Belagavi NewsBelgaum NewsKannada NewsKarnataka NewsTravel

*ಪ್ರಯಾಣಿಕರಿಗೆ ಗುಡ್ ನ್ಯೂಸ್: ದಾಂಡೇಲಿ–ಆಳ್ನಾವರ ನಡುವೆ ಹೊಸ ರೈಲು ಆರಂಭ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಇಂದು ದಾಂಡೇಲಿಯಲ್ಲಿ ದಾಂಡೇಲಿ – ಆಳ್ನಾವರ ನಡುವಿನ ಹೊಸ ಪ್ರಯಾಣಿಕ ರೈಲು ಸೇವೆಯನ್ನು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಈ ಮೂಲಕ ಈ ಭಾಗದ ಪ್ರಯಾಣಿಕರ ರೈಲು ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ. ಕೊವಿಡ್-19  ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಈ ರೈಲು ಸೇವೆಯನ್ನು ಮರುಪ್ರಾರಂಭಿಸುವ ಮೂಲಕ ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳ ಜನರ ದೀರ್ಘಕಾಲದ ಬೇಡಿಕೆ ಈಡೇರಿದೆ.

ಈ ವೇಳೆ ಮಾತನಾಡಿದ ವಿ. ಸೋಮಣ್ಣ ಅವರು 2026–27ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ₹7,748 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ರೈಲು ಸಂಪರ್ಕ ಬಲಪಡಿಸುವುದು, ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವುದು ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ವೇಗ ನೀಡುವಲ್ಲಿ ಕೇಂದ್ರ ಸರ್ಕಾರದ ಬದ್ಧತೆಯನ್ನು ಈ ಅನುದಾನ ಸ್ಪಷ್ಟಪಡಿಸುತ್ತದೆ ಎಂದು ಅವರು ಹೇಳಿದರು.

ದಾಂಡೇಲಿ–ಆಳ್ನಾವರ ವಿಭಾಗದಲ್ಲಿ ಡೆಮು ಸೇವೆ ಮರುಪ್ರಾರಂಭವಾದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ದೊರೆಯಲಿದೆ. ದಾಂಡೇಲಿ ಸೇರಿದಂತೆ ಇತರ ಪರಿಸರ ಪ್ರವಾಸಿ ತಾಣಗಳಿಗೆ ಸುಲಭ ಸಂಪರ್ಕ ಸಿಗುವುದರಿಂದ ಸ್ಥಳೀಯರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಚಿವರು ಹೇಳಿದರು. ಉತ್ತಮ ರೈಲು ಸಂಪರ್ಕವು ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಒತ್ತಿಹೇಳಿದರು.

Home add -Advt

ಶಾಸಕ ಆರ್. ವಿ. ದೇಶಪಾಂಡೆ ಅವರು ರೈಲು ಸೇವೆಯನ್ನು ಹುಬ್ಬಳ್ಳಿವರೆಗೆ ವಿಸ್ತರಿಸುವಂತೆ ಹಾಗೂ ಪಂಡರಪುರಕ್ಕೆ ಸಂಪರ್ಕ ಒದಗಿಸುವಂತೆ ಮಾನ್ಯ ರೈಲ್ವೆ ರಾಜ್ಯ ಸಚಿವರನ್ನು ವಿನಂತಿಸಿದರು. ಸಾಮಾನ್ಯ ಜನರಿಗೆ ರೈಲು ಸಂಚಾರವೇ ಅತಿ ಅಗ್ಗದ ಮತ್ತು ಸುಲಭವಾದ ಸಾರಿಗೆ ವ್ಯವಸ್ಥೆಯಾಗಿದ್ದು, ಇದರಿಂದ ಹೆಚ್ಚಿನ ಜನರಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಪ್ರದೇಶದ ದೀರ್ಘಕಾಲದ ಬೇಡಿಕೆ ಈಡೇರಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ, ಸಾರ್ವಜನಿಕರು ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು. ನದಿ ರಾಫ್ಟಿಂಗ್, ಟ್ರೆಕ್ಕಿಂಗ್, ಸೈಕ್ಲಿಂಗ್, ಮೌಂಟನ್ ಬೈಕಿಂಗ್ ಸೇರಿದಂತೆ ವಿವಿಧ ಪ್ರಕೃತಿ ಆಕರ್ಷಣಗಳಿಂದ ಈ ಪ್ರದೇಶ ಪ್ರಸಿದ್ಧವಾಗಿರುವುದನ್ನು ಅವರು ಉಲ್ಲೇಖಿಸಿದರು.

ಈ ಕಾರ್ಯಕ್ರಮದಲ್ಲಿ ನೈಋತ್ಯ  ರೈಲ್ವೆಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾದ ಎಸ್. ಪಿ. ಶಾಸ್ತ್ರಿ, ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲು ವ್ಯವಸ್ಥಾಪಕಿ ಬೆಲಾ ಮೀನಾ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಜೈನ್, ಕೊಂಕಣ ಪ್ರಾದೇಶಿಕ ರೈಲು ವ್ಯವಸ್ಥಾಪಕಿ ಆಶಾ ಶೆಟ್ಟಿ ಸೇರಿದಂತೆ ಗಣ್ಯರು, ಸಾರ್ವಜನಿಕ ಪ್ರತಿನಿಧಿಗಳು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

ಡೆಮು ರೈಲಿನ ವಿಶೇಷತೆ ಏನು ?

ನಿಯಮಿತ ಡೆಮು ಪ್ರಯಾಣಿಕ ರೈಲು ಸೇವೆಗಳು 09.02.2026ರಿಂದ ಪ್ರಾರಂಭವಾಗಲಿದ್ದು, ಭಾನುವಾರವನ್ನು ಹೊರತುಪಡಿಸಿ ವಾರದಲ್ಲಿ ಆರು ದಿನಗಳು ಸಂಚರಿಸಲಿವೆ.

ಈ ರೈಲು 04 ಬೋಗಿಗಳ ಡೆಮು ರೇಕ್‌ನೊಂದಿಗೆ ಸಂಚರಿಸಲಿದೆ. ಇದರಲ್ಲಿ 02 ಡ್ರೈವಿಂಗ್ ಪವರ್ ಕಾರುಗಳು ಹಾಗೂ 02 ಟ್ರೈಲರ್ ಕಾರುಗಳು ಒಳಗೊಂಡಿರುತ್ತವೆ.

Related Articles

Back to top button