Latest

*ನಮ್ಮ ಧ್ವನಿ, ಸಂಸ್ಕೃತಿ, ಭಾಷೆ, ಸಂಪನ್ಮೂಲ ರಕ್ಷಣೆಗೆ ಒಗ್ಗಟ್ಟಾಗಿ ಹೋರಾಡೋಣ: ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ*

ಪ್ರಗತಿವಾಹಿನಿ ಸುದ್ದಿ: “ಕೇಂದ್ರ ಸರ್ಕಾರ ಕೇವಲ ಜನಸಂಖ್ಯೆ ಆಧಾರದ ಮೇಲೆ ಮಾತ್ರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದ್ದು, ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಪಂಜಾಬ್ ಸೇರಿದಂತೆ ಪ್ರಗತಿಪರ ರಾಜ್ಯಗಳ ರಾಜಕೀಯ ಧ್ವನಿ ಹತ್ತಿಕ್ಕಲಾಗುತ್ತದೆ. ಹೀಗಾಗಿ ಕೇವಲ ಜನಸಂಖ್ಯೆ ಮಾತ್ರವಲ್ಲದೇ, ಮಾನವ ಅಭಿವೃದ್ಧಿ, ತೆರಿಗೆ ಕೊಡುಗೆ, ಆಡಳಿತ, ಜನಸಂಖ್ಯೆ ನಿಯಂತ್ರಣದ ಸೂಚ್ಯಂಕಗಳ ಮಾನದಂಡಗಳ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಆಗಬೇಕು. ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವುದಾದರೆ, 1971ರ ಜನಗಣತಿ ಆಧಾರದ ಮೇಲೆ ಮರುವಿಂಗಡಣೆ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಚೆನ್ನೈನಲ್ಲಿ ಶನಿವಾರ ನಡೆದ ಮೊದಲ ಜೆಎಸಿ (Joint Action Committee) ಸಭೆಯಲ್ಲಿ ಕರ್ನಾಟಕದ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿದರು. ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರವಾಗಿ ಕರ್ನಾಟಕದ ನಿಲುವನ್ನು ತಿಳಿಸಿದರು. 

“ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಂಪೂರ್ಣ ಬೆಂಬಲದೊಂದಿಗೆ ಈ ಸಭೆಯಲ್ಲಿ ಮಾತನಾಡುತ್ತಿದ್ದೇನೆ. ಅನಾರೋಗ್ಯದ ಕಾರಣ ಅವರು ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ದೇಶದ ಒಕೂಟ ವ್ಯವಸ್ಥೆಯ ರಕ್ಷಣೆಯ ಈ ಐತಿಹಾಸಿಕ ಹೋರಾಟಕ್ಕೆ ಅವರ ಬೆಂಬಲವಿದೆ.

ಸ್ನೇಹಿತರೆ, ದೇಶದ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸೇರಿದ್ದೇವೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಗಿರುವ ಒಕ್ಕೂಟ ವ್ಯವಸ್ಥೆಯೇ ಇಂದು ಅಪಾಯಕ್ಕೆ ಸಿಲುಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಹಂತ ಹಂತವಾಗಿ ಇಂದು ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ದಬ್ಬಾಳಿಕೆಗೆ ತಲೆಬಾಗುವ ಅಥವಾ ಅದನ್ನು ವಿರೋಧಿಸಿ ಮೇಲೇಳುವ ಆಯ್ಕೆ ಮಾತ್ರ ನಮ್ಮ ಮುಂದೆ ಇದೆ. ಹೀಗಾಗಿ ಕರ್ನಾಟಕ, ತಮಿಳುನಾಡು ಸೇರಿದಂತೆ ಈ ಸಭೆಯಲ್ಲಿ ಭಾಗವಹಿಸಿರುವ ಎಲ್ಲಾ ಪ್ರಗತಿಪರ ರಾಜ್ಯಗಳು ಪ್ರತಿರೋಧವನ್ನು ಆಯ್ಕೆ ಮಾಡಿಕೊಂಡಿದ್ದೇವೆ” ಎಂದು ತಿಳಿಸಿದರು. 

