Kannada NewsKarnataka News

ನವಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ಪ್ಯಾಕೇಜ್

ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದೇಶದ ಆಡಳಿತಾರೂಢ ಬಿಜೆಪಿ ಪಕ್ಷ ಮಹಾಮಾರಿ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಅಷ್ಟೇ ಅಲ್ಲ, ನವಭಾರತ ನಿರ್ಮಾಣದ ಹಿನ್ನೆಲೆಯಲ್ಲಿ ಆತ್ಮನಿರ್ಭರ ಭಾರತ ಪ್ಯಾಕೇಜ್‌ನ್ನು ಘೋಷಣೆ ಮಾಡಿ ದೇಶದ ಸಮಸ್ತ ನಾಗರಿಕರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸಮೀಪದ ಕಲ್ಲೋಳಿ ಪಟ್ಟಣದ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯದಲ್ಲಿ ಶುಕ್ರವಾರ ಜು.೧೦ ರಂದು ಸುದ್ಧಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳ ಹಿಂದೆ ೧.೭೦ ಲಕ್ಷ ಕೋಟಿಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮತ್ತು ಎಂ.ಎಸ್.ಎಮ್.ಇಗಳ ಸಮಸ್ಯೆಗಳ ಒತ್ತಡ ಕಡಿಮೆ ಮಾಡುವುದಕ್ಕಾಗಿ ೨೦ ಸಾವಿರ ಕೋಟಿ ಗ್ಯಾರಂಟಿ ಸ್ಕೀಂನ್ನು ಜಾರಿಗೊಳಿಸಿದೆ. ಇದರಿಂದ ೨ ಲಕ್ಷ ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸಮಸ್ಯೆಗಳ ಒತ್ತಡ ಕಡಿಮೆ ಮಾಡಲಾಗಿದೆ ಎಂದರು.
೨.೫ ಕೋಟಿ ರೈತರು, ಮೀನುಗಾರರು ಮತ್ತು ಹೈನು ಕೃಷಿಕರಿಗೆ ೨ ಲಕ್ಷ ಕೋಟಿ ರೂಪಾಯಿಗಳ ರಿಯಾಯ್ತಿ ಸಾಲದ ಪ್ರಯೋಜನ ನೀಡಲಾಗಿದೆ. ೨೦೨೦ ರ ಜೂ.೨೪ ರಂದು ೧೫೦೦೦ ಕೋಟಿ ರೂಪಾಯಿಗಳ ನಿಧಿಯನ್ನು ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪಿಸಲಾಗಿದೆ. ಅಲ್ಲದೇ ಒಂದು ದೇಶ, ಒಂದು ಮಾರುಕಟ್ಟೆ ಯೋಜನೆಗಾಗಿ ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಭಾರತ ಸರ್ಕಾರವು ಅತಿ ಸಣ್ಣ ಉದ್ದಿಮೆಗಳ ನೆರವಿಗಾಗಿ ೨೦೨೦ರ ಜೂನ್.೨೯ ರಂದು ೧೦ ಸಾವಿರ ಕೋಟಿ ರೂಪಾಯಿ ಯೋಜನೆಗೆ ಚಾಲನೆ ನೀಡಿದೆ ಎಂದು ಕಡಾಡಿ ತಿಳಿಸಿದರು.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ದೇಶದ ನಾಗರಿಕರು ಹಸಿವಿನಿಂದ ನರಳಬಾರದೆಂದು ಪ್ರಧಾನಿ ಮೋದಿ ಅವರು, ದೇಶದ ಬಡಕುಟುಂಬಗಳಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ೫ ಕೆ.ಜಿ. ಅಕ್ಕಿ/ಗೋಧಿ, ೧ಕೆ.ಜಿ. ಬೆಳೆ ನೀಡಲಾಗುತ್ತಿದ್ದು ಈ ಯೋಜನೆಯನ್ನು ಬರುವ ನವ್ಹಂಬರ್ ತಿಂಗಳ ಅಂತ್ಯದವರೆಗೆ ಮುಂದುವರೆಸುವುದಾಗಿ ಪ್ರಧಾನಿ ಮೋದಿ ಈಗಾಗಲೇ ಘೋಷನೆ ಮಾಡಿದ್ದಾರೆ. ದೇಶದ ೮೦ ಕೋಟಿಗೂ ಅಧಿಕ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಲಾಕ್‌ಡೌನ್ ಜಾರಿಯಾದ ೩ ತಿಂಗಳು ಹಾಗೂ ಮುಂದಿನ ೫ ತಿಂಗಳು ಅವಧಿಗೆ ಒಟ್ಟು ೧.೫ ಲಕ್ಷ ಕೋಟಿ ರೂ. ಯೋಜನಾ ವೆಚ್ಚವಾಗಲಿದೆ ಎಂದರು.
