Kannada NewsKarnataka NewsLatestPolitics

*ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಂಸದ ಮುದ್ದಹನುಮೇಗೌಡ*

ಈ ಅವಧಿ ಮಾತ್ರವಲ್ಲ ಮುಂದಿನ ಅವಧಿಗೂ ಕಾಂಗ್ರೆಸ್ ಸರ್ಕಾರ: ಡಿಸಿಎಂ ವಿಶ್ವಾಸ

ಪ್ರಗತಿವಾಹಿನಿ ಸುದ್ದಿ: ಮಾಜಿ ಸಂಸದ ಮುದ್ದಹನುಮೇಗೌಡ ಬಿಜೆಪಿ ತೊರೆದು ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವ ಕೆ.ಎನ್.ರಾಜಣ್ಣ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ, ಡಿ.ಕೆ.ಶಿವಕುಮಾರ್, ಮುದ್ದಹನುಮೇಗೌಡರು ಇಂದು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಸೇರಿದ್ದಾರೆ. ನಾವು ಯಾರಿಗೆ ಟಿಕೆಟ್ ನೀಡುತ್ತೇವೋ ಅವರ ಪರವಾಗಿ ಕೆಲಸ ಮಾಡಬೇಕು. ಇದು ಕಾಂಗ್ರೆಸ್ ಪಕ್ಷದ ಶಿಸ್ತು. ಮುದ್ದಹನುಮೇಗೌಡರ ಪಕ್ಷ ಸೇರ್ಪಡೆ ವಿಚಾರವಾಗಿ ರಾಜಣ್ಣ, ವಾಸು ಸೇರಿದಂತೆ ಜಿಲ್ಲೆಯ ಎಲ್ಲಾ ನಾಯಕರು ನಮ್ಮ ಜತೆ ಚರ್ಚೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ನಮಗೆ ಏನೇ ನೋವಾಗಿದ್ದರು ನಮಗೆ ವ್ಯಕ್ತಿಗಿಂತ ಪಕ್ಷ ಮುಖ್ಯ. ಮಹಾತ್ಮಾ ಗಾಂಧಿ ಅವರಿಂದ ನೆಹರೂ ಕುಟುಂಬ ಮಾಡಿರುವ ತ್ಯಾಗದ ಮುಂದೆ ನಮ್ಮ ತ್ಯಾಗ ಗೌಣ. ನೆಹರೂ ಹಾಗೂ ಅವರ ತಂದೆ ತಮ್ಮ ಆಸ್ತಿಪಾಸ್ತಿಗಳನ್ನೆಲ್ಲಾ ದೇಶಕ್ಕಾಗಿ ತ್ಯಾಗ ಮಾಡಿದರು. ಇಂದು ಸೋನಿಯಾ ಗಾಂಧಿ ಅವರಿಗೆ ಒಂದು ಮನೆ ಇಲ್ಲ. ಕಾಂಗ್ರೆಸ್ ನಾಯಕರು ದೇಶಕ್ಕಾಗಿ ಎಲ್ಲಾ ತ್ಯಾಗ ಮಾಡಿದ್ದಾರೆ. ನೀವೆಲ್ಲರೂ ಪಕ್ಷದ ಸದಸ್ಯತ್ವ ನೋಂದಣಿ ಸಮಯದಲ್ಲಿ ಕೊಟ್ಟ 10 ರೂಪಾಯಿ ಶುಲ್ಕದ ಹಣವನ್ನು ಇಂದು ಐಟಿ, ಇಡಿ ಅವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ತ್ರಿವರ್ಣ ಧ್ವಜವನ್ನು ಕಾಂಗ್ರೆಸಿಗರು ಮಾತ್ರ ಧರಿಸಲು ಸಾಧ್ಯ. ಈ ತ್ರಿವರ್ಣ ಧ್ವಜವನ್ನು ಬಿಜೆಪಿಯಲ್ಲಿ, ಜೆಡಿಎಸ್ ಪಕ್ಷದಲ್ಲಿ ಧರಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಒಂದು ಜಾತಿ, ವರ್ಗ ಅಥವಾ ಪಕ್ಷಕ್ಕೆ ಸೀಮಿತವಾಗಿದೆಯೇ? ಇದು ಕಾಂಗ್ರೆಸ್ ಪಕ್ಷದ ಬದ್ಧತೆ. ಈ ಕಾರ್ಯಕ್ರಮಗಳ ಮೂಲಕ ಚುನಾವಣೆಗೂ ಮುನ್ನ ಜನರ ಬಳಿ ಹೋಗಲು ನಾವು ನಿಮಗೆ ಶಕ್ತಿ ನೀಡಿದ್ದೇವೆ.