Home add -Advt

“ಕೇವಲ ಜನಸಂಖ್ಯೆಯನ್ನೇ ಮಾನದಂಡವಾಗಿಟ್ಟುಕೊಂಡು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗುತ್ತಿದೆ. ಇದು ದಕ್ಷಿಣ ರಾಜ್ಯಗಳ ಮೇಲೆ ನಡೆಸಲಾಗುತ್ತಿರುವ ರಾಜಕೀಯ ದಬ್ಬಾಳಿಕೆ. ಜನಸಂಖ್ಯೆ ನಿಯಂತ್ರಣ, ಅಕ್ಷರಸ್ಥರ ಸಂಖ್ಯೆ ಏರಿಕೆ ಹಾಗೂ ಮಹಿಳೆಯರ ಸಬಲೀಕರಣದಲ್ಲಿ ಯಶಸ್ಸು ಸಾಧಿಸಿರುವ ನಮ್ಮ ರಾಜ್ಯಗಳನ್ನು ಕುಗ್ಗಿಸುವ ಪ್ರಯತ್ನ ಕೇಂದ್ರ ಮಾಡುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಇತರೆ ದಕ್ಷಿಣ ಭಾರತದ ರಾಜ್ಯಗಳು ಭಾರತದ ಪ್ರಗತಿಯಲ್ಲಿ ಗಣನೀಯ ಕೊಡುಗೆ ನೀಡಿವೆ. ಈ ರಾಜ್ಯಗಳು ಶಿಕ್ಷಣ, ಆರೋಗ್ಯ ಸುಧಾರಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿವೆ. ಆದರೂ ಕೇಂದ್ರ ಸರ್ಕಾರ ನಮ್ಮ ಸಂಸತ್ ಪ್ರತಿನಿಧಿತ್ವವನ್ನು ಕಡಿತಗೊಳಿಸಲು ಮುಂದಾಗಿದೆ. ಆಮೂಲಕ ರಾಷ್ಟ್ರ ಮಟ್ಟದಲ್ಲಿ ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಇದು ಕೇವಲ ಅನ್ಯಾಯ ಮಾತ್ರವಲ್ಲ, ಇದೊಂದು ದ್ರೋಹ. ಉತ್ತಮ ಆಡಳಿತ ಹಾಗೂ ಪ್ರಗತಿ ಸಾಧಿಸಿರುವ ರಾಜ್ಯಗಳಿಗೆ ಮಾನ್ಯತೆ ಸಿಗಬೇಕೇ ಹೊರತು ಕಡೆಗಣಿಸಬಾರದು” ಎಂದು ಆಗ್ರಹಿಸಿದರು.

ನಮ್ಮ ಸಂಪನ್ಮೂಲ ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರ

“ಕರ್ನಾಟಕ ರಾಜ್ಯವು ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ವಾರ್ಷಿಕವಾಗಿ 4 ಲಕ್ಷ ಕೋಟಿ ಕೊಡುಗೆ ನೀಡುತ್ತಿದೆ. ಆದರೂ ಕೇಂದ್ರದಿಂದ ನಮಗೆ ಸಿಗುತ್ತಿರುವುದೇನು? ತೆರಿಗೆ ಹಂಚಿಕೆಯಲ್ಲಿ ಕೇವಲ 45 ಸಾವಿರ ಕೋಟಿ ಹಾಗೂ ಅನುದಾನದ ಮೂಲಕ 15 ಸಾವಿರ ಕೋಟಿ ಮಾತ್ರ. ಕರ್ನಾಟಕ ರಾಜ್ಯ ನೀಡುವ ಪ್ರತಿ ಒಂದು ರೂಪಾಯಿಗೆ ಕರ್ನಾಟಕ ರಾಜ್ಯಕ್ಕೆ ಮರಳಿ ಸಿಗುತ್ತಿರುವುದು ಕೇವಲ 13 ಪೈಸೆ ಮಾತ್ರ. ಇದು ಕೇವಲ ಆರ್ಥಿಕ ಅನ್ಯಾಯ ಮಾತ್ರವಲ್ಲ, ನಮ್ಮ ಸಂಪನ್ಮೂಲದ ವ್ಯವಸ್ಥಿತ ಲೂಟಿ” ಎಂದರು.

