Uncategorized

ರಾಜಕೀಯದಲ್ಲಿ ವಿರೋಧ ಪಕ್ಷ, ವಿರೋಧಿಗಳು ಇರಬೇಕು: ಸಚಿವ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಯಮಕನಮರಡಿ: ರಾಜಕೀಯ ಜೀವನದಲ್ಲಿ ವಿರೋಧ ಪಕ್ಷದವರು, ವಿರೋಧಿಗಳು ಇರಬೇಕು. ಇಲ್ಲದಿದ್ದರೆ ನಾವು ಮಾಡಿದ ತಪ್ಪುಗಳು ನಮಗೆ ಗೊತ್ತಾಗಲ್ಲ. ಹಾಗೆಯೇ ವಿರೋಧಿಗಳಿದ್ದರೆ ಜಾಗೃತಿಯಿಂದಲೂ ಇರಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ಯಮಕನಮರಡಿ ಮತಕ್ಷೇತ್ರದ ಹುದಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ನಮ್ಮ ಹೋರಾಟಗಳು ಇಷ್ಟಕ್ಕೆ ನಿಂತಿಲ್ಲ. ಬುದ್ದನ ಆಸೆಯ ನೆರವೇರಿಸಬೇಕು. ಬಸವಣ್ಣವರ ಸಮಾಜತೆ ಬಗ್ಗೆ ಇನ್ನೂ ಒತ್ತು ಕೊಡಬೇಕಿದೆ. ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನ ಉಳಿಸಿಕೊಳ್ಳಬೇಕಾಗಿದೆ” ಎಂದರು.

“ಬುದ್ಧ, ಬಸವ, ಅಂಬೇಡ್ಕರ್‌ರ ತತ್ವ-ಸಿದ್ಧಾಂತಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕಿದೆ. ಕೌಶಲ್ಯ, ಶಿಕ್ಷಣ, ಉದ್ಯಮ, ಪ್ರತಿಭೆಗಳನ್ನು ರೂಪಿಸಿ ಶಿಕ್ಷಣ-ಸಂಘಟನೆ- ಹೋರಾಟ ಬೆಳೆಸಬೇಕು. ಈ ಮೂವರು ಆದರ್ಶ ವ್ಯಕ್ತಿಗಳು ಅನುಸರಿಸಿದ ಮಾರ್ಗವನ್ನು ಪಾಲಿಸಬೇಕು” ಎಂದು ತಿಳಿಸಿದರು.

“ಬುದ್ಧನೆಡೆಗೆ ಹೋಗುವುದೆಂದರೆ ಜ್ಞಾನದ ಕಡೆಗೆ ಹೋಗುವುದು ಎಂದರ್ಥ. ಬುದ್ಧ ಇಡೀ ಜಗತಿನ ಜ್ಞಾನದ ಬೆಳಕು. ಸಮಾಜದಲ್ಲಿ ಸಮಾನತೆ, ಸ್ವಾತಂತ್ರ್ಯ ದೊರಕಬೇಕಾದರೆ ಮುಖ್ಯವಾಗಿ ಅನಿಷ್ಠ ಪದ್ಧತಿಗಳಿಂದ ದೂರ ಇರಬೇಕು. ಈ ಅನಿಷ್ಠ ಪದ್ಧತಿಗಳನ್ನು 12ನೇ ಶತಮಾನದಲ್ಲೇ ಬಸವಣ್ಣ ಗುರುತಿಸಿ, ಅದರ ವಿರುದ್ಧ ಹೋರಾಡಿದ್ದಾರೆ” ಎಂದು ತಿಳಿಸಿದರು.

“ಅಂಬೇಡ್ಕರ್‌ ಸಂವಿಧಾನ ಬರೆದು, ಶೋಷಿತ ವರ್ಗ, ಅಸ್ಪೃಶ್ಯತೆ, ಮಹಿಳೆಯರು, ಕಾರ್ಮಿಕರ, ಶ್ರೇಯೋಭಿವೃದ್ಧಿಗೆ ದಿಟ್ಟ ಹೋರಾಟ ಮಾಡಿದ್ದಾರೆ. ಅಂಬೇಡ್ಕರ್‌ ನಮಗೆ ಸಂವಿಧಾನ ನೀಡದೆ ಇದ್ದರೆ ನಾವಿಂದು ಸಮಾಜದಲ್ಲಿ ಭಯಭೀತಿಯಿಂದ ಜೀವನ ನಡೆಸಬೇಕಾಗಿತ್ತು. ಸಮಾಜದ ಪ್ರತಿಯೊಂದು ವರ್ಗದ ಜನರಿಗೂ ಶಿಕ್ಷಣ ದೊರೆಯಬೇಕು, ಆ ಮೂಲಕ ಸಮಾಜದಲ್ಲಿ ಅನಿಷ್ಠ ಪದ್ಧತಿ ನಾಶವಾಗಬೇಕೆಂದು ಅವರು ಬದುಕಿರುವ ತನಕ ಹೋರಾಟ ಮಾಡಿದರು” ಎಂದು ನೆನೆದರು.

