Latest

ರಾಜ್ಯದ ಕಾರ್ಮಿಕರ ನೆರವಿಗೆ ಹಲವು ಬೇಡಿಕೆ ಸಲ್ಲಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಕೇಂದ್ರ ಕಾರ್ಮಿಕ, ಉದ್ಯೋಗ, ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರೊಡನೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರು ಭಾಗವಹಿಸಿದ್ದರು.

ರಾಜ್ಯದಲ್ಲಿ ಪ್ರಸ್ತುತ ಪ್ರಗತಿಯಲ್ಲಿರುವ ಕಾರ್ಮಿಕ ವಿಮಾ ಆಸ್ಪತ್ರೆ ಕಟ್ಟಡಗಳ ಕಾಮಗಾರಿ ಪರಿಶೀಲನೆಗಾಗಿ  ಭೂಪೇಂದ್ರ ಯಾದವ್ ಅವರು ಇಂದು ರಾಜ್ಯ ಪ್ರವಾಸ ಕೈಗೊಂಡಿದ್ದರು.

ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಕನಿಷ್ಠ 30 ಹಾಸಿಗೆಗಳ ಇಎಸ್ ಐ ಆಸ್ಪತ್ರೆಗಳನ್ನು ಆರಂಭಿಸಬೇಕು ಹಾಗೂ ಅವುಗಳಲ್ಲಿ ಆಯುಷ್ ವಿಭಾಗ ಇರಬೇಕು ಎಂದು ಮಾನ್ಯ ಕೇಂದ್ರ ಸಚಿವರಲ್ಲಿ ಹೆಬ್ಬಾರ್‌ ಅವರು ಮನವಿ ಮಾಡಿದರು.

ಅಲ್ಲದೇ, ಸದ್ಯ ರಾಜ್ಯದಲ್ಲಿರುವ 7 ಇಎಸ್ಐ ಆಸ್ಪತ್ರೆಗಳಲ್ಲಿ ಎಂಐಸಿಯು ಘಟಕಗಳ ಸ್ಥಾಪನೆ, ರಾಜ್ಯದೆಲ್ಲೆಡೆ ಇಎಸ್ಐ ಔಷಧಾಲಯಗಳ ಸ್ಥಾಪನೆ ಹಾಗೂ ರಾಜ್ಯದ ಕೆಲವು ಕಡೆ ಮಾತ್ರ ಇರುವ ಔದ್ಯೋಗಿಕ ರೋಗ ಕೇಂದ್ರಗಳನ್ನು ಎಲ್ಲ ಕಡೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.

ಇನ್ನು ಯೋಜನೆಗಳ ಅನುಷ್ಠಾನ ಹಾಗೂ ಜಾರಿಗೆ 200 ಕೋಟಿ ರೂಗಳ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಯಿತು. ಹಾಗೆಯೇ ಇಎಸ್ಐ ಸೇವೆಗಳ ಅತ್ಯುತ್ತಮ ಕಾರ್ಯನಿರ್ವಹಣೆಗೆ ಇಎಸ್ಐಸಿಗಳಲ್ಲಿ ರಾಜ್ಯದ ಪ್ರತಿನಿಧಿಗಳಿಗೂ ಸ್ಥಾನ ನೀಡುವಂತೆ ವಿನಂತಿಸಿದರು.

ಶಿವರಾಮ ಹೆಬ್ಬಾರ್‌ ಅವರು ಸಲ್ಲಿಸಿದ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಕೇಂದ್ರ ಸಚಿವರು, ಆದಷ್ಟು ಬೇಗ ರಾಜ್ಯದ ಬೇಡಿಕೆಗಳ ಬಗ್ಗೆ ಪರಾಮರ್ಶಿಸುವುದಾಗಿ ಹೇಳಿದರು.

ತುಮಕೂರಿನಲ್ಲಿ ಇಎಸ್ಐ ಆಸ್ಪತ್ರೆ:
ತುಮಕೂರಿನಲ್ಲಿ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಗುರುತಿಸುವಂತೆ ಕೇಂದ್ರ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇದರಿಂದ ರಾಜ್ಯದ ಸಾಕಷ್ಟು ಕಾರ್ಮಿಕರಿಗೆ ಅನುಕೂಲವಾಗಲಿದೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೇಂದ್ರ ಕಾರ್ಮಿಕ ಇಲಾಖೆ ಕಾರ್ಯದರ್ಶಿ  ಆರತಿ ಅಹುಜಾ, ರಾಜ್ಯ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಡಾ. ಎನ್. ವಿ. ಪ್ರಸಾದ್, ಇಲಾಖೆ ಆಯುಕ್ತ ಅಕ್ರಂ ಪಾಷ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್, ಇಎಸ್‌ಐ ಆಸ್ಪತ್ರೆ ಪ್ರಾದೇಶಿಕ ನಿರ್ದೇಶಕ ಸಾಹು, ಇಎಸ್‌ಐ ನಿರ್ದೇಶಕ ರವಿಕುಮಾರ್ ಸೇರಿದಂತೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಮೈಸೂರು ಪೋಕ್ಸೋ ಪ್ರಕರಣ : ಆರೋಪಿಗೆ 43 ವರ್ಷ ಜೈಲು ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button