“ಕರ್ನಾಟಕದ ಜನಸಂಖ್ಯೆಯು ದೇಶದ ಜನಸಂಖ್ಯೆಯ ಶೇ.5ರಷ್ಟು ಮಾತ್ರ ಇದೆ. ಆದರೆ ದೇಶದ ಜಿಡಿಪಿಯಲ್ಲಿ ಶೇ.8.4ರಷ್ಟು ಕೊಡುಗೆ ನೀಡುತ್ತಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಜಿಎಸ್ ಟಿ ಪಾವತಿಸುತ್ತಿರುವ ರಾಜ್ಯ ಕರ್ನಾಟಕ. ಇನ್ನು ದಕ್ಷಿಣದ ರಾಜ್ಯಗಳು ಭಾರತದ ಜಿಡಿಪಿಗೆ ಶೇ.35ರಷ್ಟು ಕೊಡುಗೆ ನೀಡುತ್ತಿದ್ದು, ಈ ರಾಜ್ಯಗಳನ್ನು ಉತ್ತರ ಭಾರತದ ರಾಜ್ಯಗಳ ಎಟಿಎಂ ಆಗಿ ನೋಡಲಾಗುತ್ತಿದೆ. ಆದರೂ ಕೇಂದ್ರ ಸರ್ಕಾರದ ಅನುದಾನದಲ್ಲಿ ನಮಗೆ ಕಡಿಮೆ ಪಾಲು ದೊರೆಯುತ್ತಿದೆ. 15ನೇ ಹಣಕಾಸು ಆಯೋಗವು ಜನಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಿರುವ ಕಾರಣಕ್ಕೆ ಕರ್ನಾಟಕ ರಾಜ್ಯಕ್ಕೆ ನಷ್ಟವಾಗಿದೆ. ಈಗ ಪ್ರಸ್ತಾಪಿಸಲಾಗಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮೂಲಕ ನಮ್ಮ ರಾಜಕೀಯ ಧ್ವನಿಯನ್ನು ಹತ್ತಿಕ್ಕಲಾಗುವುದು. ಜತೆಗೆ ಸಂಸತ್ತಿನಲ್ಲಿ ನಮ್ಮ ಹಕ್ಕನ್ನು ಪ್ರತಿಪಾದಿಸಲು ಅವಕಾಶವನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ” ಎಂದರು.

ಪ್ರಾದೇಶಿಕ ಭಾಷೆಗಳು ನಾಗರೀಕತೆಯ ಜೀವಾಳ

“ಇದು ಕೇವಲ ಸಂಖ್ಯೆಗಳಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಇದು ನಮ್ಮ ಘನತೆ, ಸಂಸ್ಕೃತಿ ಹಾಗೂ ನಮ್ಮ ಪರಂಪರೆ ವಿಚಾರ. ಕರ್ನಾಟಕವು ಬಸವಣ್ಣನವರ ವಚನಗಳಿಂದ ಕುವೆಂಪು ಅವರವರೆಗೂ 1,500 ವರ್ಷಗಳ ಸಾಹಿತ್ಯದ ಪರಂಪರೆ ಹೊಂದಿದೆ. ತಮಿಳುನಾಡಿನ ಸಂಗಮ ಕಾವ್ಯ, ಕೇರಳದ ಸಾಂಪ್ರದಾಯಿಕ ಕಲೆಗಳು ಹಾಗೂ ಆಂಧ್ರ ಪ್ರದೇಶದ ತೆಲುಗು ಪರಂಪರೆ ಕೇವಲ ಪ್ರಾದೇಶಿಕ ಸಂಪತ್ತಲ್ಲ. ಇವೆಲ್ಲವೂ ಭಾರತದ ಆತ್ಮಗಳಾಗಿವೆ. ಆದರೂ ಕೇಂದ್ರ ಸರ್ಕಾರ ಒಂದು ದೇಶ, ಒಂದು ಭಾಷೆ ನೀತಿಯನ್ನು ಹೇರಲು ಮುಂದಾಗಿದೆ. ಆಮೂಲಕ ಭಾಷಾ ವೈವಿದ್ಯವನ್ನು ನಿರ್ಮೂಲನೆ ಮಾಡಲು ಹೊರಟಿದೆ.

