Kannada NewsKarnataka NewsLatest

ನ. 23 ರಂದು ನಾಮಪತ್ರ ಸಲ್ಲಿಕೆ, ಚನ್ನರಾಜ್ ಹಟ್ಟಿಹೊಳಿ ಗೆಲುವು ಖಚಿತ – ಲಕ್ಷ್ಮಿ ಹೆಬ್ಬಾಳಕರ್

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ” ನಮ್ಮಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆದಿಲ್ಲ.  ಕಾಂಗ್ರೆಸ್ ನಾಯಕರ  ಒಮ್ಮತದಿಂದ  ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ್ ಹಟ್ಟಿಹೊಳಿ ನ. 23 ರಂದು  ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.  ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೆವೆ”  ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,   ಕಾಂಗ್ರೆಸ್ ನಾಯಕರು ಚುನಾವಣೆ ಪ್ರಚಾರ ಮಾಡಲು ಅನುಮತಿ ನೀಡಿದ್ದಾರೆ.  ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅಧ್ಯಕ್ಷರ  ಅಪ್ಪಣೆ ಪಡೆದು  ಪ್ರಚಾರಕ್ಕೆ ಸಜ್ಜಾಗಿದ್ದೇವೆ. 14 ತಾಲ್ಲೂಕಿನಲ್ಲಿ 8800ಕ್ಕೂ ಅಧಿಕ ಮತದಾರರು ಇದ್ದಾರೆ. ಚುನಾವಣೆ ಪ್ರಚಾರಕ್ಕೆ ಕಡಿಮೆ ದಿನಗಳು ಇರುವುದರಿಂದ ಕಾಂಗ್ರೆಸ್ ನಾಯಕರು ಅನುಮತಿ ನೀಡಿದ ಬಳಿಕ  ಪ್ರಚಾರ ಮಾಡಲಾಗುತ್ತಿದೆ ಎಂದರು.
ಇಲ್ಲಿ ಯಾವುದೇ ನಾಯಕರ ಟಿಕೆಟ್ ಕೈ ತಪ್ಪಿಸಿ, ನಾವು   ಪಡೆದುಕೊಂಡಿಲ್ಲ. ಕಾಂಗ್ರೆಸ್ ಎಲ್ಲಾ ನಾಯಕರ ಮಾರ್ಗದರ್ಶನದಲ್ಲಿ  ಹಾಗೂ ಒಮ್ಮತದ ಅಭಿಪ್ರಾಯದ ಮೇಲೆ ಟಿಕೆಟ್ ಪಡೆದುಕೊಳ್ಳಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ಈ ವ್ಯಕ್ತಿ ಸೂಕ್ತ ಎಂದು ನಾಯಕರು ತೀರ್ಮಾನ ಮಾಡಿದ ಬಳಿಕ ಅಭ್ಯರ್ಥಿಯ ಹೆಸರನ್ನು ಅಧ್ಯಕ್ಷರು ಅಂತಿಮಗೊಳಿಸಿದ್ದಾರೆ.
ನಮ್ಮಲ್ಲಿ ಟಿಕೆಟ್ ಗಾಗಿ ಪೈಪೋಟಿ ಇಲ್ಲ:  ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಎಮ್ ಎಲ್ ಸಿ  ಟಿಕೆಟ್ ಗಾಗಿ ಪೈಪೋಟಿ ನಡೆಸಿಲ್ಲ, ಒಂದು ವೇಳೆ ಹಾಗೇನಾದರೂ ಆಗಿದ್ದರೆ ಮೂರು ನಾಲ್ಕು  ಅರ್ಹ ನಾಯಕರ ಹೆಸರನ್ನು  ಹೈಕಮಾಂಡ್  ಗೆ ಕಳುಸುವುದು ಸಾಮಾನ್ಯ . ನಮ್ಮಲ್ಲಿ ಟಿಕೆಟ್ ಗಾಗಿ ಪೈಪೋಟಿ ನಡೆದಿಲ್ಲ  ಎಂದು ಸ್ಪಷ್ಟನೆ ನೀಡಿದರು.
 ಘಟಾನುಘಟಿ ನಾಯಕರನ್ನು ಎದುರು ಹಾಕಿಕೊಳ್ಳುವ ಪ್ರಶ್ನೆ  ಇಲ್ಲ. ನಾನು ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದೆ.  ಹೀಗಾಗಿ ಎಲ್ಲ ನಾಯಕರೂ  ಒಪ್ಪಿಕೊಂಡಿದ್ದಾರೆ.  ಲಖನ್ ಜಾರಕಿಹೊಳಿ ಅವರಿಗೆ ಬಿಜೆಪಿ ಟಿಕೆಟ್ ನೀಡುವ  ವಿಷಯ ನನಗೆ ಗೊತ್ತಿಲ್ಲ. ಅವರು ಸ್ವತಂತ್ರ ಅಭ್ಯರ್ಥಿಯಾಗಿ  ಸ್ಪರ್ಧಿಸುವುದರ  ಬಗ್ಗೆ ಮಾಹಿತಿ ಇದೆ.  ಕಾರ್ಯಾಧ್ಯಕ್ಷರು ಹೇಳಿದ ಕೆಲಸವನ್ನು ನಾವು ಮಾಡುತ್ತೇವೆ. ಬೇರೆ ವಿಚಾರ ಮಾಡಲು ಹೋಗುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರು ಮುಂದಿನ ದಿನಗಳಲ್ಲಿ ಉಜ್ವಲ  ಸ್ಥಾನಕ್ಕೇರುವ ದೊಡ್ಡ ನಾಯಕರಾಗಿದ್ದಾರೆ.  ಚುನಾವಣೆ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿದೆ.  ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಸಕರು , ಮಾಜಿ ಶಾಸಕರು ಹಾಗೂ  ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಎಲ್ಲವೂ ಸತೀಶ ಜಾರಕಿಹೊಳಿಯವರ ನಿರ್ದೇಶನದ ಮೇಲೆಯೇ ನಡೆಯಲಿದೆ . ಈ ವಿಷಯದಲ್ಲಿ ಅವರು ಕುಟುಂಬ ರಾಜಕಾರಣ ಮಾಡುವವರಲ್ಲ ಎಂದು ಹೆಬ್ಬಾಳಕರ್ ಹೇಳಿದರು.
ಚನ್ನರಾಜ್ ಹಟ್ಟಿಹೊಳಿ ಗೆಲುವು ಖಚಿತ: ಎಲ್ಲಾ ನಾಯಕರ ಒಮ್ಮತದ ಮೇರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚನ್ನರಾಜ್ ಹಟ್ಟಿಹೊಳಿಗೆ ಟಿಕೆಟ್ ಘೋಷಣೆಯಾಗಿದೆ.  ಅವರು ಗೆಲುವು ಸಾಧಿಸುವುದು ಖಚಿತ.  ಜಿಲ್ಲೆಯ ಎಲ್ಲಾ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ವಿಶ್ವಾಸ ತೆಗೆದುಕೊಂಡು  ಪಕ್ಷದ ಏಳಿಗೆಗಾಗಿ ಶ್ರಮಿಸಲಿದ್ದಾರೆ ಎಂದು ಭರವಸೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button