*ಕುಂದಾನಗರಿಗೆ ಆಗಮಿಸಿದ ರಾಹುಲ್ ಜಾರಕಿಹೊಳಿಗೆ ಅದ್ದೂರಿ ಸ್ವಾಗತ*
![](https://pragativahini.com/wp-content/uploads/2025/02/IMG-20250210-WA0041.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಇಂದು ಕುಂದಾನಗರಿಗೆ ಆಗಮಿಸಿದ ಸಂದರ್ಭದಲ್ಲಿ ಕೈ ಕಾರ್ಯಕರ್ತರಿಂದ ಹಾಗೂ ಅವರು ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಮೊದಲ ಭಾರಿಗೆ ಇಂದು ಕಾಂಗ್ರೆಸ್ ಭವನಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜಯಘೋಷಗಳನ್ನು ಕೂಗುವ ಮೂಲಕ ಸಂಭ್ರಮಿಸಿದರು. ಈ “ಕೈ” ಸಂಭ್ರಮದಲ್ಲಿ ನೂರಾರು ಕಾಂಗ್ರೆಸ್ ಮುಖಂಡರು- ಕಾರ್ಯಕರ್ತರು ಭಾಗಿಯಾದರು.
ಮುಗಿಲು ಮುಟ್ಟಿದ ಸಂಭ್ರಮ:
ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಮಾತ್ರವಲ್ಲ ಪರಸ್ಪರ ಗುಲಾಲು ಎರಚಿ ಖುಷಿಪಟ್ಟರೆ, ಇನ್ನು ಕೆಲ ಕಾರ್ಯಕರ್ತರು ಪರಸ್ಪರ ಸಿಹಿ ಹಂಚುವ ಮೂಲಕ ಕುಣಿದು ಕುಪ್ಪಳಿಸಿದರು. ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಕ್ಕೆ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
ರಾಹುಲ್ ಗೆ ಶುಭ ಕೋರಿದ ಅಭಿಮಾನಿಗಳು
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ರಾಹುಲ್ ಜಾರಕಿಹೊಳಿ ಆಯ್ಕೆಯಾದ ನಿಮಿತ್ತ ಅವರಿಗೆ ಶುಭ ಕೋರಲೆಂದೆ ನೂರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕಾಂಗ್ರೆಸ್ ಭವನಕ್ಕೆ ಆಗಮಿಸಿದ್ದರು. ವೇದಿಕೆ ಮೇಲೆ ನಿಂತ ರಾಹುಲ್ ಜಾರಕಿಹೊಳಿ ಭೇಟಿಗೆ ಸರದಿ ಸಾಲಿನಲ್ಲಿ ನಿಂತ ಅಭಿಮಾನಿಗಳು ಒಬ್ಬೊಬ್ಬರಾಗಿ ಆಗಮಿಸಿ ಹೂಗುಚ್ಚ ನೀಡುವ ಮೂಲಕ ಶುಭ ಕೋರಿದರು. ಅಲ್ಲದೇ ಅನೇಕ ಅಭಿಮಾನಿಗಳು ರಾಹುಲ್ ಅವರ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟರು.
ರಾಹುಲ್ ಗೆ ಸಾಥ್ ನೀಡಿದ ಕೈ ಮುಖಂಡರು
ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಮೊದಲ ಭಾರಿಗೆ ಬೆಳಗಾವಿಗೆ ಆಗಮಿಸಿದ ವೇಳೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ರಾಹುಲ್ ಹಣೆಗೆ ತಿಲಕ ಹಚ್ಚಿ ಆರತಿ ಬೆಳಗಿ ಶುಭ ಕೋರಿದರು . ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ .ಜೆ , ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್, ಜಿಪಂ ಸದಸ್ಯರಾದ ಮಹಾಂತೇಶ ಮಗದುಮ್ಮ, ಬೆಳಗಾವಿ ಗ್ರಾಮೀಣ ಯುವ ಘಟಕದ ಜಿಲ್ಲಾಧ್ಯಕ್ಷ ಕಾರ್ತೀಕ್ ಪಾಟೀಲ್, ಬಸವರಾಜ ಶೇಗಾವಿ, ಚಿಕ್ಕೋಡಿ ಯುವ ಘಟಕದ ಜಿಲ್ಲಾಧ್ಯಕ್ಷ ಸಿದ್ದಕಿ ಅಂಕಲಗಿ, ರಾಜಾ ಸಲೀಂ ಸೇರಿದಂತೆ ಅನೇಕ ಕೈ ಮುಖಂಡರು ಈ ಅದ್ದೂರಿ ಸ್ವಾಗತ ಕಾರ್ಯಕ್ರಮದಲ್ಲಿ ಸಾಥ್ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