ರೈಲ್ವೆ ಚಿಹ್ನೆಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ವರೆಗೂ ಹಿಂದಿ ಹೇರಿಕೆ ಮಾಡುತ್ತಿರುವುದು ನಮ್ಮ ಭಾಷಾ ಹಾಗೂ ಸಾಂಸ್ಕೃತಿಕ ಏಕತೆಗೆ ಧಕ್ಕೆ ತಂದಿದೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಹಾಗೂ ಇತರ ಪ್ರಾದೇಶಿಕ ಭಾಷೆಗಳು ಕೇವಲ ಆಡುಭಾಷೆ ಮಾತ್ರವಲ್ಲ, ಇವು ನಮ್ಮ ನಾಗರೀಕತೆಯ ಜೀವವಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಹೇಳಿದರು.

ನಮ್ಮ ದೇಶದ ಶಕ್ತಿ ವೈವಿಧ್ಯತೆಯೇ ಹೊರತು ಏಕರೂಪತೆಯಲ್ಲ

“ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಭಾಷಾ ಹಕ್ಕಿಗೆ ಹೋರಾಟ ಮಾಡಿದ ನಮ್ಮ ರಾಜ್ಯಗಳ ಮಹಾನ್ ನಾಯಕರಾದ ಪೆರಿಯಾರ್, ಅಂಬೇಡ್ಕರ್, ಬಸವಣ್ಣ, ಅಣ್ಣಾದುರೈ ಹಾಗೂ ನಾರಾಯಣ ಗುರುಗಳಿಂದ ನಾವು ಪ್ರೇರಣೆ ಪಡೆಯಬೇಕು. ಅವರ ಪರಂಪರೆಯು ವೈವಿದ್ಯತೆ ನಮ್ಮ ದೇಶದ ಶಕ್ತಿಯಾಗಿದ್ದು, ಏಕರೂಪತೆಯಲ್ಲ ಎಂಬುದನ್ನು ಸ್ಮರಿಸುತ್ತದೆ. 

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಕ್ಷೇತ್ರಗಳಿಗೆ ಸೀಮಿತವಲ್ಲ, ಇದು ಭಾರತದ ಒಕ್ಕೂಟ ವ್ಯವಸ್ಥೆಯ ಭವಿಷ್ಯದ ವಿಚಾರ. ಕೇಂದ್ರ ಸರ್ಕಾರ ಈ ಅವೈಜ್ಞಾನಿಕ ಸೂತ್ರದ ಮೇಲೆ ಕ್ಷೇತ್ರ ಮರು ವಿಂಗಡಣೆಗೆ ಮುಂದಾದರೆ, ಒಕ್ಕೂಟ ವ್ಯವವಸ್ಥೆಯ ಸಮತೋಲನವನ್ನೇ ಅಲುಗಾಡಿಸುತ್ತದೆ. ಅಲ್ಲದೆ ಜನಸಂಖ್ಯೆ ನಿಯಂತ್ರಣ ಮಾಡುವಲ್ಲಿ ವಿಫಲವಾದ ರಾಜ್ಯಗಳಿಗೆ ಹೆಚ್ಚಿನ ಶಕ್ತಿ ದೊರೆತಂತಾಗುತ್ತದೆ. ಆಮೂಲಕ ದಕ್ಷಿಣ ರಾಜ್ಯಗಳನ್ನು ಮೂಲೆಗುಂಪು ಮಾಡುವುದಷ್ಟೇ ಅಲ್ಲ, ನಮ್ಮ ಸಂವಿಧಾನದ ಮುಖ್ಯ ಉದ್ದೇಶ ಸಹಕಾರ ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧವಾಗಿದೆ. 

ಈ ಹಿನ್ನೆಲೆಯಲ್ಲಿ ನೂತನ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಪ್ರಸ್ತಾವವನ್ನು ಕರ್ನಾಟಕ ವಿಧಾನಸಭೆಯು ಅವಿರೋಧವಾಗಿ ತಿರಸ್ಕರಿಸುವ ನಿರ್ಣಯ ಹೊರಡಿಸಿದೆ. ಅಲ್ಲದೆ 1971ರ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರಗಳ ಪುನರ್ ವಿಂಗಡಣೆ ನಡೆಯಬೇಕು. ಆಗ ಮಾತ್ರ ಜನಸಂಖ್ಯೆ ನಿಯಂತ್ರಣ ಹಾಗೂ ಸುಸ್ಥಿರ ಅಭಿವೃದ್ಧಿ ಮಾಡಿರುವ ರಾಜ್ಯಗಳಿಗೆ ಸೂಕ್ತ ಮಾನ್ಯತೆ ಸಿಕ್ಕಂತಾಗುತ್ತದೆ” ಎಂದರು.

