*ನಿಮ್ಮ ರಾಜಕೀಯ ಕನಸೇನೋ ನನಸಾಗಿದೆ; ಆದರೆ ರೈತರಿಗೆ ನೆಮ್ಮದಿಯಿಲ್ಲ, ಯುವಕರಿಗೆ ವಿಶ್ವಾಸವಿಲ್ಲ; ಕನ್ನಡಿಗರಿಗೆ ತಪ್ಪಲಿಲ್ಲ ಗೋಳು: ಆರ್.ಅಶೋಕ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಡಿಕೆಶಿ ಸರ್ಕಾರಕ್ಕೆ ಒಂದು ತಿಂಗಳು… ಆದರೆ ಕನ್ನಡಿಗರಿಗೆ ಮಾತ್ರ ತಪ್ಪಲಿಲ್ಲ ನಿತ್ಯ ಗೋಳು! ಎಂದು ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
D – Disaster of
K – Karnataka’s
S – Success
ಅತ್ತು-ಸುರಿದು, ಕಾಡಿ-ಬೇಡಿ, ದೆಹಲಿಯ ಹೈಕಮಾಂಡ್ ಬಾಗಿಲು ಕಾದು ಕೊನೆಗೂ ಮುಖ್ಯಮಂತ್ರಿ ಕುರ್ಚಿಯ ಕನಸನ್ನು ನನಸಾಗಿಸಿಕೊಂಡ ಡಿ.ಕೆ. ಶಿವಕುಮಾರ್ ಅವರ ಸರ್ಕಾರಕ್ಕೆ ಇಂದಿಗೆ ಭರ್ತಿ ಒಂದು ತಿಂಗಳು.
ಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ರಾಜಕೀಯ ಕನಸೇನೋ ನನಸಾಗಿದೆ. ಆದರೆ ಕೇವಲ ಒಂದು ತಿಂಗಳಲ್ಲೇ ಕೋಟ್ಯಂತರ ಕನ್ನಡಿಗರ ಕನಸುಗಳು ಸಂಪೂರ್ಣ ಭ್ರಮನಿರಸನವಾಗಿವೆ!
ಪಗತಿಶೀಲ ರಾಜ್ಯವಾಗಿದ್ದ ನಮ್ಮ ಹೆಮ್ಮೆಯ ಕರ್ನಾಟಕದ ಯಶಸ್ಸಿಗೆ ಒಕ್ಕರಿಸಿದ ಅತಿ ದೊಡ್ಡ ‘ಡಿಸಾಸ್ಟರ್’ (Disaster) ಅಂದರೆ ಅದು ನಿಮ್ಮ ಕಾಂಗ್ರೆಸ್ ಸರ್ಕಾರ!
❌ರೈತನಿಗೆ ನೆಮ್ಮದಿ ಇಲ್ಲ: ರಸಗೊಬ್ಬರಕ್ಕಾಗಿ ಸಾಲಿನಲ್ಲಿ ಚಪ್ಪಲಿ ಇಟ್ಟು ದಿನಗಟ್ಟಲೆ ಕಾಯಬೇಕಾದ ದುಸ್ಥಿತಿ, ನೀರಿಗಾಗಿ ಹೋರಾಟ, ಬರದ ಭೀತಿ, ಭೂಸ್ವಾಧೀನದ ಆತಂಕ, ಅನ್ನದಾತ ನಿಮ್ಮ ಆಡಳಿತದಲ್ಲಿ ತನ್ನದೇ ಜಮೀನಿನಲ್ಲಿ ಭಿಕ್ಷುಕನಂತಾಗಿದ್ದಾನೆ!
❌ಯುವಕರಿಗೆ ವಿಶ್ವಾಸ ಇಲ್ಲ: ಭರವಸೆಯಾಗಿಯೇ ಉಳಿದ ನೇಮಕಾತಿಯ ಆಶ್ವಾಸನೆ, ಹೊಸ ಉದ್ಯೋಗದಲ್ಲಿ ಶೂನ್ಯ ಸಾಧನೆ.
