Kannada NewsKarnataka NewsLatest

*ಅಕ್ರಮ ಬಂಧನದಲ್ಲಿಟ್ಟು ಲಂಚ ಪಡೆದ ಆರೋಪ: ಕುಂಬಳಗೋಡು ಪಿಎಸ್ಐ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಅಕ್ರಮ ಬಂಧನದಲ್ಲಿಟ್ಟು ಲಂಚ ಪಡೆದ ಆರೋಪದಡಿ ಕುಂಬಳಗೋಡು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿರುದ್ಧ ಗಂಭೀರ ದೂರು ದಾಖಲಾಗಿದೆ.

Home add -Advt

ಪಿಐ ಮಂಜುನಾಥ ಹೂಗಾರ್ 10 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟು, ನಂತರ 30 ಸಾವಿರ ರೂ. ಪಡೆದು ಮೂವರನ್ನು ಬಿಡಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ವಕೀಲ ವರ್ಷಿತ್ ರೆಡ್ಡಿ ಅವರು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್​ಗೆ ದೂರು ನೀಡಿದ್ದಾರೆ.

ಫೆಬ್ರವರಿ 25ರಂದು ಕುಂಬಳಗೋಡು ಠಾಣಾ ವ್ಯಾಪ್ತಿಯ ಎಂ.ಆರ್. ಬಾರ್‌ನಲ್ಲಿ ರಾಕೇಶ್, ಸ್ವಾಮಿ ಮತ್ತು ಗೋಪಿ ಎಂಬ ಮೂವರು ಕ್ಯಾಶಿಯರ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಘಟನೆ ವೇಳೆ ಬಾರ್ ಸಿಬ್ಬಂದಿ ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಸಿಬ್ಬಂದಿ ಮೂವರನ್ನು ಠಾಣೆಗೆ ಕರೆದೊಯ್ದಿದ್ದರು. ಮೂವರನ್ನು ಸುಮಾರು ಮೂರು ದಿನಗಳ ಕಾಲ ಅಕ್ರಮ ಬಂಧನದಲ್ಲಿಟ್ಟುಕೊಂಡು ಹಣಕ್ಕೆ ಬೇಡಿಕೆ ಇಡಲಾಗಿದೆ ಎನ್ನಲಾಗಿದೆ. ಈ ವೇಳೆ ರಾಕೇಶ್ ತನ್ನ ಸ್ನೇಹಿತ ಕಾರ್ತಿಕ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ನಂತರ ಕಾರ್ತಿಕ್ ಕುಂಬಳಗೋಡು ಠಾಣೆಗೆ ತೆರಳಿ ವಿಚಾರಿಸಿದಾಗ 10 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಕೀಲರೊಂದಿಗೆ ಠಾಣೆಗೆ ತೆರಳಿದಾಗಲೂ ಲಂಚಕ್ಕಾಗಿ ಒತ್ತಾಯ ಮಾಡಲಾಗಿದೆ ಎನ್ನಲಾಗಿದೆ. 30 ಸಾವಿರ ರೂ. ಹಣ ಪಡೆದು ಮೂವರನ್ನು ಪೊಲೀಸರು ಬಿಡಿಸಿದ್ದಾಗಿ ಆರೋಪಿಸಲಾಗಿದೆ. ಇನ್ನು ಪಿಐ ಮಂಜುನಾಥ ಹೂಗಾರ್ ಲಂಚ ಕೇಳುತ್ತಿರುವುದಾಗಿ ಹೇಳಿದ ವೀಡಿಯೋವೂ ಸೆರೆಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ.


Related Articles

Back to top button