ಕಳೆದ 45 ವರ್ಷಗಳಿಂದ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ನಮ್ಮ ವಿರುದ್ಧ ಅಭ್ಯರ್ಥಿ ಹಾಕಿದ್ದರು. ನಮ್ಮ ಅಭ್ಯರ್ಥಿ ಒಂದೂವರೆ ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಬಿಜೆಪಿ ಹಾಗೂ ದಳದ ನಾಯಕರೇ ಈ ಚುನಾವಣೆ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಣ್ಣಿಸಿದ್ದರು. ಅವರು ಈಗಲೂ ತಮ್ಮ ಮಾತಿಗೆ ಬದ್ಧರಾಗಿದ್ದಾರೆ ಎಂದು ಭಾವಿಸುತ್ತೇನೆ.

ಈ ಅವಧಿ ಮಾತ್ರವಲ್ಲ ಮುಂದಿನ ಅವಧಿಗೂ ಕಾಂಗ್ರೆಸ್ ಸರ್ಕಾರ:

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕೇವಲ ಈ ಐದು ವರ್ಷ ಮಾತ್ರವಲ್ಲ. ಮುಂದಿನ ಐದು ವರ್ಷಕ್ಕೂ ನಿಮ್ಮದೇ ಸರ್ಕಾರ ಅಧಿಕಾರದಲ್ಲಿರಲಿದೆ. ರಾಜಕಾರಣ ಹೇಗೆ ಮಾಡಬೇಕು ಎಂದು ಗೊತ್ತಿದೆ. ನೀವು ಆತ್ಮಧೈರ್ಯವಾಗಿರಿ. ನೀವು ಲೋಕಸಭೆ ಚುನಾವಣೆ ಬಗ್ಗೆ ಗಮನಹರಿಸಿ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಪ್ರತಿ ಕುಟುಂಬ ತಿಂಗಳಿಗೆ 5 ಸಾವಿರದಷ್ಟು ಉಳಿತಾಯ ಮಾಡಲು ನೆರವಾಗುತ್ತಿದೆ. ಬಿಜೆಪಿಗೆ ಅಧಿಕಾರ ಇದ್ದಾಗ ಇಂತಹ ಒಂದು ಕಾರ್ಯಕ್ರಮ ನೀಡಲಿಲ್ಲ. ಅವರು ಭಾವನೆ ಬಗ್ಗೆ ರಾಜಕಾರಣ ಮಾಡಿದರೆ ನಾವು ಜನರ ಬದುಕಿನ ಬಗ್ಗೆ ಆಲೋಚಿಸಿ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ರಮ ನೀಡಿದ್ದೇವೆ.

ನೀವೆಲ್ಲರೂ ಪ್ರತಿ ಬೂತ್ ನಲ್ಲಿ ಜನರನ್ನು ಸಂಪಾದಿಸಬೇಕು. ದಳ ಹಾಗೂ ಬಿಜೆಪಿಯವರಿಗೆ ಮನವರಿಕೆ ಮಾಡಿಕೊಡಿ. ಮುದ್ದಹನುಮೇಗೌಡರೇ ತಮ್ಮ ಬಳಿ ಹೆಚ್ಚು ಕ್ರಿಯಾಶೀಲ ರಾಜಕಾರಣ ಉಳಿದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬೇರೆ ಪಕ್ಷದ ನಾಯಕರನ್ನು ಕಾಂಗ್ರೆಸ್ ಪಕ್ಷದತ್ತ ಕರೆಯಿರಿ.

ಮುಖ್ಯಮಂತ್ರಿಗಳು ಜನಪರ ಬಜೆಟ್ ಮಂಡಿಸಿದ್ದಾರೆ. ಬಿಜೆಪಿಯವರು ಅಕ ರೀತಿಯ ಟೀಕೆ ಮಾಡುತ್ತಿದ್ದರು. ಗ್ಯಾರಂಟಿ ಯೋಜನೆಗಳಿಂದ ಗಂಡ ಹೆಂಡತಿ, ಅತ್ತೆ ಸೊಸೆ ಮಧ್ಯೆ ತಂದಿಟ್ಟಿದ್ದಾರೆ, ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಟೀಕೆ ಮಾಡಿದರು. ಅದೆಲ್ಲವೂ ಸುಳ್ಳಾಗಿದೆ. ನೀವು ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಬೂತ್ ಗಳಲ್ಲಿ ನಮಗೆ ಮುನ್ನಡೆ ತಂದುಕೊಡುವವರೇ ನಮ್ಮ ನಾಯಕರು.

