
ಜನರು ಸಂತೋಷದಿಂದಿದ್ದರೆ ನಾನು ಕೂಡ ಸಂತೋಷದಿಂದಿರುತ್ತೇನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರತಿ ಕ್ಷಣವೂ ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಜನರಲ್ಲೇ ನಾನು ದೇವರನ್ನು ಕಾಣುತ್ತಿದ್ದೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಕ್ಷೇತ್ರದ 15 ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ಪ್ರತಿ ಕ್ಷಣವೂ ಕ್ಷೇತ್ರದ ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇನೆ. ಜನರಲ್ಲೇ ದೇವರನ್ನು ಕಾಣುತ್ತಿದ್ದೇನೆ. ಕ್ಷೇತ್ರದ ಮನೆಮಗಳಾಗಿ ಪಕ್ಷಾತೀತವಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇನೆ. ಸೇವೆಯಲ್ಲಿ ದೇವರನ್ನು ಕಾಣುತ್ತಿದ್ದೇನೆ ಎಂದು ಭಾವುಕರಾಗಿ ನುಡಿದರು.
ಅಂಗವಿಕಲರು ದೇವರ ಮಕ್ಕಳಿದ್ದಂತೆ, ಅಂಗವಿಕಲರಿಗೆ ನಾವೆಲ್ಲರೂ ವಿಶೇಷವಾದ ಪ್ರಾಧ್ಯಾನ್ಯತೆ ನೀಡವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಅಂಗವಿಕಲರನ್ನು ಗೌರವಿಸುವುದರೊಂದಿಗೆ ಭಗವಂತನ ಕೃಪಾಶೀರ್ವಾದ ಸದಾಕಾಲವೂ ನಮ್ಮ ಮೇಲಿರುತ್ತದೆ ಎನ್ನುವುದು ನನ್ನ ನಂಬಿಕೆಯಾಗಿದೆ ಎಂದು ಹೆಬ್ಬಾಳಕರ್ ಹೇಳಿದರು.
ವಿಕಲಚೇತನರ ವಿಶೇಷ ಕಾಳಜಿಯಡಿ ಹಾಗೂ ಅವರ ಸುಗಮ ಸಂಚಾರ ಮತ್ತು ಇತರ ಸ್ಥಳಗಳಿಗೆ ಸರಾಗವಾಗಿ ಸಾಗುವ ದೃಷ್ಟಿಯಿಂದ ” ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ” ಇಲಾಖೆಯಡಿ 2018-19 ಹಾಗೂ 2019-20 ರ ಸಾಲಿನ ಅರ್ಜಿಗಳನ್ನು ಪರಿಗಣಿಸಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಕ್ಷೇತ್ರದ ಒಟ್ಟು ಹದಿನೈದು ಜನ ಫಲಾನಭವಿಗಳಿಗೆ ಹಸ್ತಾಂತರಿಸಲಾಯಿತು.

