Belagavi NewsBelgaum NewsKannada NewsKarnataka NewsNationalPolitics

*ಅಂಬೇಡ್ಕರ್‌ ನಿಪ್ಪಾಣಿ ಭೇಟಿ ಶಾಶ್ವತವಾಗಿ ನೆನಪಿಡಲು ಯೋಜನೆ: ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಚಳಿಗಾಳದ ಅಧೀವೇಶನದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನಿಪ್ಪಾಣಿ ನಗರಕ್ಕೆ ಭೇಟಿ ನೀಡಿ 100 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸರ್ಕಾರದ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಸರ್ಕಾರದ ಗಮನ ಸೆಳೆದಿದ್ದ ಮಾಜಿ ಸಚಿವರು ಹಾಗೂ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ ಅವರು, ನಿಪ್ಪಾಣಿ ನಗರಕ್ಕೆ ಸಂವಿಧಾನ ಶಿಲ್ಪಿಯ ಭೇಟಿಯನ್ನು ಅಜರಾಮರವಾಗಿ ನೆನಪಿಡುವಂತಹ ಸ್ಮಾರಕಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. 

ಇಂದು ನಿಪ್ಪಾಣಿ ನಗರದ ಮುನ್ಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿರುವ ಕರುನಾಡಿನಲ್ಲಿ ಭೀಮ ಹೆಜ್ಜೆ @100 ಶತಮಾನದ ಸಂಭ್ರಮ ಸಮಾರೋಪ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿ ಈ ವಿಷಯ ತಿಳಿಸಿದರು. 

ಸಂವಿಧಾನ ಶಿಲ್ಪಿಗಳಾದ ಡಾ ಬಿ ಆರ್‌ ಅಂಬೇಡ್ಕರ್‌ ಅವರು 1925 ರಲ್ಲಿ ನಿಪ್ಪಾಣಿಗೆ ಭೇಟಿ ನೀಡಿದ್ದರು. ಅದು ಅಂತಿಂಥ ಭೇಟಿಯಲ್ಲ, ಬದಲಿಗೆ ಅಂದಿನ ಮುಂಬೈ-ಕರ್ನಾಟಕ ಭಾಗದಲ್ಲಿ ದಲಿತರ ಸಬಲೀಕರಣಕ್ಕೆ ನಾಂದಿ ಹಾಡಿ, ಅದನ್ನು ಗಮನಾರ್ಹವಾಗಿ ಸಾಧಿಸಲು ನಾಂದಿ ಹಾಡಿದಂತಹ ಭೇಟಿ. ಈ ವೇಳೆ ಬಾಬಾಸಾಹೇಬರು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದ ‘ಬಹಿಷ್ಕೃತ ಹಿತಕಾರಣಿ ಸಭಾ’ದ ಸಮಾವೇಶವನ್ನು ಏರ್ಪಡಿಸಿದರು.

ದಲಿತರ ಸಬಲೀಕರಣಕ್ಕಾಗಿ ಸಾಮಾಜಿಕ ಸುಧಾರಣಾ ಆಂದೋಲನಗಳಿಗೆ ಉತ್ತೇಜನ ನೀಡುವುದು ಇದರ ಹಿಂದಿದ್ದ ಉದ್ದೇಶವಾಗಿತ್ತು. ಇದರ ಭಾಗವಾಗಿ ದಲಿತರಿಗೆ ಸಿಗಬೇಕಾದ ಗುಣಮಟ್ಟದ ಶಿಕ್ಷಣ, ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯ ಅಗತ್ಯ, ದಮನಿತ ವರ್ಗಗಳ ಪ್ರಯೋಜನಕ್ಕೆ ವಿಶೇಷ ಗ್ರಂಥಾಲಯ, ಸಮುದಾಯ ಕೇಂದ್ರ, ಅಧ್ಯಯನ ಕೇಂದ್ರ, ಕೃಷಿ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಆರಂಭಿಸಬೇಕಾದ ಜರೂರು, ದಲಿತರಿಗೆ ಸಂಬಂಧಿಸಿದ ವಿಚಾರ ಮತ್ತು ಸಮಸ್ಯೆಗಳ ನಿವಾರಣೆಗೆ ತ್ವರಿತ ಸ್ಪಂದನೆ ವಿಚಾರಗಳನ್ನು ಇಲ್ಲಿ ಚರ್ಚಿಸಲಾಯಿತು. ಸ್ವತಃ ಬಾಬಾಸಾಹೇಬರೇ ಈ ಸಮಾವೇಶದ ಅಧ್ಯಕ್ಷತೆಯನ್ನೂ ವಹಿಸಿದ್ದರು. 

