
ಪ್ರಗತಿವಾಹಿನಿ ಸುದ್ದಿ, ಉಳ್ಳಾಲ: ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರ ಕಡಲ ಕೊರೆತ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ದೀರ್ಘಕಾಲದ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಉಳ್ಳಾಲದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ನಿರಂತರವಾಗಿ ಕಡಲ ಕೊರೆತ ಆಗುತ್ತಿದೆ. ಉಳ್ಳಾಲದಲ್ಲಿ ಕಳೆದ ಬಾರಿ ಸುಮಾರು 800 ಮೀ ಕಡಲ ಕೊರೆತ ಆಗಿತ್ತು. ಈ ಬಾರಿ 600 ಮೀ ಆಗಿದೆ. ಹೀಗಾಗಿ ಕಡಲ ಕೊರೆತ ಸಮಸ್ಯೆ ಶಾಶ್ವತ ಪರಿಹಾರ ನೀಡುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ಸಮುದ್ರದ ಅಲೆಗಳನ್ನು ತೆಡೆಯುವ ನಿಟ್ಟಿನಲ್ಲಿ ಸೀ ವೇವ್ ಬ್ರೇಕರ್ ಟೆಕ್ನಾಲಜಿಯನ್ನು ಇಲ್ಲಿ ಬಳಕೆ ಮಾಡಲು ತೀರ್ಮಾನ ಮಾಡಲಾಗಿದೆ. ಜನರಿಗೆ ಓಡಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸರಿಯಾದ ಕೆಲಸ ಮಾಡುವ ಮೂಲಕ ಕಡಲ ಕೊರೆತ ಸಮಸ್ಯೆ ಶಾಶ್ವತ ಪರಿಹಾರಕ್ಕೆ ನಮ್ಮ
ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದರು..
*ರಕ್ಷಣಾ ಕಾರ್ಯ ಮತ್ತು ಪರಿಹಾರಕ್ಕೆ ಹಣದ ಕೊರತೆ ಇಲ್ಲ
ಉಳ್ಳಾಲ, : ಭಾರಿ ಮಳೆಯಿಂದ ಸಂಕಷ್ಟಕ್ಕೆ ಈಡಾಗಿರುವವರ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಈಗಾಗಲೇ ನಮ್ಮ ಬಳಿ ರಾಷ್ಟ್ರೀಯ ವಿಪತ್ತು ನಿರ್ವಹಣೆಗಾಗಿ 750 ಕೋಟಿ ರೂಪಾಯಿ ಹಣ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ಉಳ್ಳಾದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅತಿವೃಷ್ಠಿಯಿಂದ ಹಾನಿಗೊಳಗಾಗಿರುವವರ ರಕ್ಷಣಾ ಕಾರ್ಯಕ್ಕೆ ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಯಾವುದೇ ಕೊರತೆ ಆಗದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದರು.
ಕೊಡುಗು ಮತ್ತು ದಕ್ಷಿಣ ಕನ್ನಡದಲ್ಲಿ ಸಿಎಂ ಪ್ರವಾಸ
ಮುಖ್ಯಾಂಶಗಳು ಇಂತಿವೆ –
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾದ ಹಾನಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು.
ಕೊಡುಗು ಜಿಲ್ಲೆಯಲ್ಲಿ ಕೆಲವು ಭಾಗದಲ್ಲಿ ಭೂ ಕುಸಿತ ಆಗಿದೆ. ಕಾವೇರಿ ಮತ್ತು ಹಾರಂಗಿ ನದಿ ಪಾತ್ರದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.
ದಕ್ಷಿಣ ಕನ್ನಡದ ಸುಳ್ಯದಲ್ಲಿ ಭೂ ಕುಸಿತ ಮತ್ತು ಭೂ ಕಂಪನ ಆಗಿರುವ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ನೇತ್ರಾವತಿ ಮತ್ತು ಉಪ್ಪಿನಂಗಡಿಯ ಕುಮಾರದೊರೆ ಸಂಗಮದಲ್ಲಿ ತೋಟಗಳ ಹಾನಿಯಾಗಿದೆ.
ಬಂಟ್ವಾಳದಲ್ಲಿ ರಸ್ತೆಗಳು ಹಾನಿಯಾಗಿದ್ದು ಭೂ ಕುಸಿತವೂ ಉಂಟಾಗಿದೆ . ಅದನ್ನೆಲ್ಲವನ್ನು ವೀಕ್ಷಿಸಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ ಮಾಡಿಕೊಂಡು ಬಂದಿದ್ದೇನೆ.
ಉಳ್ಳಾದಲ್ಲಿ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಕಡಲ ಕೊರೆತ ಆಗಿದ್ದು, ಇದರ ವೀಕ್ಷಣೆಗಾಗಿ ಎಂದು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.