*ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ಸೇರಿ ಮೂವರು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕಾನೂನು ವಿಶ್ವವಿದ್ಯಾಲಯದ ಪರಿಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರನ್ನು ಬಂಧಿಸಲಾಗಿದೆ.
ಕೋಲಾರದ ಬಸವಶ್ರೀ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲ ನಾಗರಾಜ್, ಅವರ ಕಾರು ಚಾಲಕ ಹಾಗೂ ವಿದ್ಯಾರ್ಥಿಯೂ ಆಗಿರುವ ಜಗದೀಶ್ ಮತ್ತು ಬಂಗಾರಪೇಟೆ ಕಾನೂನು ಕಾಲೇಜಿನ ವಿದ್ಯಾರ್ಥಿ ವರುಣ್ ಕುಮಾರ್ ಬಂಧಿತ ಆರೋಪಿಗಳು.
ಜ.23ರಂದು ನಿಗದಿಯಾಗಿದ್ದ ಕಾಂಟ್ರ್ಯಾಕ್ಟ್ ಲಾ-1 ಪ್ರಶ್ನೆ ಪತ್ರಿಕೆ ಪರೀಕ್ಷೆಗೂ ಮುನ್ನವೇ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್ ಗಳಲ್ಲಿ ವೈರಲ್ ಆಗಿತ್ತು. ಇದರ ಹಿಂದೆ ಉಪ ಪ್ರಾಂಶುಪಾಲ ನಾಗರಾಜ್, ಅವರ ಕಾಲೇಜಿನ ವಿದ್ಯಾರ್ಥಿಯೂ ಆಗಿದ್ದ ಜಗದೀಶ್, ಕೈವಾಡದ ಬಗ್ಗೆ ಆರೋಪ ಕೇಳಿಬಂದಿತ್ತು. ಉಪ ಪ್ರಾಂಶುಪಾಲ ನಾಗರಾಜ್ ಮೊಬೈಲ್ ನಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು ತನ್ನ ಮೊಬೈಲ್ ಗೆ ಜಗದೀಶ್ ವರ್ಗಾಯಿಸಿಕೊಂಡಿದ್ದ. ಬಳಿಕ ಅವುಗಳನ್ನು ಹಣಕ್ಕಾಗಿ ಸೋರಿಕೆ ಮಾಡುತ್ತಿದ್ದ
ಬಂಗಾರಪೇಟೆ ಕಾನೂನು ಕಾಲೇಜು ವಿದ್ಯಾರ್ಥಿ ವರುಣ್, ಪರೀಕ್ಷೆ ಹಿಂದಿನ ದಿನ ಕಾಲೇಜಿಗೆ ಬಂದು ಯಾರಿಗೂ ತಿಳಿಯದಂತೆ ಪ್ರಶ್ನೆ ಪತ್ರಿಕೆಗಳನ್ನು ತೆರೆದು ಅವುಗಳನ್ನು ತನ್ನ ಮೊಬೈಲ್ ನಲ್ಲಿ ಕಾಪಿ ಮಾಡಿಕೊಂಡು ಎಸ್ಕೇಪ್ ಆಗಿ, ಹಣಕ್ಕಾಗಿ ಅವುಗಳನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡುತ್ತಿದ್ದ.
ಕರ್ನಾಟಕ ಕಾನೂನು ವಿಶ್ವವಿದ್ಯಾಲಯಗಳ ಚೇರ್ ಮನ್ ವಿಶ್ವನಾಥ್ ಕೆ.ಎನ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರನ್ನು ಸೆರೆಹಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