*ಇ-ಖಾತಾ, ಕಾವೇರಿ-2 ತಾಂತ್ರಿಕ ಸಮಸ್ಯೆಗಳಿಂದ ಬೆಳಗಾವಿಯಲ್ಲಿ ಆಸ್ತಿ ನೊಂದಣಿ ಕಗ್ಗಂಟು*: *ಮುಖ್ಯಮಂತ್ರಿ ಮಧ್ಯಪ್ರವೇಶಕ್ಕೆ ಕ್ರೆಡೈ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇ-ಖಾತಾ (E-Khata) ಮತ್ತು ಕಾವೇರಿ-2 (Kaveri 2) ತಂತ್ರಾಂಶದಲ್ಲಿ ಇತ್ತೀಚೆಗೆ ಮಾಡಲಾಗಿರುವ ಬದಲಾವಣೆಗಳಿಂದ ಬೆಳಗಾವಿಯ ಕೆಲವು ಪ್ರದೇಶಗಳ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಕುರಿತು ತುರ್ತು ಮಧ್ಯಪ್ರವೇಶ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಬೆಳಗಾವಿ ಕ್ರೆಡೈ ಮನವಿ ಮಾಡಿದೆ.
ಬೆಳಗಾವಿ ಕ್ರೆಡೈ ಅಧ್ಯಕ್ಷ ಯುವರಾಜ ಹುಲಜಿ ಹಾಗೂ ಕಾರ್ಯದರ್ಶಿ ಪ್ರಶಾಂತ ವಾಂಡ್ಕರ್ ನೇತೃತ್ವದಲ್ಲಿ ಈ ಕುರಿತು ಮುಖ್ಯಮಂತ್ರಿಗಳು ಸೇರಿದಂತೆ ಸಂಬಂಧಿಸಿದ ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ, ಇ-ಖಾತಾ ಮತ್ತು ಕಾವೇರಿ-2 ವ್ಯವಸ್ಥೆಯಲ್ಲಿನ ತಾಂತ್ರಿಕ ಹಾಗೂ ಕಾರ್ಯನಿರ್ವಹಣಾ ಸಮಸ್ಯೆಗಳಿಂದ ಬೆಳಗಾವಿಯ ಟಿಳಕವಾಡಿ, ಸಂಕೇಶ್ವರ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದ್ದು, ನಾಗರಿಕರು, ಬಿಲ್ಡರ್ಗಳು, ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಿದ್ದಾರೆ.
ನಿರಂತರ ಪಟ್ಟಾ ಆಸ್ತಿಗಳ ನೋಂದಣಿಗೆ ಅಡ್ಡಿ
ಬೆಳಗಾವಿಯ ಟಿಳಕವಾಡಿ, ನೆಹರು ನಗರ, ಮುಜಾವರ್ ಗಲ್ಲಿ, ಫೋರ್ಟ್ ರಸ್ತೆ, ಸ್ಟೇಷನ್ ರಸ್ತೆ, ಪಾಟೀಲ ಗಲ್ಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿನ ನಿರಂತರ ಪಟ್ಟಾ (Perpetual Lease) ಆಸ್ತಿಗಳಿಗೆ ಸಂಬಂಧಿಸಿದ ಸಮಸ್ಯೆ ಅತ್ಯಂತ ಗಂಭೀರವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
70 ರಿಂದ 100 ವರ್ಷಗಳ ಹಿಂದೆ ನೀಡಲಾದ ಈ ಆಸ್ತಿಗಳಲ್ಲಿ ಮೂಲ ಭೂಮಾಲೀಕರ ಹೆಸರುಗಳು ಇಂದಿಗೂ ಸಿಟಿಎಸ್ ದಾಖಲೆಗಳಲ್ಲಿ ಉಳಿದಿದ್ದು, ಕಾವೇರಿ-2 ಮತ್ತು ಇ-ಆಸ್ತಿ ಸಂಯೋಜನೆಯ ನಂತರ ಮೂಲ ಭೂಮಾಲೀಕರನ್ನೇ ಮಾಲೀಕರಾಗಿ ತೋರಿಸಲಾಗುತ್ತಿದೆ. ಹಾಲಿ ಬಾಡಿಗೆ ಹಕ್ಕುದಾರರನ್ನು ಕೇವಲ ತೆರಿಗೆದಾರರಾಗಿ ನಮೂದಿಸಲಾಗುತ್ತಿದೆ.
