Karnataka News

ಮಹದಾಯಿ: ಚುನಾವಣೆ ಹೊಸ್ತಿಲಲ್ಲಿ ಮತ್ತೆ ರೈತರ ಮೂಗಿಗೆ ತುಪ್ಪ ಸವರಿದ ಸಿಎಂ ಬೊಮ್ಮಾಯಿ

*ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೇ ಮಹದಾಯಿ ಯೋಜನೆ ಆರಂಭ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌*

ಪ್ರಗತಿವಾಹಿನಿ ಸುದ್ದಿ, ಗದಗ(ನರಗುಂದ) : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ಮಹದಾಯಿ ಯೋಜನೆಗೆ ಅನುಮತಿ ನೀಡಿದ್ದು, ಡಿಪಿಆರ್ ಕೂಡ ಸಿದ್ದ ಆಗಿದೆ. ಚುನಾವಣೆಯ ನೀತಿ ಸಂಹಿತೆ ಮುಗಿದ ಕೂಡಲೇ ಯೋಜನೆ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ನರಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ ಪರ ಪ್ರಚಾರ ನಡೆಸಿದ ಬಳಿಕ ಅವರು ಮಾತನಾಡಿದರು.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇದೇ ರಸ್ತೆಯಲ್ಲಿ ನಿಂತು ಹೋರಾಟ ಮಾಡಿದ್ದೆವು. ಇದೇ ಸ್ಥಳದಿಂದ 2004ರ ಚುನಾವಣೆ ಭಾಷಣ ಮಾಡಿ, ನರಗುಂದದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಇಲ್ಲಿ ಸಿಸಿ ಪಾಟೀಲ್ ಶಾಸಕರಾಗುವುದು ನಿಶ್ಚಿತ ಅಂತ ಹೇಳಿದ್ದೇವು. ಸಿ.ಸಿ ಪಾಟೀಲರು ಶಾಸಕರಾದರು. ಆವಾಗಿನಿಂದ ನರಗುಂದ ಅಭಿವೃದ್ಧಿ ಆರಂಭವಾಗಿದ್ದು ಈಗಲೂ ಮುಂದುವರೆದಿದೆ. 

ಆಗ ಧಾರವಾಡದಿಂದ ಪಾದಯಾತ್ರೆ ಆರಂಭ ಮಾಡಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಬರಬೇಕು. ಮಲಪ್ರಭಾ ಕಾಮಗಾರಿ ಆಧುನೀಕರಣ ಆಗಬೇಕು ಅಂತ ಹೋರಾಟ ಮಾಡಿದೆವು. ನರಗುಂದದಲ್ಲಿ ಸುಮಾರು ಒಂದು ಲಕ್ಷ ಜನರು ಸೇರಿದ್ದರು. ಆಗ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಈಶ್ವರಪ್ಪ ಅವರು ನೀರಾವರಿ ಸಚಿವರಿದ್ದರು. ಆದರೆ ಸೋನಿಯಾ ಗಾಂಧಿ ಮಹಾದಾಯಿಯ ಒಂದು ಹನಿ ನೀರೂ ಕೊಡುವುದಿಲ್ಲ ಅಂತ ಹೇಳಿದರು ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ನಾನು ನೀರಾವರಿ ಸಚಿವನಾಗಿದ್ದಾಗ ಕೆನಾಲ್ ಸಿದ್ದಮಾಡಿದ್ದೇನೆ. ಆದರೆ, ಗೋವಾ ಕಾಂಗ್ರೆಸ್  ಸರ್ಕಾರ ಅದಕ್ಕೆ ಅಡ್ಡಗೋಡೆ ಕಟ್ಟಿತು. ಕಾಂಗ್ರೆಸ್ ನವರು ಯಾವ ಮುಖ ಇಟ್ಟುಕೊಂಡು ಬರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಯೋಜನೆಗೆ ಅನುಮತಿ ನೀಡಿದ್ದಾರೆ. ನಾವು ಡಿಪಿಆರ್ ಅಪ್ ಲೋಡ್ ಮಾಡಿದ್ದೇವೆ. ಚುನಾವಣೆ ನೀತಿ ಸಂಹಿತೆ ಮುಗಿದ‌ ಕೂಡಲೇ  ಮಹಾದಾಯಿ ಯೋಜನೆ ಆರಂಭಿಸುತ್ತೇವೆ ಎಂದರು.