ನಮ್ಮ ಪಕ್ಷಕ್ಕೆ ಮಾಜಿ ಶಾಸಕ ಗೌರಿಶಂಕರ್ ಅವರನ್ನು ಸೇರಿಸಿಕೊಂಡಿದ್ದೇವೆ. ತುಮಕೂರು ಜಿಲ್ಲೆಯಲ್ಲಿ ಅನೇಕರು ನಮ್ಮ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ನೀವೆಲ್ಲರೂ ಸೇರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು.

ಕಾಂಗ್ರೆಸಿಗನಾಗಿ ಸಾಯಬೇಕು ಎಂದಿದ್ದರು ಬಾಬು ಜಗಜೀವನ್ ರಾಮ್:

ನಾನು ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನಾವು ರಾಷ್ಟ್ರ ಮಟ್ಟದ ಸಮಾವೇಶಕ್ಕೆ ದೆಹಲಿಗೆ ಹೊಗಿದ್ದೆವು. ಕಾರ್ಯಕ್ರಮದ ಮರುದಿನ ಪ್ರಧಾನಮಂತ್ರಿಗಳ ಜತೆ ಫೋಟೋ ತೆಗೆಸಿಕೊಳ್ಳಲು ಸಮಯ ನಿಗದಿ ಮಾಡಲಾಗಿತ್ತು. ಮರುದಿನ ನಾವು ಪ್ರಧಾನಿ ಅವರ ನಿವಾಸಕ್ಕೆ ಹೋಗಿದ್ದು, ನಾವು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೆವು. ಒಂದೊಂದೆ ರಾಜ್ಯದ ತಂಡಗಳ ಫೋಟೋ ನಡೆಯುತ್ತಿತ್ತು. ಇನ್ನೇನು ನಮ್ಮ ಸರದಿ ಬರುವ ವೇಳೆಗೆ ಕಾರ್ಯಕ್ರಮ ಏಕಾಏಕಿ ನಿಂತುಹೋಯಿತು. ಕಾರಣ, ಆಗ ಹಿರಿಯ ಮುತ್ಸದಿಯೊಬ್ಬರು ಪ್ರಧಾನಿ ಅವರ ಮನೆ ಬಾಗಿಲ ಮುಂದೆ ಕಾರಿನಿಂದ ಇಳಿದರು. ಆಗ ಭದ್ರತಾ ಸಿಬ್ಬಂದಿ ಓಡಿ ಹೋದರು. ಅವರು ಬಂದಿದ್ದಾರೆ ಎಂದು ತಿಳಿದ ರಾಜೀವ್ ಗಾಂಧಿ ತಕ್ಷಣವೇ ಓಡಿ ಬಂದು ಅವರನ್ನು ಮನೆಯೊಳಗೆ ಕರೆದುಕೊಂಡು ಹೋದರು.

ರಾಜೀವ್ ಗಾಂಧಿ ಅವರು ವಾಪಸ್ ಬಂದ ನಂತರ ಆ ಹಿರಿಯ ವ್ಯಕ್ತಿ ಯಾರು ಎಂದು ಕೇಳಿದೆವು. ಆಗ ರಾಜೀವ್ ಗಾಂಧಿ ಅವರು ಈಗ ಬಂದವರು ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್. ಅವರು ನಮ್ಮ ತಾತ ಹಾಗೂ ತಾಯಿಯ ಜೊತೆ ಕೆಲಸ ಮಾಡಿದ್ದವರು. ಕೆಲವು ಭಿನ್ನಾಭಿಪ್ರಾಯದಿಂದ ಅವರು ಪಕ್ಷ ತ್ಯಜಿಸಿದ್ದರು. ಕಾರಣಾಂತರಗಳಿಂದ ಇಂದಿರಾ ಗಾಂಧಿ ಅವರ ಜತೆ ಮನಸ್ಥಾಪವಾಗಿ ಪಕ್ಷ ಬಿಟ್ಟಿದ್ದೆ. ನಾನು ಸಾಯುವ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾಂಗ್ರೆಸಿಗನಾಗಿ ಸಾಯಬೇಕು ಎಂಬ ಕಾರಣದಿಂದ ಮತ್ತೆ ಪಕ್ಷ ಸೇರಲು ಬಯಸಿರುವುದಾಗಿ ತಿಳಿಸಿದರು ಎಂದು ಅವರು ರಾಜೀವ್ ಗಾಂಧಿ ಹೇಳಿದರು ಎಂದರು.

Related Articles

Back to top button