ಸಮಾನ ರಾಜ್ಯಗಳ ಒಕ್ಕೂಟ ವ್ಯವಸ್ಥೆಗೆ ಐದು ಆಗ್ರಹಗಳು

ಸ್ನೇಹಿತರೇ, ಇದು ಉತ್ತರ ಹಾಗೂ ದಕ್ಷಿಣ ನಡುವಣ ಹೋರಾಟವಲ್ಲ. ಭಾರತದಲ್ಲಿ ಸಮಾನ ರಾಜ್ಯಗಳ ಒಕ್ಕೂಟ ವ್ಯವಸ್ಥೆಗಾಗಿ ನಡೆಯುತ್ತಿರುವ ಹೋರಾಟ. ಹೀಗಾಗಿ ನಾವೆಲ್ಲರೂ ಸೇರಿ ಈ ಕೆಳಕಂಡ ಬೇಡಿಕೆಗಳಿಗೆ ಆಗ್ರಹಿಸೋಣ.

ಕ್ಷೇತ್ರ ಮರುವಿಂಗಡಣೆ ನ್ಯಾಯ

ಮಾನವ ಅಭಿವೃದ್ಧಿ ಸೂಚ್ಯಂಕಗಳು, ತೆರಿಗೆ ಪಾಲು ಹಾಗೂ ಜನಸಂಖ್ಯೆ ನಿಯಂತ್ರಣ, ಪ್ರತಿನಿಧಿತ್ವ, ಗುಣಮಟ್ಟದ ಆಡಳಿತಗಳನ್ನು ಒಳಗೊಂಡ ಸೂತ್ರದ ಮೇಲೆ ಕ್ಷೇತ್ರ ಮರುವಿಂಗಡಣೆಯಾಗಬೇಕೇ ಹೊರತು, ಕೇವಲ ಜನಸಂಖ್ಯೆ ಆಧಾರದ ಮೇಲೆ ಅಲ್ಲ. 

ದ್ವಿಸದಸ್ಯ ಸಮತೋಲನ

ರಾಜ್ಯಸಭೆಯನ್ನು ಬಲವರ್ದಿಸಿ, ಲೋಕಸಭೆಗೆ ಸಮತೋಲನವಾಗುವಂತೆ ಮಾಡಬೇಕು. ರಾಜ್ಯಸಭೆಗೂ ಹೆಚ್ಚಿನ ಶಾಸನದ ಅಧಿಕಾರ ನೀಡಿ ಆರ್ಥಿಕ ನಿರ್ಧಾರ ಕೈಗೊಳ್ಳುವಾಗ ಇವರ ಪಾತ್ರವೂ ಇರುವಂತೆ ಮಾಡಬೇಕು. ಆಮೂಲಕ ಪ್ರಗತಿಯ ರಾಜ್ಯಗಳನ್ನು ಮೂಲೆಗುಂಪು ಮಾಡುವುದನ್ನು ತಪ್ಪಿಸಬೇಕು.

ವಿತ್ತೀಯ ನೀತಿ

ನ್ಯಾಯಯುತ ತೆರಿಗೆ ಪಾಲು ಹಂಚಿಕೆ, ಸಂಪನ್ಮೂಲ ಹಂಚಿಕೆಗೆ ನೂತನ ಆರ್ಥಿಕ ಒಕ್ಕೂಟ ಒಪ್ಪಂದ ಅಗತ್ಯವಿದೆ. 16ನೇ ಹಣಕಾಸು ಆಯೋಗವು ಸಮಾನತೆ, ದಕ್ಷತೆ ಹಾಗೂ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಪನ್ಮೂಲ ಹಂಚಿಕೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಸೂಚ್ಯಂಕಗಳನ್ನು ಪರಿಚಯಿಸಬೇಕು. ಕೇಂದ್ರದ ಅನುದಾನ ಹಂಚಿಕೆಯು ಆರ್ಥಿಕ ಪ್ರಗತಿಯ ಮೇಲೆ, ವಿತ್ತೀಯ ಶಿಸ್ತಿ ಹಾಗೂ ಗುಣಮಟ್ಟದ ಆಡಳಿತದ ಮೇಲೆ ಪರಿಣಾಮಕಾರಿಯಾಗಿರಬೇಕು.

