Belagavi NewsBelgaum NewsPolitics

*ಬೆಳಗಾವಿಯಲ್ಲಿ ಜನಾಕ್ರೋಶ ಯಾತ್ರೆ:  ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿ ನಾಯಕರ ನೇತೃತ್ವದಲ್ಲಿ ಎರಡನೇ ಹಂತದ ಜನಾಕ್ರೋಶ ಯಾತ್ರೆ ನಡೆಸಲಾಯಿತು.‌

ಬೆಳಗಾವಿ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ರ್ಯಾಲಿ, ನಾಥಪೈ ಸರ್ಕಲ್, ಶಹಾಪೂರ ಖಡೇಬಜಾರ, ಶಿವ ಚರಿತ್ರೆಗೆ ಹೋಗಿ ಮುಕ್ತಾಯಗೊಂಡಿತ್ತು.‌ ಯಾತ್ರೆ ಉದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಲಾಯಿತು. 

ಜನಾಕ್ರೋಶ ಯಾತ್ರೆಯಲ್ಲಿ  ಸಂಸದರಾದ ಗೋವಿಂದ ಕಾರಜೋಳ, ಯಧುವೀರ್ ಒಡೆಯರ್, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಅಭಯ್ ಪಾಟೀಲ, ದುರ್ಯೋಧನ ಐಹೊಳೆ, ವಿಠಲ ಹಲಗೇಕರ್, ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಮಹಾಂತೇಶ ದೊಡ್ಡಗೌಡರ ಸೇರಿ ಮತ್ತಿತರ ನಾಯಕರು ಪಾಲ್ಗೊಂಡಿದ್ದರು. ಆದರೆ, ಮಾಜಿ ಸಚಿವ ರಮೇಶ ಜಾರಕಿಹೊಳಿ ಗೈರಾಗಿದ್ದರು.

ಬೆಳಗಾವಿಯಲ್ಲಿ ಎರಡನೇ ಹಂತದ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ಅವರು, 65 ವರ್ಷ ನಿರಂತರವಾಗಿ ಕಾಂಗ್ರೆಸ್ ಆಡಳಿತ ನಡೆಸಿದೆ. ನೆಹರು, ಇಂದಿರಾ, ರಾಜೀವ ಗಾಂಧಿ ಅವರ ಕೈಯಲ್ಲಿ ಆಗದ ಆಲೂಗಡ್ಡೆ ಮಾಡೆಲ್ ಬಗ್ಗೆ ರಾಹುಲ್ ಗಾಂಧಿ ಹೇಳಿದ್ದರು. ದೇಶದ ಯುವರಾಜ ಎಂದು ಬಿಂಬಿಸಿಕೊಂಡಿದ್ದರು. ಇನ್ನು ಸ್ವತಂತ್ರ ಹೋರಾಟಗಾರರಿಂದ ಹುಟ್ಟಿಕೊಂಡ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಗಾಂಧಿ ಕುಟುಂಬ ವಶಕ್ಕೆ ಪಡೆಯಿತು. ಬಳಿಕ ಅದು ಯಂಗ್ ಇಂಡಿಯಾ ಆಗಿ ಬದಲಾಯಿತು. 50 ಲಕ್ಷ ರೂ. ಹೂಡಿಕೆ ಮಾಡಿ ಆ ಟ್ರಸ್ಟ್ ಸಂಪೂರ್ಣ ಹಿಡಿತ ಸಾಧಿಸುತ್ತಾರೆ. 3 ಕೋಟಿ ಬಂಡವಾಳ ಹಾಕಿ ಒಂದೇ ವರ್ಷದಲ್ಲಿ 150 ಕೋಟಿ ಲಾಭ ಗಳಿಸುತ್ತದೆ. ಇದು ರಾಹುಲ್ ಬಾಬಾ ಅವರ ಅಭಿವೃದ್ಧಿ ಮಾಡೆಲ್. ದೇಶದಲ್ಲಿ ಅಂಬಾನಿಗೂ ಮಾಡಲು ಆಗದ ಸಾಧನೆ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ ಪಾರದರ್ಶಕವಾಗಿ ತನಿಖೆ ಮಾಡಿದ ಪರಿಣಾಮ ಸೋನಿಯಾ, ರಾಹುಲ್ ಗಾಂಧಿ ಅವರು ಮಾಡಿದ ಲೂಟಿ ಬಹಿರಂಗವಾಗಿದೆ ಎಂದರು. 

