*ಸಂಪುಟ ಉಪಸಮಿತಿ ಶಿಫಾರಸಿನಂತೆ 52 ಪ್ರಕರಣಗಳನ್ನು ವಾಪಸ್ ಪಡೆಯಲು ನಿರ್ಧಾರ: ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ಶಿಫಾರಸು ಮಾಡಿದ ಪ್ರಕರಣಗಳನ್ನು ಕೈಬಿಡಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹಸಚಿವ ಪರಮೇಶ್ವರ್, 52 ಪ್ರಕರಣಗಳನ್ನು ವಾಪಸ್ ಪಡೆದ ವಿಚಾರವಾಗಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳ ಮೇಲೆ ಇದ್ದ ಕೇಸ್ಗಳ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿಗೆ ಸರ್ಕಾರ ಶಿಫಾರಸು ಮಾಡಿತ್ತು. ಸಬ್ ಕಮಿಟಿಯು ಪ್ರತಿಯೊಂದು ಕೇಸ್ ಬಗ್ಗೆಯೂ ಚರ್ಚೆ ಮಾಡಿ, ಕಾನೂನಾತ್ಮಕವಾಗಿ ವಾಪಸ್ ತೆಗೆದುಕೊಳ್ಳಲು ಅವಕಾಶವಿದೆ ಎಂದು ತೀರ್ಮಾನ ಮಾಡಿತ್ತು. ಅದರಂತೆ ರಾಜ್ಯದಲ್ಲಿ 52 ಕೇಸ್ ವಾಪಸ್ ತೆಗೆದುಕೊಳ್ಳಬಹುದು ಎಂದು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.
ಆಳಂದ ದರ್ಗಾ ಪ್ರಕರಣ ವಾಪಸ್ ಪಡೆದ ವಿಚಾರವಾಗಿ, ಅದರ ಬಗ್ಗೆ ವಿವರ ಹೇಳಲು ಹೋಗಲ್ಲ. ಯಾಕೆ ಕ್ಯಾಬಿನೆಟ್ ನಿರ್ಧಾರ ಆಗಿದೆ? ಎಲ್ಲವೂ ಪರಿಗಣಿಸಿಯೇ, ಚರ್ಚೆ ಮಾಡಿಯೇ ತೀರ್ಮಾನ ಮಾಡಲಾಗಿದೆ. ಏಕಾಏಕಿ ತೀರ್ಮಾನ ಮಾಡಿಲ್ಲ. ಚರ್ಚೆ ಮಾಡಿಯೇ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಬಗ್ಗೆ ನಮ್ಮ ಶಾಸಕರ ಕ್ಷೇತ್ರಗಳಲ್ಲಿ ಮಾನಿಟರ್ ಮಾಡಬೇಕು. ಸರಿಯಾದ ರೀತಿಯಲ್ಲಿ SIR ಮಾಡುವುದರಲ್ಲಿ ನೀವು ಭಾಗಿಯಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಬೇಕು ಎಂದು ಹೇಳಿದ್ದಾರೆ ಎಂದರು.



