
ಮೈಸೂರು: ಮದುವೆಗೆ ಎರಡು ದಿನ ಇರುವಾಗ ಮದು ಮಗಳು ಸೇರಿ ಆಕೆಯ ತಂದೆ-ತಾಯಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ ವ್ಯಕ್ತಿಯೋರ್ವನ ಕಿರುಕುಳಕ್ಕೆ ಬೇಸತ್ತು ತಂದೆ-ತಾಯಿ ಹಾಗೂ ಮಗಳು ಮೂವರೂ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ಶಿವಣ್ಣ, ನಾಗರತ್ನ ಹಾಗೂ ಮಗಳು ರಕ್ಷಿತಾ ಮೃತರು. ಜೂನ್ 24, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.
ರಕ್ಷಿತಾಗೆ ಉಲ್ಲಾಸ್ ಗೌಡ ಎಂಬಾತ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಈತ ರಕ್ಷಿತಾ ಹಾಗೂ ಮನೆಯವರ ಪರಿಚಿತನೇ ಆಗಿದ್ದಾನೆ. ಆತ ರಕ್ಷಿತಾಳ ಕೆಲವು ಫೋಟೋಗಳನ್ನು ಇಟ್ಟುಕೊಂಡು ಕಿರುಕುಳ ನೀಡುತ್ತಿದ್ದನಂತೆ. ಸಂಬಂಧಿಕರು, ಊರವರು ಸೇರಿ ಆತನನ್ನು ಕರೆದು ಬೈದು ಬುದ್ಧಿ ಹೇಳಿದ್ದರು. ಮದುವೆ ನಿಶ್ಚಿಯವಾಗಿರುವ ಹುಡುಗಿಗೆ ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದರು. ಇನ್ಮುಂದೆ ನಿಮ್ಮ ತಂಟೆಗೆ ಬರಲ್ಲ ಎಂದಿದ್ದ ಉಲ್ಲಾಸ್, ನಿನ್ನೆ ರಕ್ಷಿತಾ ಮದುವೆಯಾಗುವ ಹುಡುಗನಿಗೆ ಆಕೆಯ ಫೋಟೋಗಳನ್ನು ಕಳುಹಿಸಿದ್ದಲ್ಲದೇ ಕರೆ ಮಾಡಿ ಇಲ್ಲಸಲ್ಲದ ಕಥೆ ಕಟ್ಟಿದ್ದಾನೆ. ಅವಾಚ್ಯವಾಗಿ ಆಕೆ ಬಗ್ಗೆ ಮಾತನಾಡಿದ್ದಾನೆ. ಇದರಿಂದ ತೀವ್ರವಾಗಿ ನೊಂದಿದ್ದ ರಕ್ಷಿತಾ ಹಾಗೂ ಆಕೆ ತಂದೆ-ತಾಯಿ ಇಂವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಮೂವರ ಸಾವಿಗೂ ಉಲ್ಲಾಸ್ ಗೌಡನೇ ಕಾರಣನೆಂದು ರಕ್ಷಿತಾ ಡೆತ್ನೋಟ್ ಬರೆದಿರೋದು ಕೂಡ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವರುಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




