
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎನ್ನುವುದಾದರೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬೇರೆಯವರ ಮಾತು ಕೇಳುವುದನ್ನು ನಿಲ್ಲಿಸಲಿ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಮುಖಂಡರು ಜಯಮೃತ್ಯುಂಜಯ ಸ್ವಾಮಿಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ಮುಂದುವರೆಸಿರುವ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಸಿ.ಪಾಟೀಲ್ ಹಾಗೂ ಮುರುಗೇಶ್ ನಿರಾಣಿ, ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ವಾಮೀಜಿ ಯತ್ನಾಳ್ ಹಾಗೂ ವಿಜಯಾನಂದ ಕಾಶಪ್ಪನವರ್ ಕಪಿಮುಷ್ಠಿಯಲ್ಲಿದ್ದಾರೆ. ಪಂಚಮಸಾಲಿಗೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಆಗ್ರಹ ಕೂಡ. ಆದರೆ ಕೆಲವರು ಸ್ವಾರ್ಥಕ್ಕಾಗಿ ಪಂಚಮಸಾಲಿ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಸಿ.ಸಿ.ಪಾಟೀಲ್ ಆರೋಪಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ನಿರಾಣಿ, ಯತ್ನಾಳ್ ಕಾಂಗ್ರೆಸ್ ನ ಬಿ-ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಪದೇ ಪದೇ ಹೇಳುವ ಯತ್ನಾಳ್ ಮೊದಲು ತಾನು ರಾಜೀನಾಮೆ ನೀಡಿ, ಸ್ವತಂತ್ರವಾಗಿ ಗೆದ್ದುಬರಲಿ ಎಂದು ಸವಾಲು ಹಾಕಿದರು.
ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿ ಸಿಗಬೇಕು. ಈ ಸಮುದಾಯದಲ್ಲಿ ಬಹಷ್ಟು ಜನ ಉದ್ಯೋಗ, ಶಿಕ್ಷಣ, ಸೌಲಭ್ಯವಂಚಿತರಿದ್ದಾರೆ. ದೇಶಕ್ಕೆ ಅನ್ನಹಾಕುವ ರೈತರಲ್ಲಿ ಹೆಚ್ಚು ಜನ ಪಂಚಮಸಾಲಿ ಸಮುದಾಯದಲ್ಲಿದ್ದಾರೆ. ಇವರಿಗೆ 2ಎ ಮೀಸಲಾತಿ ನೀಡಬೇಕು ಎಂಬುದು ನಮ್ಮ ಅಭಿಪ್ರಾಯಕೂಡ ಇದೆ. ಆದರೆ ಸ್ವಾಮೀಜಿಗಳು ಯತ್ನಾಳ್, ಕಾಶಪ್ಪನವರ್ ಅವರ ಮಾತು ಕೆಳುವುದನ್ನು ಬಿಡಬೇಕು. ಮೀಸಲಾತಿ ಸಿಗಲೇಬೇಕು ಎನ್ನುವುದಾದರೆ ಬೇರೆಯವರ ಮಾತು ಕೇವುದನ್ನು ನಿಲ್ಲಿಸಿ. ನಿನ್ನೆ ನಡೆದ ಪಂಚಮಸಾಲಿ ಸಮಾವೇಶ ರಾಜಕೀಯ ಸಮಾವೇಶ, ಯತ್ನಾಳ್ ಕುಟುಂಬದ ಸಮಾವೇಶದಂತಿದೆ ಎಂದರು.
ಸಿಎಂ ನಮ್ಮ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ ಸರ್ಕಾರಕ್ಕೆ ಕೆಲ ಸಮಯಾವಕಾಶ ಬೇಕು. ಪಂಚಮಸಾಲಿಗಳು ಮೀಸಲಾತಿಗಾಗಿ 70 ವರ್ಷಗಳ ಕಾಲ ಕಾದಿದ್ದೇವಂತೆ ಹೀಗಿರುವಾಗ ಇನ್ನು ಎರಡು-ಮೂರು ತಿಂಗಳು ಕಾಯುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.