Kannada NewsLatest

ಪ್ರಿಯಾಂಕಾ ಜಾರಕಿಹೊಳಿ ನೇತೃತ್ವದಲ್ಲಿ ನಿರುದ್ಯೋಗ ದಿನ ಆಚರಣೆ; ರಸ್ತೆಯಲ್ಲೇ ಪಕೋಡಾ ತಯಾರಿಸಿ ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಗೋಕಾಕ: ನಗರದಲ್ಲಿ ಇಂದು ಗೋಕಾಕ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿಯವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಬದಲು ‘ರಾಷ್ಟ್ರೀಯ ನಿರುದ್ಯೋಗ ದಿನ’ ಆಚರಿಸಿ, ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಬಸವೇಶ್ವರ ಸರ್ಕಲ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯದಲ್ಲಿಯೇ ಪಕೋಡಾ (ಮಿರ್ಚಿ ಬಜಿ) ತಯಾರಿಸಿ, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Home add -Advt

ನಂತರ ಮಾತನಾಡಿದ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಸುಳ್ಳು ಭರವಸೆ ನೀಡಿ ಯುವಕರಿಗೆ ಮೋಸ ಮಾಡಿದ್ದಾರೆ. ಉದ್ಯೋಗ ನೀಡುವುದು ಒಂದು ಕಡೆ ಇರಲಿ, ಇವರ ಆಡಳಿತ ಅವಧಿಯಲ್ಲಿ ದೇಶಾದ್ಯಂತ ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಆಡಳಿತದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ದೇಶಕ್ಕೆ ಉಪಯೋಗವಾಗುವ ಯಾವ ಯೋಜನೆಯೂ ಜಾರಿಯಾಗಿಲ್ಲ. ಪ್ರಧಾನಿ ಮೋದಿ ತಮ್ಮ ಏಳೂವರೆ ವರ್ಷದ ಆಡಳಿತದಲ್ಲಿ ಯುವಕರಿಗೆ ನೆರವಾಗುವ ಯಾವುದೇ ಕ್ರಮಕೈಗೊಂಡಿಲ್ಲ. ಖಾಲಿ ಇರುವ ಉದ್ಯೋಗ ಭರ್ತಿಗೂ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಕೂಡಲೇ ಯುವಕರಿಗೆ ಉದ್ಯೋಗಗಳನ್ನು ನೀಡಬೇಕು. ಬೇರೆ ಬೇರೆ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೇ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಿವೇಕ ಜತ್ತಿ, ಬಸವರಾಜ ಸಾಯನ್ನವರ್, ಭಗವಂತ ಹುಳ್ಳಿ, ರೆಹಮಾನ್ ಮೊಕಾಶಿ, ಪ್ರವೀಣ್ ಗುಡ್ಡಕಾಯು, ರಾಹುಲ್ ಬಡೇಸಗೋಳ, ಸುನೀಲ್ ಗುಡ್ಡಾಕಾಯು, ಮುಸ್ತಫಾ ಪುಲ್ತಾಂಬೆ, ಕಂಟಿಕಾರ ವಕೀಲರು, ಪುಟ್ಟು ಖಾನಾಪುರೆ, ಮುನ್ನಾ ಖತೀಬ್, ಪರಶುರಾಮ ರಾಮಘಾನಟ್ಟಿ, ರಾಮ ಗುಡ್ಡಾಕಾಯು, ಇಮಾಮ ಅಂಡಗಿ, ಗುರುರಾಜ ಪೂಜೇರಿ, ಶಬ್ಬೀರ ಮುಜಾವರ್, ರಪೀಕ್ ಖಾಜಿ, ಪ್ರವೀಣ್ ತುಕ್ಕಾನಟ್ಟಿ, ಮಾರುತಿ ಹತ್ತರವಾಟ, ಶಿವಾನಂದ ಹತ್ತರವಾಟ, ಶ್ರೀಶೈಲ ಮೆಳವಂಕಿ, ಇಮ್ರಾನ ತಪಕೀರ್, ಮುನ್ನಾ ಕತ್ತಿ, ಜಾಕೀರ ನದಾಪ್ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Back to top button