Home add -Advt

ಭ್ರಷ್ಟಾಚಾರಕ್ಕಾಗಿಯೇ ಕಾಂಗ್ರೆಸ್ ಪಕ್ಷ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಭ್ರಷ್ಟಾಚಾರ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 50ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದೇವೆ. ಮುಸ್ಲಿಂರನ್ನು ಓಲೈಸುತ್ತಿದ್ದಾರೆ. ಎಸ್ ಸಿಪಿ, ಟಿಎಸ್ ಪಿ 36 ಸಾವಿರ ಕೋಟಿ ಹಣ ನಿಲ್ಲಿಸಿದ್ದಾರೆ.  ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ಘೋಷಿಸಿದ್ದಾರೆ. ವಿದೇಶಕ್ಕೆ ವ್ಯಾಸಾಂಗ ಮಾಡುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹೆಚ್ಚಿಸುತ್ತಿದ್ದಾರೆ. ಬಡ ಮುಸ್ಲಿಂ ಮಹಿಳೆಯರ ವಿವಾಹಕ್ಕೆ 50 ಸಾವಿರ ರೂ. ನೀಡುತ್ತಿದ್ದಾರೆ. ಹಿಂದುಗಳಲ್ಲಿ ಬಡವರು ಇಲ್ಲವೇ. ಹಿಂದೂ ವಿರೋಧಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸಬೇಕಿದೆ. ಬಡವರು, ರೈತರು, ಕಾರ್ಮಿಕರು, ನೇಕಾರರು ಸೇರಿ ಎಲ್ಲ ವರ್ಗಗಳ ವಿರೋಧಿಯಾಗಿರುವ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಬೇಕಿದೆ. ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದ್ದಿರಿ. ಬೆಳಗಾವಿಗೆ ಎಷ್ಟು ಬಾರಿ ಬಂದು ಅಭಿವೃದ್ಧಿ ಕೆಲಸಗಳಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಿರಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಪ್ರಶ್ನಿಸಿದರು. ಯಡಿಯೂರಪ್ಪನವರು 1500 ಕೋಟಿ ಅನುದಾನದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿದ್ದರು ಎಂದು ವಿಜಯೇಂದ್ರ ಟೀಕಿಸಿದರು.

ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಪೆಟ್ರೋಲ್, ಡಿಸೇಲ್, ಹಾಲು, ಅಗತ್ಯ ವಸ್ತುಗಳ ಬೆಲೆ ಬಿಜೆಪಿಗೆ ಹೆಚ್ಚಾಗಿದೆಯೇ..? ಜನಾಕ್ರೋಶ ಯಾತ್ರೆಯ ಮೊದಲ ಹಂತದಲ್ಲೆ ಜನರಿಗೆ ಮುಟ್ಟಿದೆ ಎಂದ ಅವರು, ಲೂಟಿ ಲೂಟಿ ಸಿದ್ದರಾಮಯ್ಯ ಲೂಟಿ, ಕೋಟಿ ಕೋಟಿ ಡಿಕೆಶಿ ಕೋಟಿ ಎಂದು ಘೋಷಣೆ ಕೂಗಿ ಮಾತು ಮುಂದುವರಿಸಿದರು. ಸಿದ್ದರಾಮಯ್ಯ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಜಾತಿ ಗಣತಿಯಲ್ಲಿ ಮುಸ್ಲಿಂರನ್ನು ನಂ.1 ಮಾಡಿದ್ದಾರೆ. ಇದರಲ್ಲಿ ವಿದೇಶಿಗರ ಕೈವಾಡ ಇರುವ ಅನುಮಾನ ಕಂಡು ಬಂದಿದೆ. ಹಿಂದೆ ಪಾಕಿಸ್ತಾನ, ಬಾಂಗ್ಲಾ ಪ್ರತ್ಯೇಕಿಸಲಾಗಿದೆ. 2047ಕ್ಕೆ ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎಂದು ಕೆಲ ಮುಸ್ಲಿಂರು ಅಂದಿದ್ದರು. ಈ ವರದಿ ಅದರ ಮುನ್ನುಡಿ ಎಂದು ಕಿಡಿಕಾರಿದರು.

ಮುಂದಿನ ಡಿಸೆಂಬರ್ ಗೆ ಬೆಳಗಾವಿಗೆ  ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಬರುವುದಿಲ್ಲ. ಟೈಂ ಬಾಂಬ್ ಪಿಕ್ಸ್ ಆಗಿದೆ. ಅದು ಯಾವಾಗ ಸ್ಫೋಟ ಆಗುತ್ತೊ ಗೊತ್ತಿಲ್ಲ.  ಸಿದ್ದರಾಮಯ್ಯ ಮಂಡಿಸಿದ್ದು ಡುಪ್ಲಿಕೇಟ್ ಬಜೆಟ್. ಇನ್ಮುಂದೆ ಮಾರಿ ಹಬ್ಬ ಶುರು ಆಗಲಿದೆ. ತೆರಿಗೆಗಳ ದಾಳಿ ನಡೆಯಲಿದೆ. ಲೂಟಿಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಎ-1, ಎ-2 ಆಗಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಎಟಿಎಂ ಆಗಿದೆ. ಕುರ್ಚಿ ಉಳಿಸಿಕೊಳ್ಳಲು, ಕಿತ್ತುಕೊಳ್ಳಲು ನಡೆಯುತ್ತಿರುವ ಹೋರಾಟ ಎಂದು ಆರ್.ಅಶೋಕ ವಾಗ್ದಾಳಿ ಮಾಡಿದರು.

