
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಹುಚ್ಚುನಾಯಿಯ ದಾಳಿಗೆ ಬಲಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಗ್ರಾಮದ ಆರಾಧ್ಯ ಕಾಳೆ ಎಂಬ ೧೦ ವರ್ಷ ವಯಸ್ಸಿನ ಬಾಲಕಿಯ ಮೇಲೆ ಮೊದಲು ದಾಳಿ ನಡೆಸಿದ ನಾಯಿ ಬಾಲಕಿಯನ್ನು ಕೆಡವಿ ಕಿವಿಯನ್ನು ಕಚ್ಚಿದೆ. ಮತ್ತೋರ್ವ ಬಾಲಕಿ ನಿದಾ ಶಮಶೇರ್ (೧೦) ಮೇಲೂ ದಾಳಿ ನಡೆಸಿ ಗಾಯಗೊಳಿಸಿ ಪರಾರಿಯಾಗಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳದಲ್ಲಿ ಸೇರಿದ ಗ್ರಾಮಸ್ಥರು ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ನಾಯಿಯನ್ನು ಹುಡುಕಿ ಕೊಂದು ಹಾಕಿದ್ದಾರೆ.
ಗಾಯಗೊಂಡ ಬಾಲಕಿಯರು ಪ್ರಾಣಾಪಾಯದಿಂದ ಪಾರಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.