Kannada NewsLatest

ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ‘ಕನ್ನಡ ರಾಜ್ಯೋತ್ಸವ ಆಚರಣೆಯೊಂದಿಗೆ ಕನ್ನಡ ನಾಡು, ನುಡಿಯ ಬಗ್ಗೆ ಪ್ರೀತಿ, ಅಭಿಮಾನದ ಬದ್ಧತೆ ಇರಬೇಕು’ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕರೆ ನೀಡಿದರು.

ಪಟ್ಟಣದಲ್ಲಿ ಸೋಮವಾರದಂದು ಕನ್ನಡಪರ ಸಂಘಟನೆಗಳ ಆಶ್ರಯದೊಂದಿಗೆ ಜರುಗಿದ ಕನ್ನಡ ರಾಜ್ಯೋತ್ಸವದ ಮೆರವಣಿಗೆ ನಿಮಿತ್ಯ ತಾಯಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅತ್ಯಂತ ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ನಾಡಿನ ಹಿರಿಮೆಯು ವಿಶ್ವವ್ಯಾಪ್ತಿಯಾಗಿ ಬೆಳೆದಿದೆ ಎಂದು ಹೇಳಿದರು.
ಕಲೆ, ಸಾಹಿತ್ಯ, ವಿಜ್ಞಾನ, ಕೃಷಿ, ತಂತ್ರಜ್ಞಾನದಲ್ಲಿ ಕನ್ನಡ ನೆಲದ ಕೀರ್ತಿ ವಿಜೃಂಭಿಸಿದೆ. ಯುವ ಪೀಳಿಗೆಯು ತಾವು ಬೆಳೆಯುವುದರೊಂದಿಗೆ ಕನ್ನಡ ನಾಡು, ನುಡಿಯ ಬೆಳವಣಿಗೆಗೆ ಅರ್ಪಿಸಿಕೊಳ್ಳಬೇಕು ಎಂದರು.

Home add -Advt

ಕನ್ನಡದಲ್ಲಿ ಮಾತನಾಡುವುದು ಮತ್ತು ವ್ಯವಹರಿಸುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕು. ಪ್ರಸಕ್ತ ರಾಜ್ಯೋತ್ಸವ ಅಂಗವಾಗಿ ಸರ್ಕಾರವು ಅನುಷ್ಠಾನಗೊಳಿಸಿರುವ ಮಾತಾಡ್ ಮಾತಾಡ್ ಕನ್ನಡ ಅಭಿಯಾನವನ್ನು ಯಶಸ್ಸಿಗೊಳಿಸಬೇಕು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರ ಕರ್ನಾಟಕ ಎಂದು ಘೋಷಣೆ ಮಾಡಿರುವುದು ಉತ್ತರ ಕರ್ನಾಟಕದ ಜನರಿಗೆ ಹೆಮ್ಮೆ ತಂದಿದೆ. ಕನ್ನಡ ನಾಡು, ನುಡಿಯ ಬೆಳವಣಿಗೆಯ ಎಲ್ಲ ಚಟುವಟಿಕೆಗಳಿಗೆ ನನ್ನಿಂದ ನಿರಂತರ ಸಹಾಯ, ಸಹಕಾರ ಇದ್ದೇ ಇರುತ್ತದೆ ಎಂದು ತಿಳಿಸಿದರು.

ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಅವರು, ಇವರ ಅಗಲಿಕೆಯಿಂದ ಇಡೀ ಭಾರತೀಯ ಚಲನಚಿತ್ರೋದ್ಯಮಕ್ಕೆ ಅಪಾರ ಹಾನಿಯಾಗಿದೆ. ರೈತರ ಹೆಮ್ಮೆಯ ಸಹಕಾರ ಸಂಸ್ಥೆಯಾದ ಕೆಎಂಎಫ್‌ನ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಸಂಸ್ಥೆಯು ಪ್ರಗತಿಯತ್ತ ಸಾಗಲು ಕಾರಣೀಕರ್ತರಾಗಿದ್ದರು. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಸ್ವಾಗತಾರ್ಹ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಮೂಡಲಗಿ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರೊ. ಸಂಗಮೇಶ ಗುಜಗೊಂಡ, ಕಸಾಪ ಮಾಜಿ ಅಧ್ಯಕ್ಷ ಬಾಲಶೇಖರ ಬಂದಿ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಪುರಸಭೆ ಮಾಜಿ ಅಧ್ಯಕ್ಷ ರಾಮಣ್ಣಾ ಹಂದಿಗುAದ, ಪುರಸಭೆ ಮಾಜಿ ಉಪಾಧ್ಯಕ್ಷರಾದ ಆರ್.ಪಿ. ಸೋನವಾಲ್ಕರ, ಅಜೀಜ ಡಾಂಗೆ, ಹುಸೇನಸಾಬ ಶೇಖ, ಮುಖಂಡರಾದ ಬಿ.ಬಿ. ಹಂದಿಗುAದ, ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಅರಭಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ದೀಪಕ ಹರ್ದಿ, ತಾಲೂಕಾ ಮಟ್ಟದ ವಿವಿಧ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು, ಮೂಡಲಗಿ ನೆರೆಹೊರೆಯ ಹಲವು ಮುಖಂಡರುಗಳು ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್‌ಎಸ್‌ಆರ್ ಕಾಲೇಜ್‌ನಿಂದ ಆರಂಭಗೊಂಡ ಕನ್ನಡ ನಾಡು-ನುಡಿಯನ್ನು ಬಿಂಬಿಸುವ ರೂಪಕಗಳನ್ನೊಳಗೊಂಡ ಮೆರವಣಿಗೆಯು ವಿವಿಧ ವಾಧ್ಯ ವೃಂದಗಳೊAದಿಗೆ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ನಂತರ ಕಲ್ಮೇಶ್ವರ ವೃತ್ತದಲ್ಲಿ ಕಲ್ಮೇಶ್ವರ ಪುತ್ಥಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೂ ಹಾರ ಸಮರ್ಪಿಸುವ ಮೂಲಕ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ತೆರೆ ಎಳೆದರು.
ಕರಾವಳಿ ಸಂಪೂರ್ಣ ದೇಶದ್ರೋಹಿಗಳ ಆಡಂಬರವಾಗುತ್ತಿದೆ -ಸಂಸದ ಅನಂತಕುಮಾರ್ ಹೆಗಡೆ

Related Articles

Back to top button