
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಖುರ್ಚಿ ಬೀಳಿಸುವಂತಹ ಗುಟ್ಟು ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಳಿ ಇದೆಯಾ?
ಶಿವಕುಮಾರ ಮಂಗಳವಾರ ನೀಡಿರುವ ಹೇಳಿಕೆ ಅಂತಹ ಅನುಮಾನವನ್ನು ಹುಟ್ಟುಹಾಕುವಂತಿದೆ. ಶಿವಕುಮಾರ ಎಲ್ಲ ಆರೋಪಗಳಿಂದ ಮುಕ್ತವಾಗಿ ಹೊರಬಂದರೆ ನನ್ನಷ್ಟು ಖುಷಿಪಡುವವರು ಯಾರೂ ಇಲ್ಲ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಈ ಕುರಿತು ಶಿವಕುಮಾರ ಅವರ ಬಳಿ ಪ್ರತಿಕ್ರಿಯೆ ಕೇಳಿದಾಗ ಅವರು ಕುತೂಹಲಕರ ಮಾಹಿತಿ ಹೊರಹಾಕಿದರು.
ಯಡಿಯೂರಪ್ಪ ಅವರು ಕುರಿತು ನಾನು ಈ ಸಂದರ್ಭದಲ್ಲಿ ಮಾತನಾಡುವುದಿಲ್ಲ. ನಾನು ಮಾತನಾಡಿದರೆ ಅವರ ಖುರ್ಚಿಯೇ ಅಲ್ಲಾಡುತ್ತದೆ. ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕೆಲಸವನ್ನು ನಾನೇಕೆ ಮಾಡಲಿ ಎಂದು ಶಿವಕುಮಾರ ಪ್ರಶ್ನಿಸಿದರು.
ಬಿಜೆಪಿಯ ಹಲವಾರು ನಾಯಕರು ನನಗೆ ಶುಭ ಕೋರಿದ್ದಾರೆ. ಅವರ ಹೆಸರನ್ನೆಲ್ಲ ಈ ಸಂದರ್ಭದಲ್ಲಿ ಹೇಳುವುದಿಲ್ಲ ಎಂದೂ ಶಿವಕುಮಾರ ಹೇಳಿದರು.
ಇದೇ ವೇಳೆ ಮೆಡಿಕಲ್ ಕಾಲೇಜನ್ನು ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸುವ ಯಡಿಯೂರಪ್ಪ ನಿರ್ಧಾರವನ್ನು ಶಿವಕುಮಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನನ್ನ ಪ್ರಾಣ ಹೋದರು ಚಿಂತೆಯಿಲ್ಲ. ಮೆಡಿಕಲ್ ಕಾಲೇಜು ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು. ವಿಧಾನಸೌಧದಲ್ಲೇ ನನ್ನ ಜೀವ ಬಿಡಲೂ ಸಿದ್ದ ಎಂದೂ ಹೇಳಿದರು.