*ಏರೋಡ್ರೋಮ ಸಲಹಾ ಸಮಿತಿ ಸಭೆಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ಸಂಸದ ಶೆಟ್ಟರ್ ಚರ್ಚೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್, ಅವರು ಬೆಳಗಾವಿ ಏರೋಡ್ರೋಮ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ಪ್ರಗತಿಯನ್ನು ಪರಿಶೀಲಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ಯಾರಲೆಲ್ ಟ್ಯಾಕ್ಸಿ ಮಾರ್ಗ ನಿರ್ಮಾಣಕ್ಕೆ ಅವಶ್ಯವಿರುವ ಬೆಳಗಾವಿ ವಾಯುಸೇನೆಯ ಸುಮಾರು 15 ಏಕರೆ ಜಮೀನು ಹಸ್ತಾಂತರದ ವಿಚಾರವಾಗಿ ಇಲ್ಲಿ ವಾಯುಸೇನಾ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಇದಕ್ಕೆ ಸಂಬಂಧಿಸಿದಂತೆ, ವಿಮಾಣ ನಿಲ್ದಾಣದ ಅಭಿವೃದ್ಧಿ ಕುರಿತು ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಇಂಡಿಗೋ ಹಾಗೂ ಸ್ಟಾರ್ ಏರಲೈನ್ಸ್ ಸಂಸ್ಥೆಯ ಅಧಿಕರಿಗಳಿಗೆ ಪ್ರಮುಖ ನಗರಗಳಾದ ಪುಣೆ, ಚೆನ್ನೈ, ಅಹಮದಾಬಾದ, ಜೋದಪೂರ ಹಾಗೂ ಇನ್ನಿತರೆ ನಗರಗಳಿಗೂ ಸಹ ಬೆಳಗಾವಿಯಿಂದ ವಿಮಾನ ಹಾರಾಟ ಪ್ರಾರಂಭಿಸುವಂತೆ ಸಹಕಾರ ನೀಡಲು ತಿಳಿಸಿದಾಗ ಸಂಬಂಧಿಸಿದ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.
ವಾಹನ ಸಂಚಾರದ ದಟ್ಟಣೆಯನ್ನು ತಡೆಯಲು ಬೆಳಗಾವಿಯಿಂದ ಸಾಂಬ್ರಾ ವಿಮಾಣ ನಿಲ್ದಾಣದ ವರೆಗೆ ಚತುಷ್ಪಥ ಮಾರ್ಗ ರಚನೆಯ ಬಗ್ಗೆ ಸಂಸದರು ವಿಮಾನ ನಿಲ್ದಾಣ ನಿರ್ದೇಶಕರಿಂದ ಮಾಹಿತಿಯನ್ನು ಸಹ ವಿಚಾರಿಸಲಾಗಿ, ಅದರ ಶೀಘ್ರ ಪ್ರಾರಂಭಕ್ಕೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ ಅಭಿಯಂತರರೊಡನೆ ಚರ್ಚಿಸುವುದಾಗಿ ಸಭೆಯಲ್ಲಿ ತಿಳಿಸಿದರು.
ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ, ಬೆಳಗಾವಿ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸಮಯಕ್ಕನುಗುಣವಾಗಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನ ಸೇವೆಯನ್ನು ವಿಮಾನ ನಿಲ್ದಾಣದಿಂದ ಬೆಳಗಾವಿ ರೇಲ್ವೆ ನಿಲ್ದಾಣದ ವರೆಗೆ ಕೂಡಲೇ ಪ್ರಾರಂಭಿಸಲು ಹಾಜರಿದ್ದ ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು.
ಮುಂದುವರೆದು ಏರಲೈನ್ಸ ಅಧಿಕಾರಿಗಳ ಬೇಡಿಕೆಯಂತೆ ವಿಮಾನ ನಿಲ್ದಾಣ ಆವರಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಡಲು ಅನುಕೂಲವಾಗಲು ಪೋಲಿಸ ಔಟಪೋಸ್ಟ ಸ್ಥಾಪನೆಗೆ ಸಂಸದರಲ್ಲಿ ಕೋರಲಾಗಿ ಈ ಬಗ್ಗೆ ಅಗತ್ಯ ಕ್ರಮವನ್ನು ಜರುಗಿಸಲು ಸಭೆಯಲ್ಲಿ ಹಾಜರಿದ್ದ ಹಿರಿಯ ಪೋಲಿಸ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯ ಪ್ರಾರಂಭದ ಪೂರ್ವದಲ್ಲಿ ಸಂಸದರು ಸಮಿತಿಯ ಎಲ್ಲ ಸದಸ್ಯರೊಂದಿಗೆ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿತವಾಗುತ್ತಿರುವ ಟರ್ಮಿನಲ್ -2 ಕಟ್ಟಡದ ಪ್ರಗತಿಯ ಕುರಿತು ಸ್ಥಳ ವೀಕ್ಷಣೆ ನಡೆಸಿದರು, ಹಾಗೂ ಜುಲೈ-2027 ರ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿತ ಅಭಿಯಂತತರಿಗೆ ಸಂಸದರು ಸೂಚಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ರಾಹುಲ ಮುಚಂಡಿ, ಹನಮಂತ ಕಾಗಲಕರ, ವಿಜಯ ಭದ್ರಾ, ರಾಜು ದೇಸಾಯಿ, ಜಯಸಿಂಗ್ ರಜಪುತ್ ಹಾಗೂ ಸ್ನೇಹಲ್ ಕೋಳೆಕರ, ಮತ್ತು ಏರಪೋರ್ಟ ಪ್ರಾಧಿಕಾರದ ನಿರ್ದೆಶಕರಾದ ತ್ಯಾಗರಾಜನ್ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.