“ಕಳೆದ 15 ವರ್ಷಗಳಲ್ಲಿ ಹೊಸದಾಗಿ ಯಮಕನಮರಡಿ ನಿರ್ಮಾಣ ಹಂತದಲ್ಲಿ ನಿಮ್ಮ ಕೋರಿಕೆಯಂತೆ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಲಾಗಿದೆ. ಇದರ ಪ್ರತಿಫಲವಾಗಿ ನಾವು 4ನೇ ಬಾರಿಗೆ ಅತಿ ಹೆಚ್ಚು ಮತಗಳ ಅಂತರದಲ್ಲಿ ನನ್ನನ್ನು ವಿಜಯಶಾಲಿಯಾಗಿ ಆಯ್ಕೆ ಮಾಡಿದ್ದಿರಿ. ಇದಕ್ಕೆ ನಾನು ನಿಮ್ಮಗೆ ಚಿರಋಣಿಯಾಗಿದ್ದೇನೆ” ಎಂದರು.

“ಕಳೆದ 15 ವರ್ಷಗಳಿಂದ ನಮ್ಮ ಸರ್ಕಾರ ಇರಬಹುದು, ಇಲ್ಲದೇ ಇರಬಹುದು ನಿರಂತರವಾಗಿ ನಿಮ್ಮ ಸೇವೆಯನ್ನು ಮಾಡಲಾಗಿದೆ. ಅಲ್ಲದೇ ಕ್ಷೇತ್ರದ ಪ್ರತಿಯೊಬ್ಬರ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕೆಲಸ ಕೂಡಾ ಮಾಡಲಾಗಿದೆ” ಎಂದ ಅವರು, “ಅಧಿಕಾರ ಎಂದರೆ ಸೇವೆ, ಯಾರು ಯಾವಾಗಲೂ ಸೇವಾ ಮನೋಭಾವ ಹೊಂದಿರುತ್ತಾರೋ ಅವರಿಗೆ ಎಂದಿಗೂ ಸೋಲು ಆಗುವದಿಲ್ಲ” ಎಂದರು. ಇದೇ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಂಗೀತ ಕಾರ್ಯಕ್ರಮಗಳು ಜರುಗಿದವು.

ಈ‌ ಸಂದರ್ಭದಲ್ಲಿ ಅಂಕಲಗಿ ಗ್ರಾಮದ ಅಡವಿ ಸಿದ್ಧೇಶ್ವರ ಮಠದ ಶ್ರೀ ಅಮರ ಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಯುವ ನಾಯಕ ರಾಹುಲ್‌ ಜಾರಕಿಹೊಳಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಸಂತೋಷ ಚ. ಗುಡಸ, ಕೊಚ್ಚರಗಿ, ಗ್ರಾಪಂ ಅಧ್ಯಕ್ಷ ನಿಂಗಪ್ಪಾ ಧರನಟ್ಟಿ, ಮುಚ್ಚಂಡಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಬುಡ್ಯಾಗೋಳ, ಹುದಲಿ ಗ್ರಾಪಂ ಅಧ್ಯಕ್ಷ ತಬಸುಮ ಬಂಡಿ, ತುಮ್ಮರಗುದ್ದಿ ಗ್ರಾಪಂ ಅಧ್ಯಕ್ಷ ಕೆಂಚವ್ವಾ ನಾಯಿಕ, ಅಷ್ಟೆ ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಕುರಬರ, ಕೆಲಸಾಂಬ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಲೋಹಾರ, ತುಮ್ಮರಗುದ್ದಿ ಗ್ರಾಪಂ ಉಪಾಧ್ಯಕ್ಷ ಯಲ್ಲಪ್ಪಾ ಸುಲಧಾಳ, ಹುದಲಿ ಗ್ರಾಪಂ ಉಪಾಧ್ಯಕ್ಷೆ ಶೋಭಾ ರುದ್ರಪ್ಪಾ ಮಾಳಗಿ, ಧರನಟ್ಟಿ ಗ್ರಾಪಂ ಉಪಾಧ್ಯಕ್ಷೆ ಅಶ್ವಿನಿ ಗುಜನಾಳ,ಅಷ್ಟೆ ಗ್ರಾಪಂ ಉಪಾಧ್ಯಕ್ಷೆ ರೇಷ್ಮಾ ಪಾಟೀಲ, ಕಲಕಾಂಬ ಗ್ರಾಪಂ ಉಪಾಧ್ಯಕ್ಷೆ ಸುಜಾತಾ ಕಾಂಬಳೆ, ಮುಚ್ಚಂಡಿ ಗ್ರಾಪಂ ಉಪಾಧ್ಯಕ್ಷೆ ಸುನಿತಾ ಗುಡದೈಗೋಳ ಸೇರಿದಂತೆ ಹುದಲಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಪಂಗಳಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button