
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನ ಹಲವು ಯುವಕರ ಕನಸು ಕಿಕ್ ಬಾಕ್ಸಿಂಗ್ ಪಟುವಾಗಬೇಕು ಎಂಬುದು. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ದುರಂತವೊಂದು ಸಂಭವಿಸಿದೆ. ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಿಕ್ ಬಾಕ್ಸಿಂಗ್ ಸ್ಪರ್ಧಿಯಾಗಿದ್ದ ಮೈಸೂರಿನ ಹೊಸಕೇರಿ ನಿವಾಸಿ 23 ವರ್ಷದ ಯುವಕ ನಿಖಿಲ್ ಮೃತ ವ್ಯಕ್ತಿ. ಭಾನುವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖಿಲ್ ಭಾಗವಹಿಸಿದ್ದ. ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ರಿಂಗ್ ನಲ್ಲಿ ಎದುರಾಳಿ ಹೊಡೆತಕ್ಕೆ ನಿಖಿಲ್ ಎದೆ ಭಾಗಕ್ಕೆ ಪೆಟ್ಟು ಬಿದ್ದಿತ್ತು. ಸ್ಪರ್ಧೆ ವೇಳೆಯೇ ನೆಲಕ್ಕೆ ಬಿದ್ದಿದ್ದ ನಿಖಿಲ್ ನನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿಖಿಲ್ ಶ್ವಾಸಕೋಶ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿತ್ತು ಎಂದು ತಿಳಿದುಬಂದಿದೆ. ಮೂರು ದಿನಗಳಿಂದ ಚಿಕಿತ್ಸೆ ನಿಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಯುವಕ ಮೃತಪಟ್ಟಿದ್ದಾನೆ.
ಸ್ಪರ್ಧೆ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನಿಖಿಲ್ ಕುಟುಂಬದವರು, ಕಿಕ್ ಬಾಕ್ಸಿಂಗ್ ಸ್ಪರ್ಧೆ ಆಯೋಜಕರ ವಿರುದ್ಧ ಜ್ಞಾನ ಭಾರತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಪಿಲಾ ನದಿಯಲ್ಲಿ ಈಜಲು ಜಿಗಿದ ಹುಡುಗರು; ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಯುವಕ