ಪ್ರಗತಿವಾಹಿನಿ ಸುದ್ದಿ: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಿಂದ ದೇಶದ ಮಾನ ಹರಾಜಾಗಿದೆ. ಈ ಕುರಿತು ಬಿಜೆಪಿ ನಾಯಕರು, ಜೆಡಿಎಸ್ ನಾಯಕರನ್ನು ಪ್ರಶ್ನಿಸಿ ಎಂದು ಡಿಸಿಎಂ ಡಿಕೆ ಶಿವಕುಮಾರ ಅವರು ಕಿಡಿಕಾರಿದ್ದಾರೆ.
ರವಿವಾರ ಮಧ್ಯಾಹ್ನ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಂಸದನಾಗಿ ಪ್ರಜ್ವಲ್ ರೇವಣ್ಣ ಅವರು ದೇಶದ ಮಾನ ಹರಾಜು ಹಾಕಿದ್ದಾರೆ. ಈ ವಿಚಾರದ ಕುರಿತು ಬಿಜೆಪಿ ಹಾಗೂ ಜೆಡಿಎಸ್ನವರು ಮಾತನಾಡಬೇಕು. ಈಗ ಯಾಕೆ ಶೋಭಕ್ಕ, ಅಶೋಕಣ್ಣ ಮಾತನಾಡುತ್ತಿಲ್ಲ. ದಿನ ಬೆಳಗಾದ್ರೆ ಎಷ್ಟು ಮಾತನಾಡುತ್ತಿದ್ದರು, ಈಗ ಯಾಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ ವಿರುದ್ಧ ಆಕ್ರೋಶ ಹೊರ ಹಾಕಿದರು.
ದೆಹಲಿಯಿಂದ ನನಗೆ ಸಾಕಷ್ಟು ಫೋನ್ಗಳು ಬರುತ್ತಿದೆ. ಈ ಪ್ರಕರಣದಿಂದ ರಾಜ್ಯ ತಲೆತಗ್ಗಿಸುವಂತಾಗಿದೆ. ಈ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಉತ್ತರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ ಆಗ್ರಹಿಸಿದ್ದಾರೆ.