ಇದರಿಂದ ಮೂಲ ಮಾಲೀಕರು ಅಥವಾ ಅವರ ವಾರಸುದಾರರ ಸಮ್ಮತಿ ಕಡ್ಡಾಯವಾಗಿದ್ದು, ಅನೇಕರು ನಿಧನರಾಗಿರುವುದರಿಂದ ಅಥವಾ ವಾರಸುದಾರರನ್ನು ಪತ್ತೆಹಚ್ಚುವುದು ಅಸಾಧ್ಯವಾಗಿರುವುದರಿಂದ ನೋಂದಣಿ ಪ್ರಕ್ರಿಯೆ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೆಲವು ಪ್ರಕರಣಗಳಲ್ಲಿ ವಾರಸುದಾರರೆಂದು ಹೇಳಿಕೊಳ್ಳುವವರು ಅನಗತ್ಯ ಹಣದ ಬೇಡಿಕೆ ಇಡುತ್ತಿದ್ದು, ಇದರಿಂದ ನೈಜ ವ್ಯವಹಾರಗಳು ಸ್ಥಗಿತಗೊಳ್ಳುತ್ತಿವೆ ಎಂದು ತಿಳಿಸಲಾಗಿದೆ.
ಕಂಪನಿಗಳು, ಎಲ್ಎಲ್ಪಿ ಮತ್ತು ಪಾಲುದಾರಿಕೆ ಸಂಸ್ಥೆಗಳಿಗೂ ತೊಂದರೆ
ಪಾಲುದಾರಿಕೆ ಸಂಸ್ಥೆಗಳು, ಎಲ್ಎಲ್ಪಿ ಹಾಗೂ ಖಾಸಗಿ ಕಂಪನಿಗಳ ಹೆಸರಿನಲ್ಲಿರುವ ಆಸ್ತಿಗಳ ನೋಂದಣಿಗೆ ಸಂಬಂಧಿಸಿದಂತೆ ಇ-ಆಸ್ತಿಯಲ್ಲಿ ಎಲ್ಲ ಪಾಲುದಾರರು ಹಾಗೂ ನಿರ್ದೇಶಕರ ಹೆಸರುಗಳು ಕಾಣಿಸುತ್ತಿದ್ದು, ಕಾವೇರಿ-2 ಎಲ್ಲರೂ ಖುದ್ದಾಗಿ ಹಾಜರಾಗಬೇಕೆಂಬ ನಿಯಮ ಜಾರಿಗೊಳಿಸಿದೆ.
ಆದರೆ ಪಾಲುದಾರಿಕೆ ಒಪ್ಪಂದಗಳು ಹಾಗೂ ಕಂಪನಿಗಳ ಅಧಿಕೃತ ದಾಖಲೆಗಳಲ್ಲಿ ಅಧಿಕಾರ ಪಡೆದ ಪ್ರತಿನಿಧಿಗಳಿಗೆ ವ್ಯವಹಾರ ನಡೆಸುವ ಅವಕಾಶವಿದ್ದರೂ, ಹೊಸ ನಿಯಮಗಳಿಂದ ವ್ಯವಹಾರಗಳು ವಿಳಂಬವಾಗುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಪಿಎ ವ್ಯವಹಾರಗಳಿಗೆ ಲೈಫ್ ಸರ್ಟಿಫಿಕೇಟ್ ನಿಯಮಕ್ಕೆ ವಿರೋಧ
ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ, ಸಾಮಾನ್ಯ ಅಧಿಕಾರ ಪತ್ರ (GPA) ಆಧಾರದ ಮೇಲೆ ನಡೆಯುವ ವ್ಯವಹಾರಗಳಿಗೆ ಕೇವಲ ಏಳು ದಿನಗಳ ಅವಧಿಗೆ ಮಾನ್ಯವಾಗುವ ಲೈಫ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದೆ.
ಈ ನಿಯಮದಿಂದ ವಿದೇಶದಲ್ಲಿರುವವರು, ಹಿರಿಯ ನಾಗರಿಕರು ಹಾಗೂ ಅನಾರೋಗ್ಯ ಪೀಡಿತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಜಂಟಿ ಅಭಿವೃದ್ಧಿ ಒಪ್ಪಂದ (JDA) ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿಯೂ ಪದೇ ಪದೇ ಲೈಫ್ ಸರ್ಟಿಫಿಕೇಟ್ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ.
₹5,000 ಕೋಟಿ ಆದಾಯ ನಷ್ಟದ ಆತಂಕ
ಈ ಎಲ್ಲಾ ಸಮಸ್ಯೆಗಳಿಂದಾಗಿ 2025-26ನೇ ಹಣಕಾಸು ವರ್ಷದಲ್ಲಿ, ವಿಶೇಷವಾಗಿ ಕೊನೆಯ ತ್ರೈಮಾಸಿಕದಲ್ಲಿ ಸರ್ಕಾರಕ್ಕೆ ಸುಮಾರು ₹5,000 ಕೋಟಿ ಆದಾಯ ನಷ್ಟ ಉಂಟಾಗಿರಬಹುದು ಎಂದು ಮನವಿಯಲ್ಲಿ ಅಂದಾಜಿಸಲಾಗಿದೆ.