ರೇಣುಕಾ ಸಾಗರ ಯಲ್ಲಮ್ಮನ ಕೊಳ್ಳದಿಂದ ಬಾದಾಮಿಯ ಬನಶಂಕರಿ ಕೊಳ್ಳದವರೆಗೂ ನೀರು ಹರಿಸುವ ಕಾಲ ಹತ್ತಿರ ಬಂದಿದೆ. ಮಹದಾಯಿಯ ಬಗ್ಗೆ ಈಗ ಮಾತನಾಡುವ ಸಿದ್ದರಾಮಯ್ಯ ಅವರು ಮನಮೋಹನ್ ಸಿಂಗ್‌ಸರ್ಕಾರ ಟ್ರಿಬ್ಯುನಲ್ ಮಾಡೋಣ ಅಂತ ಹೇಳಿದಾಗ ಎಲ್ಲಿ ಹೋಗಿದ್ದಿರಿ. ನಮ್ಮ ಧಮ್ ಬಗ್ಗೆ ಕೇಳುತ್ತೀರಿ. ಮಲಪ್ರಭೆಗೆ ಮಹದಾಯಿ ನೀರು ಹರಿದು ಬಂದರೆ ಬಂಡಾಯದ ನಾಡಿನ ಭೂತಾಯಿ ಹಸಿರಾಗುತ್ತಾಳೆ ಎಂದರು.

ಡಬಲ್ ಎಂಜಿನ್ ಸರ್ಕಾರ ಏಕೆ ಬೇಕು ಎಂದು ಕಾಂಗ್ರೆಸ್ ನವರು ಕೇಳುತ್ತಾರೆ. ಅದಕ್ಕೆ ಒಂದು ಉದಾಹರಣೆ. ಕಳೆದ 72 ವರ್ಷಗಳಲ್ಲಿ 25 ಲಕ್ಷ ಮನೆಗಳಿಗೆ ನೀರು ಒದಗಿಸುವ ಕೆಲಸ ಮಾಡಲಾಗಿತ್ತು. ಕಳೆದ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನಲ್ಲಿ ನೀರು ಒದಗಿಸುವ ಕೆಲಸ ಮಾಡಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ 54 ಲಕ್ಷ ರೈತರಿಗೆ ನೇರವಾಗಿ 16,000 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ಇದು ಡಬಲ್ ಇಂಜಿನ್  ಸರ್ಕಾರದ ಕೆಲಸ ಎಂದರು.

ನಾನು ಸಿಎಂ ಆಗಿ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದೆ.‌ ಇದರಿಂದ‌ ರೈತರ ಮಕ್ಕಳು ಹೆಚ್ಚಿನ ಶಿಕ್ಷಣ ಕಲಿಯುವಂತಾಗಿದೆ.

ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ ದಲಿತರನ್ನು ಅಲ್ಲಿಯೇ ಬಿಟ್ಟು ತಾವು ಮಾತ್ರ ಅಭಿವೃದ್ಧಿ ಆದರು. ನಾನು ಮೀಸಲಾತಿ ಹೆಚ್ಚಳ ಮಾಡಿದೆ. ಜೇನುಗೂಡಿಗೆ ಕೈ ಹಾಕಿ ಅವರಿಹೆ ಜೇನು ತಿನ್ನಿಸಿದ್ದೇನೆ ಎಂದರು.

ನಾನು ರಾಜ್ಯದ ಎಲ್ಲ ಕಡೆ ಪ್ರಯಾಣ ಮಾಡಿದ್ದೇನೆ. ಸಿಸಿ ಪಾಟೀಲರು ನರಗುಂದದ ಚಿತ್ರಣವನ್ನು ಬದಲಾಯಿಸಿದ್ದಾರೆ.‌ಎಲ್ಲ ಸಮುದಾಯಗಳ ಬೇಡಿಕೆ ಈಡೇರಿಸಿದ್ದಾರೆ.‌

ಸಿ.ಸಿ ಪಾಟೀಲರು ಐದು ವರ್ಷದಲ್ಲಿ ಮಾಡಿದ ಕೆಲಸ ಹಿಂದಿನ ಶಾಸಕರು ಇಪ್ಪತೈದು ವರ್ಷ ಮಾಡಿದ ಕೆಲಸವನ್ನು ಹೋಲಿಕೆ ಮಾಡಿ. ಇವರು ಐದು ವರ್ಷ ಮಾಡಿದ ಸಾಧನೆಯೇ ದೊಡ್ಡದಾಗುತ್ತದೆ ಎಂದರು.

https://pragati.taskdun.com/chief-ministers-reply-to-congress-partys-randeep-surjewalas-statement-on-reservation/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button