತಿಳಿಸಿದರು.

ವಿರೋಧ ಪಕ್ಷದ ಶಾಸಕಿಯಾಗಿ, ಅದರಲ್ಲೂ ಮೊದಲ ಬಾರಿಗೆ ಶಾಸಕರಾಗಿ ಇಷ್ಟೊಂದು ಅನುದಾನ ತರುವುದು ಸುಲಭವಿರಲಿಲ್ಲ. ಆದರೆ ಯಾರ್ಯಾರದ್ದೋ ಕಾಲು ಹಿಡಿದು, ಏನೆಲ್ಲ ಹೋರಾಟ ಮಾಡಿ ಕೆಲಸ ತಂದಿದ್ದೇನೆ. ಈ ಬಾರಿ ನಮ್ಮದೇ ಸರಕಾರ ಬರುವುದರಿಂದ ಹೆಚ್ಚಿನ ಕೆಲಸ ತರಲು ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವಿದೆ. ವಿಶೇಷವಾಗಿ ಯುವಕರಿಗೆ ಉದ್ಯೋಗ ಒದಗಿಸುವಂತಹ ಯೋಜನೆಗಳನ್ನು ತರುತ್ತೇನೆ. ಉನ್ನತ ಶಿಕ್ಷಣ ಗ್ರಾಮೀಣ ಕ್ಷೇತ್ರದಲ್ಲೇ ಸಿಗುವಂತೆ ಮಾಡುವ ಸಂಕಲ್ಪ ಮಾಡಿದ್ದೇನೆ. ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.

ಬ್ಯಾಲೆಟ್ ಯುನಿಟ್ ನಲ್ಲಿ 4ನೇ ನಂಬರ್ ನಲ್ಲಿರುವ ನನ್ನ ಚುನಾವಣೆ ಚಿಹ್ನೆಯಾಗಿರುವ ಹಸ್ತದ ಗುರುತಿನ ಮುಂದಿರುವ ಬಟನ್ ಒತ್ತುವ ಮೂಲಕ ನನ್ನನ್ನು ಬೆಂಬಲಿಸಿ, ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಯುವಕ ಸಂಘಗಳು, ಮಹಿಳಾ ಮಂಡಳಗಳು, ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘಗಳು ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದವು. ನಿಮ್ಮ ಪರವಾಗಿ ನಾವೇ ಪ್ರಚಾರ ಕೈಗೊಂಡು ಮತ ಹಾಕಿಸುತ್ತೇವೆ. ಕಳೆದಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

https://pragati.taskdun.com/lakshmi-hebbalkars-loud-campaigning-in-various-parts-of-rural-areas-welcome-in-the-festive-atmosphere-everywhere/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button