ಆಸ್ತಿ ನೋಂದಣಿಗಳು ಕುಸಿದಿರುವುದರಿಂದ ಬಿಲ್ಡರ್ಗಳು ಹಣಕಾಸಿನ ಒತ್ತಡ ಎದುರಿಸುತ್ತಿದ್ದು, ಮನೆ ಖರೀದಿದಾರರು ಮಾಲೀಕತ್ವ ಪಡೆಯಲು ಸಾಧ್ಯವಾಗುತ್ತಿಲ್ಲ. ದಾಖಲೆಗಳಲ್ಲಿನ ವ್ಯತ್ಯಾಸದಿಂದ ಬ್ಯಾಂಕುಗಳೂ ಸಾಲ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದರ ಪರಿಣಾಮವಾಗಿ ನಿರ್ಮಾಣ ಕ್ಷೇತ್ರಕ್ಕೆ ಅವಲಂಬಿತವಾಗಿರುವ ಸಾವಿರಾರು ಕಾರ್ಮಿಕರು, ಮೇಸ್ತ್ರಿಗಳು, ಬಡಗಿಗಳು, ಎಲೆಕ್ಟ್ರಿಷಿಯನ್ಗಳು, ಪ್ಲಂಬರ್ಗಳು ಹಾಗೂ ದಿನಗೂಲಿ ಕಾರ್ಮಿಕರ ಜೀವನೋಪಾಯಕ್ಕೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಮುಖ್ಯಮಂತ್ರಿಗಳಿಗೆ ಮನವಿ
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುರ್ತಾಗಿ ಮಧ್ಯಪ್ರವೇಶಿಸಿ ಕಾವೇರಿ-2 ಹಾಗೂ ಇ-ಆಸ್ತಿ ವ್ಯವಸ್ಥೆಯಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು.
ನಿರಂತರ ಪಟ್ಟಾ ಆಸ್ತಿಗಳ ನೋಂದಣಿಗೆ ಮೂಲ ಭೂಮಾಲೀಕರ ಹಾಜರಾತಿ ಕಡ್ಡಾಯ ನಿಯಮವನ್ನು ಸಡಿಲಿಸಿ, ಗುತ್ತಿಗೆ ಹಕ್ಕುಗಳನ್ನು ಮಾನ್ಯಗೊಳಿಸಬೇಕು.
ಸಂಸ್ಥೆಗಳು, ಎಲ್ಎಲ್ಪಿ ಮತ್ತು ಕಂಪನಿಗಳ ವ್ಯವಹಾರಗಳಿಗೆ ಅಧಿಕೃತ ಸಹಿ ಮಾಡುವವರಿಗೆ ಅವಕಾಶ ಕಲ್ಪಿಸಬೇಕು.
ಜಿಪಿಎ ವ್ಯವಹಾರಗಳಿಗೆ ಲೈಫ್ ಸರ್ಟಿಫಿಕೇಟ್ ನಿಯಮವನ್ನು ಮರುಪರಿಶೀಲಿಸಬೇಕು.
ಬಾಕಿ ಉಳಿದಿರುವ ನೋಂದಣಿಗಳನ್ನು ಶೀಘ್ರ ವಿಲೇವಾರಿ ಮಾಡಿ ಆಸ್ತಿ ಮಾರುಕಟ್ಟೆಯನ್ನು ಸಹಜ ಸ್ಥಿತಿಗೆ ತರಬೇಕು.
ಸಮಯೋಚಿತ ಕ್ರಮ ಕೈಗೊಂಡಲ್ಲಿ ಸಾರ್ವಜನಿಕರ ವಿಶ್ವಾಸ ಪುನಃಸ್ಥಾಪನೆಯಾಗುವುದರ ಜೊತೆಗೆ ಸರ್ಕಾರದ ಆದಾಯ ಹೆಚ್ಚಳ ಮತ್ತು ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣವಾಗಲಿದೆ ಎಂದು ಮನವಿಯಲ್ಲಿ ಯುವರಾಜ ಹುಲಜಿ, ಪ್ರಶಾಂತ ವಾಂಡ್ಕರ್ ಮತ್ತು ಅಮರ್ ಅಕ್ನೋಜಿ ಕೋರಿದ್ದಾರೆ.



