
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಪರ ವಿವಾದಾತ್ಮಕ ಟ್ವೀಟ್ ಮಾಡಿದ್ದ ಐಎ ಎಸ್ ಅಧಿಕರಿಗೆ ಇದೀಗ ಸಂಕಷ್ಟ ಎದುರಾಗಿದೆ.
ಮಧ್ಯಪ್ರದೇಶದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಐಎಎಸ್ ಅಧಿಕಾರಿ ನಿಯಾಜ್ ಖಾನ್ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದರು. ಅದರಲ್ಲಿ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ನಡೆದ ಹೆಚ್ಚಿನ ಸಂಖ್ಯೆಯ ಮುಸ್ಲೀಂ ರ ಹತ್ಯೆಗಳ ಬಗ್ಗೆ ಸಿನಿಮಾ ಮಾಡಿ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಒತ್ತಾಯಿಸಿದ್ದರು. ಅಲ್ಪ ಸಂಖ್ಯಾತ ಸಮುದಾಯದ ಸದಸ್ಯರು ಕೀಟಗಳಲ್ಲ, ಅವರು ದೇಶದ ನಾಗರಿಕರು ಎಂದು ಕಿಡಿಕಾರಿದ್ದರು.
ಕಾಶ್ಮೀರಿ ಪಂಡಿತರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಕಾಶ್ಮೀರದಲ್ಲಿ ಮನೆ ನಿರ್ಮಾಣ ಮಾಡಲು ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಬಂದ ಲಾಭದ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿ ಎಂದು ನಿಯಾಜ್ ಒತ್ತಾಯಿಸಿದ್ದರು. ಮುಸ್ಲೀಂರ ಹತ್ಯಾಕಾಂಡವನ್ನು ತೋರಿಸುವ ಪುಸ್ತಕ ಬರೆಯಲು ಯೋಜಿಸುತ್ತಿದ್ದೇನೆ ಎಂದು ಬರೆದುಕೊಂದಿದ್ದರು.
ಇದೀಗ ಐಎ ಎಸ್ ಅಧಿಕಾರಿ ಖಾನ್ ವಿವಾದಾತ್ಮಕ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ನಾನು ಖಾನ್ ಅವರ ಟ್ವೀಟ್ ನೋಡಿದ್ದೇನೆ. ಇದು ಗಂಭೀರ ವಿಚಾರ. ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರ ಅಳವಡಿಸಿದ್ದ ಮಿತಿಗಳನ್ನು ನಿಯಾಜ್ ಮೀರಿದ್ದಾರೆ. ಈ ಬಗ್ಗೆ ಸರ್ಕಾರದಿಂದ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.