ಒಂದು ದೇಶ, ಒಂದು ಪಡಿತರ ಯೋಜನೆಯಲ್ಲಿ ಅಂತರರಾಜ್ಯ ಪಡಿತರ ಚೀಟಿಯ ವ್ಯವಸ್ಥೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ೨೦ ರಾಜ್ಯಗಳು ಕಾರ್ಯ ಪ್ರವೃತ್ತವಾಗಿವೆ. ಈ ವ್ಯವಸ್ಥೆಯನ್ನು ದೇಶಾದ್ಯಾಂತ ಎಲ್ಲಾ ರಾಜ್ಯಗಳಲ್ಲಿ ಬರುವ ಮಾ.೨೦೨೧ ರಿಂದ ಜಾರಿಯಾಗಲಿದೆ. ಕೃಷಿ ಹಾಗೂ ರೈತರ ಸಹಾಯಕ್ಕೆ ದೇಶಾದ್ಯಂತ ಜೂನ್ ಅಂತ್ಯದವರೆಗೆ ೭೦.೩೨ ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲಾಗಿದೆ. ಸದ್ಯದ ಆರ್ಥಿಕ ಬಿಕ್ಕಟ್ಟನ್ನು ಸುಧಾರಿಸಲು, ಹಣಕಾಸು ವ್ಯಪಾರವನ್ನು ಪುನಶ್ಚತನಗೊಳಿಸಲು ಸರ್ಕಾರವು ಕಾರ್ಮಿಕರು, ಕೈಗಾರಿಗಳು ಹಾಗೂ ವ್ಯಾಪಾರಿಗಳಿಗೆ ಮುಂದಿನ ೩ ತಿಂಗಳ ಇಪಿಎಫ್ ನ ನೇರವು ಮುಂದುವರೆಸಲು ನಿರ್ಧರಿಸಿದೆ. ಇದರಿಂದಾಗಿ ದೇಶದ ೩.೬೭ ಲಕ್ಷ ಕಂಪನಿಗಳಲ್ಲಿ ದುಡಿಯುತ್ತಿರುವ ೭೨.೨೨ ಲಕ್ಷ ಕಾರ್ಮಿಕರಿಗೆ ೨,೫೦೦ ಕೋಟಿ ರೂ.ಗಳ ಆರ್ಥಿಕ ನೇರವು ದೊರೆಯುವಂತೆ ಮಾಡಿದೆ ಎಂದು ಕಡಾಡಿ ಹೇಳಿದರು.
ಕೊರೊನಾ ಮಹಾಮಾರಿ ಜಗತ್ತನ್ನು ತಲ್ಲಣಗೊಳಿಸಿದ ಹಿನ್ನೆಲೆಯಲ್ಲಿ ಕರೊನಾ ಸೋಂಕು ಹರಡುವಿಕೆ ಹಾಗೂ ಸಾವಿನ ಪ್ರಮಾಣ ಜಗತ್ತಿನ ಇತರ ರಾಷ್ಟ್ರಗಳಿಗಿಂತ ಭಾರತ ದೇಶದಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಕರೊನಾಗೆ ಔಷಧಿಯನ್ನು ಸಹ ಕಂಡು ಹಿಡಿಯುವಲ್ಲಿ ದೇಶ ಮುಂಚೂಣಿಯಲ್ಲಿದೆ. ಯೋಗ ಸೇರಿದಂತೆ ಭಾರತ ದೇಶದ ಸಂಸ್ಕೃತಿ, ಮಹಾಮಾರಿ ಕೊರೋನಾ ನಿಯಂತ್ರಣಾ ಕ್ರಮಗಳನ್ನು ದೇಶದ ನಾಗರಿಕರು ಅನುಸರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಇತರ ರಾಷ್ಟ್ರಗಳಿಗಿಂತ ವಿಶೇಷ, ವಿಭನ್ನವಾಗಿ ಮಾಗದರ್ಶನ ನೀಡಿ, ವಿಶ್ವಕ್ಕೆ ಮಾದರಿ ವ್ಯಕ್ತಿ ಎನಿಸಿದ್ದಾರೆ ಎಂದು ಈರಣ್ಣ ಕಡಾಡಿ ಅವರು ಬಿಜೆಪಿ ಸರ್ಕಾರದ ಸಾಧನೆಗಳ ಕುರಿತು ವಿಶ್ಲೇಷಿಸಿದರು.
ಮೋದಿ ಅವರು ಘೋಷಣೆ ಮಾಡಿದ ೨೦ ಲಕ್ಷ ಕೋಟಿಯ ಪ್ಯಾಕೇಜ್ ದೇಶದ ಇತಿಹಾಸದಲ್ಲಿ  ದಾಖಲೆಯಾಗಿದೆ. ಬಿಜೆಪಿ ಕೇಂದ್ರ ಸರ್ಕಾರ ಘೋಷಣೆ ಮಾಡಿದ ವಿವಿಧ ಯೋಜನೆಗಳು ಅನುಷ್ಠಾನಗೊಂಡಿವೆ. ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ದೇಶದ ಪ್ರತಿ ಮನೆ ಮನೆಗೆ ಹೋಗಿ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಮನವರಿಕೆ ಮಾಡಿಕೊಡಬೇಕೆಂದು ಈ ವೇಳೆ ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಪ್ರಕಾಶ ಮಾದರ, ಈರಣ್ಣ ಅಂಗಡಿ, ಬಸವರಾಜ ಹುಳ್ಳೇರ, ಶ್ರೀಶೈಲ ತುಪ್ಪದ, ಬಸವರಾಜ ಹಿರೇಮಠ, ಪರಪ್ಪ ಗಿರೆಣ್ಣವರ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button