
ಪ್ರಗತಿವಾಹಿನಿ ಸುದ್ದಿ; ಗದಗ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಯಿಂದ ಗಡಿ ಕ್ಯಾತೆ ಬೆನ್ನಲ್ಲೇ ಇದೀಗ ಗೋವಾ ಸಿಎಂ ಪ್ರಮೋದ್ ಸಾವಂತ್ ಮಹದಾಯಿ ನದಿ ನೀರಿನ ವಿಚಾರವಾಗಿ ಕ್ಯಾತೆ ತೆಗೆದಿದ್ದು, ಗೋವಾ ಸರ್ಕಾರದ ವಿರುದ್ಧ ರಾಜ್ಯದ ರೈತರು ಪ್ರತಿಭಟನೆಗೆ ನಿರ್ಧರಿಸಿದ್ದು, ಬೆಂಗಳೂರು ಚಲೋ ಚಳುವಳಿಗೆ ನರಗುಂದ ಮಹದಾಯಿ ಹೋರಾಟ ವೇದಿಕೆಯಲ್ಲಿ ತೀರ್ಮಾನಿಸಲಾಗಿದೆ.
ಮಹದಾಯಿ ಗೋವಾ ರಾಜ್ಯದ ಜನತೆಯ ಜೀವನದಿ, ಕರ್ನಾಟಕಕ್ಕೆ ನೀರು ಬಿಡುವುದಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು. ಸಾವಂತ್ ಹೇಳಿಕೆಗೆ ಕಿಡಿಕಾರಿರುವ ಕರ್ನಾಟಕದ ರೈತರು ಇದೀಗ ಬೆಂಗಳೂರು ಚಲೋ ಚಳುವಳಿಗೆ ಮುಂದಾಗಿದ್ದಾರೆ.
ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ವಿರೇಶ ಸೊಬರದಮಠ ನೇತೃತ್ವದಲ್ಲಿ ಚಳುವಳಿ ನಡೆಯಲಿದ್ದು, ಮಹದಾಯಿ ನೀರಿಗಾಗಿ ಡ್ಯಾಂ ಕಾಮಗಾರಿ ಆರಂಭ ಮಾಡಬೇಕು, ಗದಿ ವಿಚಾರವಾಗಿ ಮಹಾ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು, ನಂಜುಂದಪ್ಪ ವರದಿ ಕೂಡಲೇ ಜಾರಿಗೆ ತರಬೇಕು ಎಂದು ರೈತರು ಆಗ್ರಹಿಸಿದ್ದಾರೆ.
					
				
					
					
					
					
					
					
					


