Wanted Tailor2
Cancer Hospital 2
Bottom Add. 3

*ವೀರರು, ಧೀಮಂತರ ತತ್ವಾದರ್ಶ ಅಳವಡಿಸಿಕೊಳ್ಳಬೇಕು: ಸಚಿವ ಸತೀಶ ಜಾರಕಿಹೊಳಿ*

ಚನ್ನಮ್ಮನ ಹುಟ್ಟೂರು ಕಾಕತಿಯಲ್ಲಿ ಕಿತ್ತೂರು ಉತ್ಸವಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವರ್ಷದಲ್ಲಿ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಕಿತ್ತೂರು ರಾಣಿ ಚನ್ನಮ್ಮಳ ಹೋರಾಟ, ಬಾಬಾಸಾಹೇಬ್ ಅಂಬೇಡ್ಕರವರು ಬರೆದ ಸಂವಿಧಾನ, ಬಸವಣ್ಣವರ ಸಮಾನತೆ, ಬುದ್ಧನ ತತ್ವ, ಶಾಹು ಮಹಾರಾಜರ ಶಿಕ್ಷಣ ಕ್ರಾಂತಿ ಇವುಗಳನ್ನು ತಿಳಿದುಕೊಂಡರೆ ದೇಶದ ಅಭಿವೃದ್ದಿ ಜೊತೆಗೆ ನಮ್ಮ ವೈಯಕ್ತಿಕ ಬದುಕನ್ನು ಸಹ ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಚನ್ನಮ್ಮನ ಹುಟ್ಟೂರು ಕಾಕತಿಯಲ್ಲಿ (ಅ.23) ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಕಿತ್ತೂರಾಣಿ ಚನ್ನಮ್ಮ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ವೀರಜ್ಯೋತಿಯು ರಾಜ್ಯದಾದ್ಯಂತ ಸಂಚರಿಸುವ ಮೂಲಕ ಕಿತ್ತೂರಿನ ಐತಿಹಾಸಿಕ ಘಟನೆ, ಪರಂಪರೆ, ಸ್ವಾತಂತ್ರ್ಯ ಹೋರಾಟ, ತತ್ವಾದರ್ಶ, ಇತಿಹಾಸ ಚರಿತ್ರೆ ಇವುಗಳನ್ನು ಎಲ್ಲೆಡೆ ಸಾರಿದಂತಾಗಿದೆ.

ಸಮಾಜಕ್ಕೆ ಉತ್ಸವಗಳ ಅವಶ್ಯಕತೆವಿದ್ದು, ದಸರಾ ಉತ್ಸವ, ಕಿತ್ತೂರು ಉತ್ಸವ,ರನ್ನ ಉತ್ಸವ ಸೇರಿದಂತೆ ವಿವಿಧ ಉತ್ಸವಗಳ ಆಚರಣೆ ಜೊತೆಗೆ ಅವುಗಳ ಇತಿಹಾಸ ತಿಳಿದುಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ಸವಗಳು ಅರ್ಥಪೂರ್ಣವಾಗುವುದು ಎಂದು ಹೇಳಿದರು.

ಕಾಕತಿ ಅಭಿವೃದ್ಧಿಗೆ ಕ್ರಮ-ಭರವಸೆ:

ಕಿತ್ತೂರು ಪ್ರಾಧಿಕಾರದಿಂದ ಬಂದ ಅನುದಾನದಿಂದ ಕಾಕತಿಯಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. ಉಳಿದ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕಾಕತಿ ಕೋಟೆ ಅರಣ್ಯ ಇಲಾಖೆ ಅಧೀನದಲ್ಲಿದ್ದು, ವೀರರಾಣಿ ಚನ್ನಮ್ಮನ ಜನ್ಮಸ್ಥಳ ಖಾಸಗಿ ಒಡೆತನದಲ್ಲಿದ್ದು ಈ ಎರಡು ಸಮಸ್ಯೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಆದರೆ ಇದೀಗ ಜಿಲ್ಲಾಡಳಿತದಿಂದ ಭೂ ಸ್ವಾಧೀನ ಮಾಡಿ ವಶಕ್ಕೆ ಪಡೆದು ಆದಷ್ಟು ಬೇಗ ಅಭಿವೃದ್ಧಿಗೊಳಿಸಲಾಗುವುದು ಎಂದು ಸಚಿವ ಜಾರಕಿಹೊಳಿ ಹೇಳಿದರು.

ಸರ್ಕಾರ ಕೊಟ್ಟ ಕಡಿಮೆ ಅನುದಾನದಲ್ಲಿ ಜಿಲ್ಲಾಡಳಿತ ಅಚ್ಚುಕಟ್ಟಾಗಿ ಉತ್ಸವ ನಡೆಸುತ್ತದೆ. ಆದರೆ ಇದಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಕೊಟ್ಟು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲು ಪ್ರಯತ್ನ ಮಾಡುತ್ತವೆ ಎಂದು ಲೋಕಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.

