ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಪಿಸಿಸಿಯ ಮಹತ್ವಾಕಾಂಕ್ಷೆಯ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಬುಧವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆ ನೀಡಿದರು.
ಈ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಮೂರು ಜನರನ್ನು ಆಯ್ಕೆ ಮಾಡಿದ್ದು, ಬುಧವಾರ ಅವರಿಗೆ ಆರೋಗ್ಯ ಹಸ್ತದ ಕಿಟ್ ಗಳನ್ನು ಹಸ್ತಾಂತರಿಸಲಾಯಿತು.
ಈ ಕಿಟ್ ಗಳಲ್ಲಿ ಸುರಕ್ಷಿತ ಫೇಸ್ ಮಾಸ್ಕ್, ಸ್ಯಾನಿಟೈಸರ್ಸ್, ದೇಹ ಸುರಕ್ಷಿತ ಬಟ್ಟೆಗಳು, ಹೆಲ್ಮೆಟ್ ಫೇಸ್ ಶೀಲ್ಡ್, ಪಲ್ಸ್ ಮೀಟರ್, ಥರ್ಮಲ್ ಸ್ಕ್ಯಾನರ್ಸ್, ಹ್ಯಾಂಡ್ ಗ್ಲೊವ್ಸ್ ಮುಂತಾದ ಅವಶ್ಯಕತೆಯ ವಸ್ತುಗಳಿರುತ್ತವೆ.
ಇದೊಂದು ವಿಶಿಷ್ಟ ಯೋಜನೆಯಾಗಿದ್ದು ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ತಲಾ ಮೂರು ಜನ ಕೊರೋನಾ ವಾರಿಯರ್ಸ್ ಗಳನ್ನು ನಿಯೋಜನೆ ಮಾಡಲಾಗುತ್ತದೆ. ಈ ಕೊರೋನಾ ವಾರಿಯರ್ಸ್ ಗಳು ಪ್ರತಿ ಮನೆ ಮನೆಗೆ ತೆರಳಿ ಕುಟುಂಬದ ಎಲ್ಲ ಸದಸ್ಯರ ತಪಾಸಣೆಗಳೊಂದಿಗೆ ಕೊರೋನಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಾಧಿಕಾರಿಗಳ ಸಲಹೆಗಳನ್ನು ಹಾಗು ಮುಂಜಾಗ್ರತೆಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತುಮಾಹಿತಿ ನೀಡುವರು ಎಂದು ಲಕ್ಷ್ಮಿ ಹೆಬ್ಬಾಳಕರ್ ಮಾಹಿತಿ ನೀಡಿದರು.
ಆರೋಗ್ಯ ಹಸ್ತದ ಸಂಚಾಲಕರಾದ ಸದಾನಂದ ಡಂಗನವರ, ಸಿ ಸಿ ಪಾಟೀಲ, ಯಲ್ಲಪ್ಪ ಡೇಕೊಲ್ಕರ್, ಯುವರಾಜಕದಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಆರೋಗ್ಯ ಹಸ್ತ ತರಬೇತಿ ಕೇಂದ್ರದ ಮುಖ್ಯಸ್ಥ ಡಾ, ಮಲ್ಟಿನ್, ಅಡಿವೇಶ ಇಟಗಿ, ಸುರೇಶ ಇಟಗಿ, ಮನೋಹರ ಬೆಳಗಾಂವಕರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.