ದೂರಾಗದ ಮಕ್ಕಳ ಕಳ್ಳರ ಭಯ ! ಮತ್ತಿಬ್ಬರು ಶಂಕಿತರ ವಿಚಾರಣೆ

ಪ್ರಗತಿ ವಾಹಿನಿ, ಬೆಳಗಾವಿ:
ಮಕ್ಕಳನ್ನು ಕದ್ದೊಯ್ಯುವವರು ಬಂದಿದ್ದಾರೆಂಬ ವದಂತಿ ಜಿಲ್ಲೆಯಾದ್ಯಂತ ಹರಡಿದ್ದು ಸಾರ್ವಜನಿಕರು ಆತಂಕದಲ್ಲಿದ್ದಾರೆ. ಮಕ್ಕಳ ಕಳ್ಳರೆಂಬ ಶಂಕೆಯಲ್ಲಿ ಊರಿಗೆ ಬರುವ ಅಪರಿಚಿತರ ಜತೆ ಜನ ವ್ಯವಹರಿಸುತ್ತಿದ್ದಾರೆ.
ಆದರೆ ಜಿಲ್ಲೆಯಲ್ಲಿ ಯಾವುದೇ ಮಕ್ಕಳ ಕಳ್ಳತನದ ಪ್ರಕರಣ ಘಟಿಸಿಲ್ಲ ಎಂದು ಎಸ್ ಪಿ ಡಾ. ಸಂಜೀವ ಪಾಟೀಲ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಕಿತ್ತೂರಿನಲ್ಲಿ ಮಕ್ಕಳ ಕಳ್ಳ ಎಂದು ಶಂಕಿಸಿದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನೇ ವಿನಃ ಮಕ್ಕಳ ಕಳ್ಳನಲ್ಲ ಎಂದು ಪತ್ತೆಯಾಗಿದೆ. ಇನ್ನು ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದ ನಾಗಾ ಸಾಧುಗಳನ್ನು ಸಹ ವಿಚಾರಿಸಿ ಖಚಿತಪಡಿಸಿಕೊಳ್ಳಲಾಗಿದೆ.
ಮಂಗಳವಾರ ಶಿರಸಂಗಿ ಗ್ರಾಮಕ್ಕೆ ಬಂದಿದ್ದ ಇಬ್ಬರು ಅಪರಿಚಿತರನ್ನು ಜನ ಮಕ್ಕಳ ಕಳ್ಳರೆಂದು ಭಾವಿಸಿ ಆತಂಕಗೊಂಡ ಪ್ರಕರಣ ನಡೆದಿದೆ. ಗ್ರಾಮಸ್ಥರು 112 ಗೆ ಕರೆ ಮಾಡಿ ದೂರಿದ ಹಿನ್ನೆಲೆಯಲ್ಲಿ ಪೊಲೀಸರು ಈ ಇಬ್ಬರು ಆಗಂತುಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಇಬ್ಬರ ಜತೆ ಬಂದಿರುವ ಮತ್ತಿಬ್ಬರು ಲಾಡ್ಜಿನಲ್ಲಿ ತಂಗಿದ್ದು ಇವರೆಲ್ಲ ನಾಗಪುರದ ಆಶ್ರಮವೊಂದರಿಂದ ಚಂದಾ ಸಂಗ್ರಹಿಸಲು ಬಂದವರು ಎಂಬುದು ಪತ್ತೆಯಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಗೆ ಮಕ್ಕಳ ಕಳ್ಳರು ಬಂದಿದ್ದಾರಾ? ವದಂತಿಗಳಿಗೆ ಎಸ್ ಪಿ ಸ್ಪಷ್ಟನೆ