Home add -Advt

ಈ ಸಮಾವೇಶದ ಸಮಯದಲ್ಲೇ ನಿಪ್ಪಾಣಿಯಲ್ಲಿ ದಲಿತರಿಗೆಂದೇ ಹುಟ್ಟಿಕೊಂಡ ಗ್ರಂಥಾಲಯವನ್ನು ಉದ್ಘಾಟಿಸಿದ ಅವರು, ಅಸ್ಪೃಶ್ಯರ ಮಕ್ಕಳಿಗೆ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳನ್ನೂ ವಿತರಿಸಿದರು. ಅಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಸುಶಿಕ್ಷಿತರಾಗಿ, ಆಂದೋಲನ ಮಾಡಿ, ಸಂಘಟಿಸಿ ಎನ್ನುವಂತಹ ಘೋಷಣೆಯನ್ನು ಮಾಡಿದ್ದರು. ಈ ಭೇಟಿಯ ನೂರು ವರ್ಷಗಳ ನೆನಪನ್ನು ಅಜರಾಮರವನ್ನಾಗಿಸುವ ನಿಟ್ಟಿನಲ್ಲಿ 3.30 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಂಬೇಡ್ಕರ್‌ ಜೀವಿಸಿದ ಪ್ರವಾಸಿ ತಾಣಗಳಲ್ಲಿ ಒಂದಾಗಿ ಅಭಿವೃದ್ದಿಪಡಿಸುವುದಾಗಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಘೋಷಿಸಿದರು. 

ದೇಶದ ಗಮನ ಸೆಳೆಯುವಂತಹ ಅಂಬೇಡ್ಕರ್‌ ಮ್ಯೂಸಿಯಂ, ಕ್ರಾಂತಿ ಸ್ತಂಭ, ಬೌದ್ದ ಸ್ತೂಪ, ಅಂಬೇಡ್ಕರ್‌ ಭವನ, ಬಡ ದಲಿತ ಮಕ್ಕಳಿಗೆ ಹಾಸ್ಟೆಲ್‌, ಅತಿಥಿಗಳಿಗೆ ಉಳಿದುಕೊಳ್ಳಲು ವಸತಿ ಸೌಲಭ್ಯ ವನ್ನು ಇಲ್ಲಿ ಅಭಿವೃದ್ದಿಪಡಿಸಲಾಗುವುದು. ಇದಕ್ಕಾಗಿ ರಾಜ್ಯ ಸರಕಾರದಿಂದ ಒಂದು ಕೋಟಿ, ಶಾಸಕರ ನಿಧಿಯಿಂದ ಒಂದು ಕೋಟಿ ಹಾಗೂ ಜೊಲ್ಲೆ ಗ್ರೂಪ್‌ ನಿಂದ ಒಂದು ಕೋಟಿ ಹಣವನ್ನು ನಿಗದಿಪಡಿಸಲಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ನಿಪ್ಪಾಣಿ ನಗರಕ್ಕೆ ಆಗಮಿಸಿದ್ದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಅದನ್ನು ಯಾವತ್ತು ಶಾಶ್ವತವಾಗಿ ನೆನಪಿಡುವ ಕಾರ್ಯಕ್ರಮವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ ಎಂದು ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು.

Related Articles

Back to top button