❌ ಮಹಿಳೆಯರಿಗೆ ಭದ್ರತೆ ಇಲ್ಲ: ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಪರಿಷ್ಕರಣೆಯ ಹೆಸರಿನಲ್ಲಿ ಸ್ವಾಭಿಮಾನಿ ಗೃಹಲಕ್ಷ್ಮಿಯರ ಮೇಲೆ ಅನುಮಾನ.
❌ ಬಡವರು ಮತ್ತು ಮಧ್ಯಮ ವರ್ಗಕ್ಕೆ ನೆಮ್ಮದಿ ಇಲ್ಲ: ಬೆಲೆ ಏರಿಕೆ, ತೆರಿಗೆಗಳ ಹೊರೆ, ದೈನಂದಿನ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ. ಇದು ಗ್ಯಾರೆಂಟಿ ಸರ್ಕಾರವಲ್ಲ, ಲೂಟಿ ಸರ್ಕಾರ.
❌ ಉದ್ಯಮಿಗಳಿಗೆ ಆತ್ಮವಿಶ್ವಾಸ ಇಲ್ಲ: ಅನಿಶ್ಚಿತ ಆಡಳಿತ ಮತ್ತು ಕಮಿಷನ್ ದಂಧೆಗೆ ಹೆದರಿ ಹೂಡಿಕೆದಾರರು ನೆರೆರಾಜ್ಯಗಳಿಗೆ ಪಲಾಯನ ಮಾಡುತ್ತಿದ್ದಾರೆ.
❌ ಬೆಂಗಳೂರಿಗೆ ದಿಕ್ಕಿಲ್ಲ: ಟ್ರಾಫಿಕ್ ನರಕ, ಗುಂಡಿ ಬಿದ್ದ ರಸ್ತೆಗಳು, ಯೋಜನಾ ರಹಿತ ಅವ್ಯವಸ್ಥೆ, ಪರಿಹಾರದ ಸುಳಿವೇ ಕಾಣುತ್ತಿಲ್ಲ.
ಜನರಿಗೆ ಎಲ್ಲೂ ಆಡಳಿತ ಕಾಣುತ್ತಿಲ್ಲ… ಕಾಣುತ್ತಿರುವುದು ಒಂದೇ – ಸುಳ್ಳು ಪ್ರಚಾರ ಮತ್ತು ಭ್ರಷ್ಟಾಚಾರ!
ಕೇವಲ 30 ದಿನಗಳ ಟ್ರೈಲರ್ನಲ್ಲೇ ಇಡೀ ರಾಜ್ಯದ ಕನಸನ್ನು ನುಚ್ಚು ನೂರು ಮಾಡಿರುವ ನಿಮ್ಮ ಸರ್ಕಾರ, ಇನ್ನು ಎರಡು ವರ್ಷ ಮುಂದುವರಿದರೆ ಕರ್ನಾಟಕದ ಸ್ಥಿತಿ ಏನಾಗಬಹುದು ಎಂಬ ಆತಂಕ ಪ್ರತಿಯೊಬ್ಬ ಕನ್ನಡಿಗನಲ್ಲಿದೆ.
ಮುಖ್ಯಮಂತ್ರಿಗಳೇ, ನಿಮ್ಮ ಕುರ್ಚಿಯ ಕನಸು ನನಸುಗೊಂಡಿದೆ, ಆದರೆ ಕರ್ನಾಟಕದ ಜನತೆಯ ಕನಸುಗಳು, ಆಶೋತ್ತರಗಳು, ನಿರೀಕ್ಷೆಗಳು ಮಾತ್ರ ಸಂಪೂರ್ಣವಾಗಿ ಭ್ರಮನಿರಸನಗೊಂಡಿವೆ ಎಂದು ಆರ್.ಅಶೋಕ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.