ಸಂಸದ ಜಗದೀಶ ಶೆಟ್ಟರ್ ಮಾತನಾಡಿ, 2028ರ ಚುನಾವಣೆಯಲ್ಲಿ ಕಾಂಗ್ರೆಸ್ 35 ಸ್ಥಾನಕ್ಕೆ ಇಳಿಯುವುದು ನಿಶ್ಚಿತ. ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಸಿದ್ದರಾಮಯ್ಯ ಆಡಳಿತದ ಬಿಗಿ ಹಿಡಿತ ಕಳೆದುಕೊಂಡಿದ್ದಾರೆ. ಅವರ ರಾಜಕೀಯ ಅಂತ್ಯ ಶುರುವಾಗಿದೆ. ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ ಆಗಲಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಮುಂದೆ ಕಾಂಗ್ರೆಸ್ ಎಲ್ಲಿದೆ ಅಂತಾ ದುರ್ಬಿನ್ ಹಿಡಿದುಕೊಂಡು ಹುಡುಕುವ ಸ್ಥಿತಿ ಬರಲಿದೆ ಎಂದು ವಾಗ್ದಾಳಿ ಮಾಡಿದರು.

ಅತ್ಯಂತ ಭ್ರಷ್ಟ, ಬೆಲೆ ಏರಿಸಿದ ಸರ್ಕಾರ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಹಿಂದೆ ಕೈ ನಾಯಕರೇ ಬಾಂಬ್ ಇಟ್ಟಿದ್ದಾರೆ. ಅದು ಯಾವಾಗ ಸ್ಫೋಟ ಆಗುತ್ತದೆಯೋ ಗೊತ್ತಿಲ್ಲ. ದೇಶದಲ್ಲೆ ನಂ.1 ಭ್ರಷ್ಟಾಚಾರ ಕರ್ನಾಟಕದಲ್ಲಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಪೌರ ಕಾರ್ಮಿಕರ ಕಾಯಂಗೊಳಿಸಲು 3-4ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಜಗದೀಶ ಶೆಟ್ಟರ್ ಆರೋಪಿಸಿದರು.

ವಿಧಾನಪರಿಷತ್ ವಿಪಕ್ಷ‌ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಮರು. ಮೊದಲೆಲ್ಲಾ ಇಷ್ಟು ಸುಳ್ಳು ಹೇಳುತ್ತಿರಲಿಲ್ಲ. ಈ ಬಗ್ಗೆ ನಾನು ಪ್ರಶ್ನಿಸಿದರೆ ಸುಳ್ಳು ಹೇಳದಿದ್ದರೆ ಅಧಿಕಾರದಲ್ಲಿ ಇರಬೇಕಲ್ಲವೇ ಎನ್ನುತ್ತಾರೆ. ಇಡೀ ರಾಜ್ಯದಲ್ಲಿ ಜನಾಕ್ರೋಶ ಇಲ್ಲ. ಬಿಜೆಪಿಯಲ್ಲಿ ಮಾತ್ರ ಜನಾಕ್ರೋಶವಿದೆ‌. ಇಡೀ ರಾಜ್ಯ ತಣ್ಣಗಿದೆ ಎನ್ನುತ್ತಾರೆ. ಇನ್ನು ಅಂಬೇಡ್ಕರ್ ಸೋಲಿಸಿದವರು ಸಾವರ್ಕರ್ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಾತನ್ನು ಮರಿ ಖರ್ಗೆ ಅವರ ಮಾತನ್ನು ಕೇಳಿ ಹೇಳಿದ್ದಾರೆ. ಸಾವರ್ಕರ್ ಸೋಲಿಸಿದ್ದು ಸಾಭೀತುಪಡಿಸಿದರೆ ನಾನು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಲ್ಲದಿದ್ದರೆ ಮುಖ್ಯಮಂತ್ರಿ ಸ್ಥಾನದಿಂದ ನೀವು ಕೆಳಗಿಳಿಯಬೇಕು ಎಂದು ಸವಾಲು ಹಾಕಿದರು.

Related Articles

Back to top button