ಸಾಂಸ್ಕೃತಿಕ ಸಾರ್ವಭೌಮತ್ವ

ರಾಷ್ಟ್ರೀಯ ಭಾಷಾ ಹಕ್ಕು ಆಯೋಗವನ್ನು ಸ್ಥಾಪಿಸಿ, ಎಲ್ಲಾ ಶೆಡ್ಯುಲ್ ಭಾಷೆಗಳಿಗೂ ಸಮಾನ ಅವಕಾಶ ನೀಡಬೇಕು. ಬ್ಯಾಂಕ್, ರೈಲ್ವೇ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಕೇಂದ್ರೀಯ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸುವ ನಿರ್ಣಯ ಜಾರಿಗೊಳಿಸಬೇಕು.

ಸಹಯೋಗದ ಮೂಲಕ ಏಕತೆ:

ಜೆಎಸಿ (Joint Action Committee) ಬಲವರ್ಧಿಸಿ, ಕಾನೂನು, ಶಾಸನಗಳ ಮಧ್ಯೆ ಸಹಯೋಗ ರೂಪಿಸಬೇಕು.

ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸೋಣ

“ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಎಲ್ಲಾ ಪ್ರಗತಿಯ ರಾಜ್ಯಗಳು ಮೌನವಾಗಿರುವುದಿಲ್ಲ. ಈ ವಿಚಾರವಾಗಿ ಸದನದಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಜನರ ಮಧ್ಯೆ ರಸ್ತೆಗಳಲ್ಲಿ ಹೋರಾಟ ನಡೆಸುತ್ತೇವೆ. ಆಮೂಲಕ ನಮ್ಮ ಹಕ್ಕು, ನಮ್ಮ ಸಂಪನ್ಮೂಲ ಹಾಗೂ ನಮ್ಮ ಗುರುತನ್ನು ಉಳಿಸಿಕೊಳ್ಳುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸಬೇಕಿದೆ.

ಪೆರಿಯಾರ್ ಅವರ ಹೋರಾಟ, ಅಣ್ಣಾದುರೈ ಅವರ ನಾಯಕತ್ವ, ಬಸವಣ್ಣನವರ ಕಿಚ್ಚನ್ನು ನಾವು ರೂಢಿಸಿಕೊಳ್ಳಬೇಕು. ನೆನಪಿರಲಿ, ಕರ್ನಾಟಕ ಹಾಗೂ ತಮಿಳುನಾಡು ಒಟ್ಟಾಗಿ ನಿಂತರೆ ಯಾವುದೇ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಕೇರಳ ಹಾಗೂ ಪಂಜಾಬ್ ತಮ್ಮ ಧ್ವನಿ ಎತ್ತಿದರೆ ಹಿಮಾಲಯವೇ ನಡುಗುತ್ತದೆ.

ನಮ್ಮ ಧ್ವನಿ ದುರ್ಬಲಗೊಳಿಸಲು, ನಮ್ಮ ಸಂಪನ್ಮೂಲ ಲೂಟಿಗೊಳಿಸಲು, ನಮ್ಮ ಸಂಸ್ಕೃತಿ ನಾಸಪಡಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ಈ ಜೆಎಸಿ ಸಭೆ ಮೂಲಕ ದೇಶಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ.  ನಾವೆಲ್ಲರೂ ಒಟ್ಟಾಗಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪುನರ್ ಸ್ಥಾಪಿಸೋಣ. ಈ ದೇಶದಲ್ಲಿ ವೈವಿದ್ಯತೆಯನ್ನು ಸಂಭ್ರಮಿಸಬೇಕು, ಸಮಾನತೆಯನ್ನು ಎತ್ತಿಹಿಡಿಯಬೇಕು.

ತನ್ನ ಬಾಳಿಗೆ ತಾನೇ ದೀಪ, ತನ್ನ ಬಾಳಿಗೆ ತಾನೆ ಕಾವಲು ಎಂಬ ಕುವೆಂಪು ಅವರ ಸಾಲಿನಂತೆ ನಮ್ಮ ಹಕ್ಕು, ಭವಿಷ್ಯವನ್ನು ನಾವೇ ಕಾಪಾಡಿಕೊಳ್ಳೋಣ” ಎಂದು ತಿಳಿಸಿದರು.

Related Articles

Back to top button