Latest

ಕರ್ನಾಟಕ- ಕೊರಿಯಾ ಗಣರಾಜ್ಯ ಬಾಂಧವ್ಯ ವೃದ್ಧಿಯಿಂದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: ಸಿಎಂ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್ ವಲಯದಲ್ಲಿ ಮುಂಚೂಣಿಯಲ್ಲಿರುವ ಕೊರಿಯಾ ಗಣರಾಜ್ಯ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯದ  ಮಧ್ಯೆ ಬಾಂಧವ್ಯ ಬಲಗೊಳ್ಳುವುದರಿಂದ  ಉಭಯ ಭಾಗಗಳಲ್ಲಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   ಹೇಳಿದರು.
ಅವರು  ತಮ್ಮನ್ನು ಗುರುವಾರ ಭೇಟಿ ಮಾಡಿದ ಕೊರಿಯಾಗಣರಾಜ್ಯದ ರಾಯಭಾರಿ ಜೇ-ಬಾಕ್ ಚಾಂಗ್   ಅವರ ನೇತೃತ್ವದ ನಿಯೋಗದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಕರ್ನಾಟಕ ರಾಜ್ಯ ಕೊರಿಯಾದೊಂದಿಗೆ ಹಲವು ದಶಕಗಳ ನಂಟು ಹೊಂದಿರುವುದು ಹೆಮ್ಮೆಯ ವಿಷಯ. ಕೋರಿಯಾ ಗಣರಾಜ್ಯ ನೂತನ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಅತ್ಯುತ್ತಮ ಉತ್ಪನ್ನಗಳನ್ನು ತಯಾರಿಸುತ್ತಿರುವುದು ಶ್ಲಾಘನೀಯ. ಭಾರತ ದೇಶ ಹಾಗೂ ಕರ್ನಾಟಕ ರಾಜ್ಯ ಇಂದು ಅತ್ಯಂತ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ. ಅತ್ಯುತ್ತಮ ಕುಶಲ ಮಾನವ ಸಂಪನ್ಮೂಲ ಹಾಗೂ ಕಾರ್ಮಿಕರ ಲಭ್ಯತೆ ಮತ್ತಿತರ ಅನುಕೂಲಗಳು ಭಾರತವನ್ನು ಹೂಡಿಕೆದಾರರ ಆಕರ್ಷಣೆಯ ತಾಣವಾಗಿಸಿದೆ. ಅದರಲ್ಲೂ ಕರ್ನಾಟಕ ರಾಜ್ಯ ದೇಶದ ಶೇ. 38 ರಷ್ಟು ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ತಂತ್ರಜ್ಞಾನ ಆಧಾರಿತ ಉದ್ಯಮಿಗಳ ನೆಲೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ದಕ್ಷಿಣ ಕೊರಿಯಾ ಕೈಜೋಡಿಸಿದಲ್ಲಿ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಇಬ್ಬರಿಗೂ ಅನುಕೂಲವಾಗಲಿದೆ ಎಂದರು.
ನವೆಂಬರ್ ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ ಹಾಗೂ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿಯೂ ಭಾಗವಹಿಸುವಂತೆ ಮುಖ್ಯಮಂತ್ರಿಗಳು ಕೋರಿಯಾ  ರಾಯಭಾರಿಗೆ ಆಹ್ವಾನ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕೋರಿಯನ್  ರಾಯಭಾರಿ ಜೇ-ಬಾಕ್ ಚಾಂಗ್ ಅವರು ಕೊರಿಯಾ ಗಣರಾಜ್ಯ ಕರ್ನಾಟಕದೊಂದಿಗೆ ಆರ್ಥಿಕ ಹಾಗೂ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸಲು ಉತ್ಸುಕವಾಗಿದ್ದು, ಹಲವು ಸ್ಟಾರ್ಟಪ್ ಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿವೆ ಎಂದು ತಿಳಿಸಿದರು. ರಾಜ್ಯದಲ್ಲಿ ಈಗಾಗಲೇ 40 ಕ್ಕೂ ಹೆಚ್ಚು ಕೊರಿಯನ್ ಕಂಪೆನಿಗಳು ನೆಲೆಸಿವೆ. ಕೊರಿಯಾ ರಾಯಭಾರ ಕಚೇರಿಯು ಬೆಂಗಳೂರಿನಲ್ಲಿ ‘ಕೋರಿಯಾ ಆನ್ ದ ಮೂವ್’ ಎಂಬ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಆರ್ಥಿಕ ಸಹಕಾರದ ಕುರಿತು ಆಯೋಜಿಸಿದ ಕಾರ್ಯಕ್ರಮವೂ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ, ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.

ಅಪ್ರಾಪ್ತೆಯರೆದುರು ಗುಪ್ತಾಂಗ ಪ್ರದರ್ಶನ; ಮಲಯಾಳಂ ನಟ ಶ್ರೀಜಿತ್ ರವಿ ಪೋಕ್ಸೋ ಕಾಯಿದೆಯಡಿ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button