Kannada NewsLatest

ಗ್ರಂಥಾಲಯಗಳಲ್ಲಿ ಅನ್ವೇಷಣೆ 2ನೇ ರಾಷ್ಟ್ರೀಯ ಸಮ್ಮೇಳನ ಆರಂಭ

ತಂತ್ರಜ್ಞಾನಕ್ಕೆ ತಕ್ಕ ಸಂಶೋಧನೆಗೆ ರಾಜ್ಯಪಾಲರ ಕರೆ

ಪ್ರಗತಿವಾಹಿನಿ, ಬೆಳಗಾವಿ:

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಮಾಹಿತಿಯು ಬೆರಳತುದಿಯಲ್ಲಿ ಲಭ್ಯವಿದೆ. ಧಾರ್ಮಿಕ ಗ್ರಂಥಗಳೂ ಡಿಜಿಟಲೀಕರಣಗೊಳ್ಳುತ್ತಿವೆ. ಎಲ್ಲ ಮಾಹಿತಿಯೂ ಬೆರಳತುದಿಯಲ್ಲಿದೆ. ತಂತ್ರಜ್ಞಾನದ ಬೆಳವಣಿಗೆ ತಡೆಯುವುದು ಸಾಧ್ಯವಿಲ್ಲ. ಆದ್ದರಿಂದ ತಂತ್ರಜ್ಞಾನಕ್ಕೆ ತಕ್ಕಂತೆ ಗ್ರಂಥಾಲಯ ಕ್ಷೇತ್ರದಲ್ಲಿ ಸಂಶೋಧನೆಗಳಾಗಬೇಕು ಎಂದು  ರಾಜ್ಯಪಾಲ ವಜುಭಾಯಿ ವಾಲಾ ಅವರು ಕರೆ ನೀಡಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರಿನ ಎಲ್‌ಐಎಸ್ ಅಕಾಡೆಮಿ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಶ್ರಯದಲ್ಲಿ ವಿಟಿಯು ಸಭಾಂಗಣದಲ್ಲಿ ಗುರುವಾರ (ಜೂ.೬)ದಿಂದ ಮೂರು ದಿನಗಳ ಕಾಲ ಗ್ರಂಥಾಲಯಗಳಲ್ಲಿ ಅನ್ವೇಷಣೆ ಕುರಿತ ೨ನೇ ರಾಷ್ಟ್ರಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿ ಜ್ಞಾನ ಹಾಗೂ ಅಗಾಧ ಬೌದ್ಧಿಕ ಶಕ್ತಿಯಿದೆ. ಸೂಕ್ತ ಅವಕಾಶ ಸಿಕ್ಕರೆ ಇಡೀ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಜ್ಞಾನದ ಹರವು ಹೆಚ್ಚಾಗುತ್ತಿದ್ದು, ಜ್ಞಾನಕ್ಕೆ ಸೂಕ್ತ ಅವಕಾಶ ಕಲ್ಪಿಸುವ ಸಾಧನ ಇನ್ನೂ ನಮ್ಮ ಬಳಿಯಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.


ಐದು ವರ್ಷದ ಮಕ್ಕಳಿಗೂ ಮೊಬೈಲ್ ಬಳಕೆ ಕರಗತವಾಗಿದೆ. ವಿದೇಶದ ಅಭಿವೃದ್ಧಿಗೆ ಕೆಲಸ ಮಾಡುವ ನಮ್ಮ ದೇಶದ ಯುವಜನರ ಬುದ್ಧಿಶಕ್ತಿಯನ್ನು ನಮ್ಮ ದೇಶದ ಪ್ರಗತಿಗೆ ಬಳಸಿಕೊಳ್ಳುವ ಅಗತ್ಯವಿದೆ.
ಗ್ರಂಥಾಲಯಗಳನ್ನು ಸಶಕ್ತೀಕರಣಗೊಳಿಸುವುದು, ನೂತನ ಅನ್ವೇಷಣೆ ಮಾಡುವುದು ಸಮ್ಮೇಳನದ ಆಶಯವಾಗಿದೆ.
ಗ್ರಂಥಾಲಯ ಕ್ಷೇತ್ರದಲ್ಲಿ ಅತ್ಯುತ್ತಮ ಸಂಶೋಧನೆ ಕೈಗೊಳ್ಳುವ ಮೂಲಕ ದೇಶದ ಕೀರ್ತಿ ಹೆಚ್ಚಿಸಬೇಕು ಎಂದು ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಎಲ್.ಐ.ಎಸ್. ಅಕಾಡೆಮಿಯ ಅಧ್ಯಕ್ಷರಾದ ಡಾ.ಪಿ.ವಿ.ಕೊಣ್ಣೂರ, ಗ್ರಂಥಾಲಯಗಳಲ್ಲಿ ಅನ್ವೇಷಣೆ ಕುರಿತ ಈ ಸಮ್ಮೇಳನವು ಗ್ರಂಥಾಲಯ ಕ್ಷೇತ್ರದ ಕಾರ್ಯಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದರು.
ಆಶಯ ಭಾಷಣ ಮಾಡಿದ ಧಾರವಾಡ ಐಐಟಿ ನಿರ್ದೇಶಕ ಕವಿ ಮಹೇಶ್, ತಂತ್ರಜ್ಞಾನದ ಬೆಳವಣಿಗೆ ದೈನಂದಿನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತರುತ್ತಿದೆ. ಇಂತಹ ಸನ್ನಿವೇಶದಲ್ಲಿ ಗ್ರಂಥಾಲಯ ಯಾವ ರೀತಿಯ ಸವಾಲು ಎದುರಿಸಬೇಕಿದೆ ಎಂಬುದನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಘನತೆವೆತ್ತ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಎಂ-ಲೈಬ್ರರಿ ಮೊಬೈಲ್ ಆಪ್ ಹಾಗೂ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಜೀವನಸಾಧನೆಯನ್ನು ಗುರುತಿಸಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ, ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಎಸ್.ಎಸ್. ಹೊಸಮನಿ ಮತ್ತಿತರ ಸಾಧಕರನ್ನು ರಾಜ್ಯಪಾಲರು ಸನ್ಮಾನಿಸಿದರು.
ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವರಾದ ಡಾ.ಸತೀಶ್ ಅಣ್ಣಿಗೇರಿ ವಂದಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಎಸ್.ಎಸ್.ಹೊಸಮನಿ, ಎಲ್ ಐಎಸ್ ಅಕಾಡೆಮಿಯ ಅಧ್ಯಕ್ಷರಾದ ಡಾ.ಪಿ.ವಿ.ಕೊಣ್ಣೂರ, ವಿಟಿಯು ಕುಲಸಚಿವ(ಮೌಲ್ಯಮಾಪನ) ಡಾ.ಸತೀಶ್ ಅಣ್ಣಿಗೇರಿ, ಹಣಕಾಸು ಅಧಿಕಾರಿ ಸ್ವಪ್ನಾ, ವಿಟಿಯು ಗ್ರಂಥಪಾಲಕ ಕೆ.ಆರ್.ಮುಲ್ಲಾ, ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.
ವಿವಿಧ ವಿಶ್ವವಿದ್ಯಾಲಯ, ಕಾಲೇಜುಗಳು ಮತ್ತು ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕರು ಹಾಗೂ ಗ್ರಂಥಾಲಯ ವಿಜ್ಞಾನದ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button