ಇದೇ ವೇಳೆ ವಿಶೇಷ ಉಪನ್ಯಾಸ ನೀಡಿದ ಬೆಳಗಾವಿ ಆರ್.ಪಿ.ಡಿ. ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಬಿ. ಕೋಲಕಾರ ಅವರು, ಇಡೀ ನಾಡಿಗೆ ಅದಮ್ಯ ಚೇತನ, ಪ್ರತಿಭೆ, ಜನಶಕ್ತಿ ವೀರ ರಾಣಿ ಕಿತ್ತೂರು ಚನ್ನಮ್ಮ. ಬೆಳಗಾವಿ ಜಿಲ್ಲೆಯಲ್ಲಿ ದೇಶಿಯ ಆಳ್ವಿಕೆಯನ್ನು ಜನ ಬದುಕಿನ ಹಿತ, ಜನಮುಖಿ ಕಾಳಜಿ ಇವುಗಳನ್ನು ಪ್ರಧಾನವಾಗಿಟ್ಟುಕೊಂಡು ಆಡಳಿತ ನಡೆಸಿ
ಇತಿಹಾಸದಲ್ಲಿ ಅಜರಾಮರಳಾದಂತಹ ಕೀರ್ತಿ ವೀರರಾಣಿ ಚೆನ್ನಮ್ಮಳಿಗೆ ಸಲ್ಲುತ್ತದೆ ಎಂದರು.

ಬ್ರಿಟಿಷ ಕಂಪನಿ ಆಳ್ವಿಕೆ ಪ್ರಾಬಲ್ಯ ಬಲಿಷ್ಠ, ವಾಗಿರುವುದರಿಂದ ನಿರಂತರ ದಾಳಿಗೊಳಗಾದ ಸಂದರ್ಭದಲ್ಲಿ ಚನ್ನಮ್ಮ ತನ್ನ ಬಲ ಹೆಚ್ಚಿಸಿಕೊಳ್ಳಲು ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಬಿಚ್ಚುಗತ್ತಿ ಚೆನ್ನಬಸಪ್ಪರನ್ನು ಇವುರುಗಳನ್ನು ಅಂಗರಕ್ಷಕ ಪಡೆಯಲ್ಲಿ ಸೇರಿಸಿಕೊಂಡು ಹೋರಾಡಿದ ವೀರ ಮಹಿಳೆ ಎಂದು ಹೇಳಿದರು.

ಭಾರತದ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂಬ ಮೊಟ್ಟ ಮೊದಲ ಕಾದಂಬರಿ, ಕಿತ್ತೂರು ಸಂಸ್ಥಾನ ಸಂದೇಶ ಸಾರುವ ಕನ್ನಡ ನೆಲದ ಮಹಾ ಸೌಭಾಗ್ಯ ವೀರರಾಣಿ ಕಿತ್ತೂರು ಚನ್ನಮ್ಮ ಎಂಬ ಗ್ರಂಥಗಳು ರಚನೆಯಾಗಿವೆ ಇವುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

ವಿದ್ವಾಂಸರಾದ ಕ.ಸ ಹಾಲಪ್ಪನವರು ವೀರರಾಣಿ ಕಿತ್ತೂರು ಚೆನ್ನಮ್ಮಳ ಆಡಳಿತ ವೈಖರ್ಯ ಮೆಚ್ಚಿ ಭಾರತದ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂದು ಹೇಳಿದರು.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಆಸೀಫ್ (ರಾಜು) ಸೇಠ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್, ಕಾಕತಿ ಶಿವಪೂಜೆ ಮಠದ ಸ್ವಾಮೀಜಿಗಳಾದ ರಾಚಯ್ಯ ಮಹಾಸ್ವಾಮಿಗಳು, ಕಾಕತಿ ಶಿವಪೂಜೆಮಠದ ಸ್ವಾಮೀಜಿಗಳಾದ ಉದಯ ಸ್ವಾಮೀಜಿ, ಕಾಕತಿ ಗ್ರಾಮ ಪಂಚಾಯತ ಅಧ್ಯಕ್ಷರಾದ ವರ್ಷಾ ಮುಚ್ಚಂಡಿಕರ, ಕಾಕತಿ ಗ್ರಾಮ ಪಂಚಾಯತ ಉಪಾ ಅಧ್ಯಕ್ಷರಾದ ರೇಣುಕಾ ಕೊಳಿಕರ, ಕಾಕತಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಬೆಳಗಾವಿ ಉಪವಿಭಾಗಾಧಿಗಳಾದ ಶ್ರವಣ ನಾಯ್ಕ, ತಹಶೀಲ್ದಾರ ಬಸವರಾಜ‌ ನಾಗರಾಳ, ಕಾಕತಿ ಜಿಲ್ಲಾ ಪಂಚಾಯತ ಸದಸ್ಯರಾದ ಸಿದ್ದನಗೌಡ ಸುಣಗಾರ, ಯಲ್ಲಪ್ಪ ಕೊಳಿಕರ,ಕಾಕತಿ ಗ್ರಾಮ ಪಂಚಾಯತ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page