Belagavi NewsBelgaum News

*ಎಂಇಎಸ್ ವಿರುದ್ಧ ಪ್ರತಿಭಟಿಸಿದ ಕರವೇ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯೋತ್ಸವದ ದಿನದಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ಕರಾಳ ದಿನಾಚರಣೆ ಆಚರಿಸಲು ಅನುಮತಿ ಕೊಡಬಾರದೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಇಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. 

ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವದ ದಿನ ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಕನ್ನಡದ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ ಆಚರಿಸುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡಿಗರಿಗೆ ದ್ರೋಹ ಬಗೆಯುವ ಕರಾಳ ದಿನಾಚರಣೆಗೆ ಈ ವರ್ಷ ಯಾವುದೇ ಕಾರಣಕ್ಕೂ ಬೆಳಗಾವಿ ನಗರ ಪೊಲೀಸ್ ಇಲಾಖೆಯು ಅನುಮತಿ ನೀಡಬಾರದು. ಅನುಮತಿ ನೀಡುವದಿಲ್ಲ ಎಂದು ಸುಳ್ಳು ಹೇಳಿ ಪೊಲೀಸ್ ಇಲಾಖೆಯು ಮದ್ಯರಾತ್ರಿ ಅನುಮತಿ ನೀಡುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡುತ್ತಾ ಬಂದಿರುತ್ತದೆ. ಈ ಕುರಿತು ನಾವು ರಾಜ್ಯದ ಗೃಹ ಮಂತ್ರಿಗಳಿಗೂ ಮತ್ತು ಮುಖ್ಯಮಂತ್ರಿಗಳಿಗೂ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ. 

ರಾಜ್ಯೋತ್ಸವದ ದಿನದಂದು ಕರಾಳ ದಿನಾಚರಣೆ ಮಾಡುತ್ತೇವೆ ಎಂದು ತಮ್ಮ ಬಳಿ ಬರುವ ಎಂಈಎಸ್ ನಾಯಕರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಅವರನ್ನು ಮುಂಜಾಗ್ರತವಾಗಿ ಬಂಧಿಸುವ ಮೂಲಕ ಕನ್ನಡದ ನೆಲದಲ್ಲಿ ಕನ್ನಡದ ಹಿತ ಕಾಯಬೇಕೆಂದು ಒತ್ತಾಯಿಸಿದರು.

ಬಾಳು ಜಡಗಿ, ಹೋಳೆಪ್ಪಾ ಸುಲಧಾಳ, ಸತೀಶ ಗುಡದವರ, ರಮೇಶ್ ಯರಗಣ್ಣವರ, ರುದ್ರಗೌಡ ಪಾಟೀಲ್, ಅಭಿಷೇಕ ಅಗಸಗಿ, ಅರ್ಜುನ ಕಾಂಬಳೆ, ಲೋಕೇಶ್ ರಾಠೋಡ, ಇಸ್ಮಾಯಿಲ್ ಮುಲ್ಲಾ, ಶ್ರೀಧರ್ ಕುರುಬರ, ಮಡಿವಾಳಿ ಗುಣಪ್ಪಾಚಿ, ರೋಖಾ ಲೋಕರಿ, ಮಹಾದೇವಿ ಕುರಬೇಟ, ಮಧು ಇಟಗಿ, ರೂಪಾಲಿ ಬಾರಿಗಡ್ಡಿ ಇದ್ದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button